ಸಾರಾಂಶ
ಸಂವಿಧಾನದತ್ತ ನೀಡಿರುವ ಹಕ್ಕುಗಳು ಅಲ್ಪಸಂಖ್ಯಾತರಿಗೂ ದೊರೆಯಬೇಕು.
ಹೊಸಪೇಟೆ: ಜ್ಞಾನವ್ಯಾಪಿ ಮಸೀದಿಯಲ್ಲಿ ಒಳನುಸುಳುವಿಕೆ ಸರಿಯಲ್ಲ. ಪೂಜಾಸ್ಥಳಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಾತ್ಯತೀತ ನೆಲೆಗಟ್ಟಿನ ಮೇಲೆ ಮಂದಿರ, ಮಸೀದಿಗಳನ್ನು ಆಗಿನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿವೆ. ಇದರಿಂದ ಸಮಾಜದಲ್ಲಿ ಕೋಮು ಸಾಮರಸ್ಯ ಹಾಳಾಗುತ್ತಿದೆ. ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಸಾಮರಸ್ಯ ಹಾಳಾಗುತ್ತಿದೆ. ಪೂಜಾ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಪ್ರಾರ್ಥನಾ ಮಂದಿರಗಳಿಗೆ ನುಸುಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಮಸೀದಿ ಕೆಡವಲಾಗಿದೆ. ಅಲ್ಲಿನ ಸರ್ಕಾರ ಕೋರ್ಟ್ನಲ್ಲಿ ಮೊಕದ್ದಮೆ ಇದ್ದರೂ ಕೆಡವಿ ಹಾಕಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಕೂಡಲೇ ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ಮತ್ತು ಅಕ್ರಮವಾಗಿ ಮಸೀದಿ ಮತ್ತು ದರ್ಗಾಗಳಿಗೆ ನುಗ್ಗಿ ದಾಂಧಲೆ ಮಾಡುವವರ ವಿರುದ್ಧ ಸರ್ಕಾರಗಳು ಕ್ರಮಜರುಗಿಸಬೇಕು. ಸಂವಿಧಾನದತ್ತ ನೀಡಿರುವ ಹಕ್ಕುಗಳು ಅಲ್ಪಸಂಖ್ಯಾತರಿಗೂ ದೊರೆಯಬೇಕು. ದೇಶದಲ್ಲಿ ಎಲ್ಲರೂ ತೆರಿಗೆ ಕಟ್ಟುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ತೆರಿಗೆ ವಿಷಯದಲ್ಲೂ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸಂವಿಧಾನ ವಿರೋಧಿ ಹೇಳಿಕೆ ನೀಡುವವರು ಹಾಗೂ ಕೋಮು ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ನಿಯಾಜಿ, ನಜೀರ್ ಖಾನ್, ಸಲೀಂ ಬಾಷಾ, ಇರ್ಫಾನ್ ಕಟಗಿ, ನೂರ್ ಅಹಮದ್ ಮತ್ತಿತರರಿದ್ದರು. ಪಟ್ಟಣ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.