ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2008ರಲ್ಲಿ ರಾಜ್ಯದ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪನೆಯಾದ ನಿಗಮದಲ್ಲಿ ಒಂದಲ್ಲ ಒಂದು ಸಮಸ್ಯೆಗಳ ಎದುರಾಗುತ್ತಿದ್ದು, ಇದೀಗ ಬರೋಬ್ಬರಿ ₹187ಕೋಟಿ ಸಮುದಾಯದ ಅಭಿವೃದ್ಧಿಗೆ ಹಣ ಅವ್ಯವಹಾರದ ಆರೋಪ ಅತ್ಯಂತ ಗಂಭೀರವಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್ಐಟಿಗೆ ವಹಿಸಿದೆ. ಆದರೂ ಪ್ರಕರಣ ಸಮರ್ಪಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವುದೇ ಎಂಬ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆ ಪ್ರಕರಣ ಸಿಬಿಐ ತನಿಖೆಗೊಳಪಡಿಸಿದರೆ, ಅದರಲ್ಲಿ ಭಾಗಿಯಾದ ಎಷ್ಟೆ ಪ್ರಭಾವಿಗಳಿದ್ದರೂ ಶಿಕ್ಷೆಯಾಗುತ್ತದೆ. ಸುಮಾರು ವರ್ಷಕ್ಕೆ ₹600 ಕೋಟಿಯವರೆಗೆ ಅನುದಾನ ಲಭ್ಯ ಆಗುತ್ತಿದ್ದು, ಸಮುದಾಯದ ಫಲಾನುಭವಿಗಳಿಗೆ ತಲುಪಬೇಕಿದ್ದ ಹಣ ಸರ್ಕಾರದ ಪ್ರತಿನಿಧಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.ಈ ಹಗರಣದಿಂದ ನಿಗಮದ ಒಬ್ಬ ಅಧಿಕಾರಿ ಆತ್ಮಹತ್ಯೆಗೂ ಕಾರಣವಾಗಿದೆ. ಈ ಹಗರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದ್ದು ಸರ್ಕಾರ ಇದಕ್ಕೆ ಆಸ್ಪದ ಕೊಡದೇ ಹಗರಣದಲ್ಲಿ ಭಾಗಿಯಾದ ಸಚಿವ, ಅಧಿಕಾರಿಗಳು, ನಿಗಮದ ಅಧ್ಯಕ್ಷರು ಸೇರಿ ಎಲ್ಲರ ವಿರುದ್ಧವೂ ಸೂಕ್ತ ಕ್ರಮ ವಹಿಸಲು ಸಿಬಿಐ ತನಿಖೆಗೆ ಪ್ರಕರಣ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ರಮೇಶ ನಾಯಕ, ರಾಮಕೃಷ್ಣ ನಾಯಕ ಪತ್ರಿಕಾಗೋಷ್ಠಿಯಲ್ಲಿದ್ದರು.