ಸಾರಾಂಶ
ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರ್ಕಾರದ ಬಳಿ ಅಗತ್ಯ ಜಮೀನನ್ನು ಅಥವಾ ನಿವೇಶನ ಕೇಳಿದರೆ ಭೂಮಿ ಲಭ್ಯವಿಲ್ಲ ಎಂದು ಬೇಜವಾಬ್ದಾರಿ ಉತ್ತರ ಸಿಗುತ್ತದೆ
ಕೊಪ್ಪಳ: ಭಾಗ್ಯನಗರದಲ್ಲಿ ದುಡಿಯುವ ಜನರಿಗೆ ನಿವೇಶನ ಒದಗಿಸಲು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪಪಂಗೆ ತೆರಳಿ ಧರಣಿ ನಡೆಸಿ ಪಪಂ ಮುಖ್ಯಾಧಿಕಾರಿ ಸುರೇಶ್ ಬಬ್ಲದ್ ಗೆ ಮನವಿ ಸಲ್ಲಿಸಿದರು.
ನಂತರ ಪ್ರತಿಭಟನಾಕಾರರು ಮಾತನಾಡಿ, ಕೊಪ್ಪಳ ತಾಲೂಕಿನ ಭಾಗ್ಯ ನಗರದಲ್ಲಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ದುಡಿಯುವ ಕಾರ್ಮಿಕರು. ಬಡ ರೈತ ಕಾರ್ಮಿಕರಿಗೆ ಇಂದಿಗೂ ನಿವೇಶನ ಇರುವುದಿಲ್ಲ. ಆದ್ದರಿಂದ ನಾವು ನೀಡುವ ವಸತಿ ರಹಿತರ ಅರ್ಜಿ ಸ್ವೀಕರಿಸಿ ಮತ್ತು ಪರಿಶೀಲನೆ ಮಾಡಿ ತಾವುಗಳು ತಮ್ಮ ಕಾರ್ಯಾಲಯದಿಂದ ಭೂಮಿ ಖರೀದಿ ಮಾಡಿ ಬಡ ಕಾರ್ಮಿಕರಿಗೆ, ಬಡ ರೈತರಿಗೆ, ಕೃಷಿ ಕಾರ್ಮಿಕರಿಗೆ, ದೇವದಾಸಿ ಮಹಿಳೆಯರಿಗೆ, ಹಮಾಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಹಲವಾರು ದುಡಿಯುವ ವರ್ಗದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ನಾವು ನೀಡಿರುವ ಅರ್ಜಿ ಪರಿಶೀಲನೆ ಮಾಡಿ, ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ನೀಡಬೇಕು ಎಂದರು.ನಾವು ನೀಡಿರುವ ಅರ್ಜಿ ಪರಿಶೀಲನೆ ಮಾಡಿ ಜಿಲ್ಲಾಡಳಿತ, ತಾಲೂಕಾಡಳಿತಕ್ಕೆ ನಮ್ಮ ಸಂಘಕ್ಕೆ ವರದಿ ನೀಡಲು ನಮ್ಮ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಗೆ ನೀಡಬೇಕೆಂದರು.
ಸರ್ಕಾರವು ಆಪ್ತ ಸಂಘ ಸಂಸ್ಥೆಗಳು, ಮಠ ಮಂದಿರಗಳು, ಹಾಗೂ ವ್ಯಕ್ತಿಗಳಿಗೆ ಈ ನೆಲದ ಕಾನೂನು ಮೀರಿ ಸರ್ಕಾರಿ ಭೂಮಿ ಹಂಚಿಕೆ ಮಾಡುತ್ತದೆ. ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರ್ಕಾರದ ಬಳಿ ಅಗತ್ಯ ಜಮೀನನ್ನು ಅಥವಾ ನಿವೇಶನ ಕೇಳಿದರೆ ಭೂಮಿ ಲಭ್ಯವಿಲ್ಲ ಎಂದು ಬೇಜವಾಬ್ದಾರಿ ಉತ್ತರ ಸಿಗುತ್ತದೆ. ಹೀಗಾಗಿ ನಮ್ಮ ವಸತಿ ಕನಸು ಕಮರುತ್ತಿದ್ದು ಸದ್ಯ ನಮ್ಮ ಕರ್ನಾಟಕದಲ್ಲಿ 37 ಲಕ್ಷ ಗಾಯರಾಣ, ಸರ್ಕಾರದ ಭೂಮಿ ಲಭ್ಯವಿರುತ್ತದೆ ನಿವೇಶನ ರಹಿತ ಮತ್ತು ವಸತಿ ರಹಿತರಿಗೆ ಭಾಗ್ಯನಗರ ಪ್ರದೇಶದಲ್ಲಿ ನಿವೇಶನ ಮತ್ತು ವಸತಿ ಕಲ್ಪಿಸಿಕೊಡಬೇಕು ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ಸುರೇಶ್ ಜಿ.ಬಬ್ಲದ, ಪಪಂಯಲ್ಲಿ ವಸತಿ ರಹಿತರಿಗೆ ಹೊಲ ಖರೀದಿಸಲು ನಿರ್ಣಯ ಕೈಗೊಳ್ಳಲಾಗಿದ್ದು. ಆದರೆ ಸರ್ಕಾರದ ದರದಂತೆ ಎಕರೆಗೆ ₹13 ಲಕ್ಷ ನಿಗದಿಪಡಿಸಿದೆ. ಆದರೆ ಭಾಗ್ಯನಗರದ ಸುತ್ತ ಒಂದರಿಂದ ಒಂದೂವರೆ ಕೋಟಿ ಹೇಳುತ್ತಿದ್ದಾರೆ. ಹೀಗಾಗಿ ಹೊಲ ಖರೀದಿಸಲು ವಿಳಂಬವಾಗುತ್ತಿದೆ. ನಿಮ್ಮ ಮನವಿ ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗ ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದು ಹೇಳಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಎಸ್.ಎ. ಗಫಾರ್ , ಕಾರ್ಯದರ್ಶಿ ತುಕಾರಾಮ್ ಬಿ.ಪಾತ್ರೋಟಿ, ಜಿಲ್ಲಾ ಮುಖಂಡ ಹುಲಗಪ್ಪ ಅಕ್ಕಿರೊಟ್ಟಿ, ಜಿಲ್ಲಾ ಮುಖಂಡ ಏ.ಎಲ್.ತಿಮ್ಮಣ್ಣ, ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ, ಗೈಬು ಸಾಬ್ ಮಾಳೆಕೊಪ್ಪ, ನಾಗರಾಜ್, ಜಗದೀಶ್ ಕಟ್ಟಿಮನಿ, ಹನುಮಂತ ವಡ್ಡರ್, ಮಂಜುನಾಥ್ ವಡ್ಡರ್, ಅಮೀರ್ ಬಾಷಾ, ನವನಗರ ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್, ಗಂಗಾಧರ ಪೂಜಾರ್, ಬೀರಪ್ಪ, ಧರ್ಮಣ್ಣ ಬೊಮ್ಮನಾಳ, ನಾಗರಾಜ್ ಮುಂಡರಗಿ, ಸಾಧಿಕ್ ಬಳಿಗಾರ ಮುಂತಾದವರು ಭಾಗವಹಿಸಿದ್ದರು.