ಸಾರಾಂಶ
- ಹೊನ್ನಾಳಿಯಲ್ಲಿ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿರಿಯರಿಗಾಗಿ ಅವರ ಸಂಧ್ಯಾಕಾಲದಲ್ಲಿ ಬೇಕಾಗುವ ಸಾಲ ಮತ್ತು ಅವರ ಆರ್ಥಿಕ ಶಕ್ತಿ ವೃದ್ದಿಸುವ ಉದ್ದೇಶದಿಂದ ಹೊನ್ನಾಳಿ ತಾಲೂಕಿನಲ್ಲಿ 2016ರಲ್ಲಿ ತಾಲೂಕು ಹಿರಿಯ ನಾಗರಿಕರ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ. ಆದರೆ ಹೆಚ್ಚಿನ ಷೇರುದಾರರ ಕೊರತೆಯಿಂದ ಆರ್ಥಿಕ ಸಬಲತೆ ಇಲ್ಲದೇ ಸಂಘ ನಿಧಾನಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಷೇರುದಾರರನ್ನು ಹೊಂದಬೇಕಾಗಿದೆ ಎಂದು ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬೆನಕನಹಳ್ಳಿ ಪಿ. ವೀರಪ್ಪ ಹೇಳಿದರು.ಮಂಗಳವಾರ ಹಳೇ ಆಸ್ಪತ್ರೆ ಕಟ್ಟಡಲ್ಲಿರುವ ಸಂಘದ ಕಚೇರಿಯಲ್ಲಿ ಹಿರಿಯ ನಾಗರಿಕರ ಸಹಕಾರ ಸಂಘದ 2023-2024ನೇ ಸಾಲಿನ ಸರ್ವ ಸದಸ್ಯರ 9ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಂಘಗಳು ಆತ್ಯಂತ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಲು ಮೊದಲು ಆರ್ಥಿಕ ಸಂಪನ್ಮೂಲಗಳ ಆವಶ್ಯಕತೆ ಇರುತ್ತದೆ. ಹಣ ಇದ್ದಾಗ ಮಾತ್ರ ಗ್ರಾಹಕರೂ ಹೆಚ್ಚಿನ ರೀತಿಯಲ್ಲಿ ಸಾಲ ಪಡೆಯುವುದು, ಠೇವಣಿಗಳನ್ನು ಇಡುವುದು ಮುಂತಾದ ರೀತಿಯ ಆರ್ಥಿಕ ವ್ಯವಹಾರಗಳು ನಡೆಸುತ್ತಾರೆ. ಈ ರೀತಿ ವ್ಯವಹಾರಗಳು ನಡೆದಾಗ ಸಹಜವಾಗಿ ತಮ್ಮ ಸಹಕಾರಿ ಸಂಘದ ಆರ್ಥಿಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕರ ಸಹಕಾರ ಸಂಘದ ಅಧ್ಯಕ್ಷ ಎ.ಜಿ. ಹನುಮಂತಪ್ಪ ಮಾತನಾಡಿ, ಸಭೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರೆ ಸಾಲದು. ಜೊತೆಗೆ ಸಂಘದ ಪರಿಸ್ಥತಿಗಳನ್ನು ಆರ್ಥ ಮಾಡಿಕೊಂಡು ಸಂಘದ ಆರ್ಥಿಕ ಸಬಲತೆಗೆ ಎಲ್ಲರೂ ಕೈ ಜೋಡಿಸಬೇಕು. ಉತ್ತಮ ಸಲಹೆ ಮತ್ತು ಸಹಕಾರಗಳನ್ನು ನೀಡಬೇಕು. ಸಂಘ ಅರಂಭಿಸಲು ಸಹಕರಿಸಿದ ಹಾಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರಿಗೆ ಸಂಘದ ಪರವಾಗಿ ಅಭಿನಂದಿಸುತ್ತೇವೆ. 2024ರ ಮಾರ್ಚ್ 31ಕ್ಕೆ 235 ಸದಸ್ಯರಿದ್ದು, ಅವರಿಂದ ಸಂಗ್ರಹವಾದ ಷೇರು ಬಂಡವಾಳ ₹1.87 ಲಕ್ಷವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಿರೇಕಲ್ಮಠದ ರೈತ ಮುಖಂಡ ಬಸವರಾಜಪ್ಪ ಅವರು ರೈತ ಗೀತೆ ಹಾಡಿದರು. ಪಿ.ವೀರಪ್ಪ ಸ್ವಾಗತಿಸಿ, ರೈತ ಮುಖಂಡ ಬಸಪ್ಪ ವರದಿ ವಾಚನ ಮಾಡಿದರು. ಉಪಾಧ್ಯಕ್ಷ ಎಚ್.ಪಿ.ಗುರುಮೂರ್ತಿ, ಎಂ.ಬಾಬು, ಎಚ್.ಎಂ. ಚಂದ್ರಕುಮಾರ್, ದೊಡ್ಡಹಾಲೇಶ್ಪ, ಡಿ.ಶೇಖರಪ್ಪ, ಜಿ.ಎಸ್. ಬಸಪ್ಪ, ಗೌರಮ್ಮ, ಮೀನಾಕ್ಷಮ್ಮ, ಬಿದರಗಡ್ಡೆ ಚಂದ್ರಪ್ಪ, ಅನೇಕ ಹಿರಿಯ ನಾಗರೀಕರು, ಸಂಘದ ಕಾರ್ಯದರ್ಶಿ ಕೆ.ಎಸ್. ಸಿದ್ದಬಸಪ್ಪ ಇದ್ದರು.- - - -24ಎಚ್.ಎಲ್.ಐ2:
ಹೊನ್ನಾಳಿಯಲ್ಲಿ ಮಂಗಳವಾರ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿರುವ ಹಿರಿಯ ನಾಗರಿಕರ ಸಹಕಾರ ಸಂಘದ ಕಚೇರಿಯಲ್ಲಿ ಹಿರಿಯ ನಾಗರಿಕರ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ನಡೆಯಿತು.