ಸಾರಾಂಶ
ಎಂಡಿಎಂ ನಲ್ಲಿ ಮಕ್ಕಳ ಮತ್ತು ಅಡುಗೆ ಸಿಬ್ಬಂದಿ ಹಾಜರಾತಿ ದಾಖಲಿಸುವ ವೇಳೆ ಬದಲಾವಣೆ ಮಾಡಬೇಕು.
ಸಂಡೂರು: ಪಿಎಂ ಪೋಷಣ್ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಇಂತಹ ಜನಪರ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕೆಲ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಕೋರಿ ರಾಜ್ಯ ಸರ್ಕಾರಿ ಹಿರಿಯ, ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಘಟಕದ ಹಲವು ಮುಖಂಡರು ಗುರುವಾರ ತಾಪಂ ಇಒ ಎಚ್.ಷಡಾಕ್ಷರಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕೆ.ಬಿ. ಪ್ರಕಾಶ್ ಮನವಿ ಸಲ್ಲಿಸಿ, ಈ ಮೊದಲು ಶಾಲೆಗಳಲ್ಲಿ ಬಿಸಿಯೂಟ ಮಾತ್ರ ತಯಾರು ಮಾಡಲಾಗುತ್ತಿತ್ತು. ಇದೀಗ ಹಾಲು ಮತ್ತು ಮೊಟ್ಟೆ ಬೇಯಿಸುವುದು ಮತ್ತು ರಾಗಿ ಮಾಲ್ಟ್ ತಯಾರು ಮಾಡಬೇಕಿದೆ. ಆದ್ದರಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಿಲೆಂಡರ್ಗಳನ್ನು ಹೆಚ್ಚುವರಿಯಾಗಿ ಸರಬರಾಜು ಮಾಡಬೇಕು. ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಕೊರತೆಯಿಲ್ಲದೆ ಸರಬರಾಜು ಮಾಡಬೇಕು. ಎಂಡಿಎಂ ನಲ್ಲಿ ಮಕ್ಕಳ ಮತ್ತು ಅಡುಗೆ ಸಿಬ್ಬಂದಿ ಹಾಜರಾತಿ ದಾಖಲಿಸುವ ವೇಳೆ ಬದಲಾವಣೆ ಮಾಡಬೇಕು. ಇದನ್ನು ಮಧ್ಯಾಹ್ನ ೪ ಗಂಟೆಗೆ ನಿಗದಿ ಮಾಡಬೇಕು ಎಂದರು.ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ ಖರೀದಿಗೆ ಮಾರುಕಟ್ಟೆ ದರಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಬೇಕು. ಬಿಸಿಯೂಟದ ಅನುದಾನವನ್ನು ಪ್ರತಿ ತಿಂಗಳು ಮುಂಗಡವಾಗಿ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಎಂಐಎಸ್ ಆಯಾ ಕ್ಲಸ್ಟರ್ ಸಿಆರ್ಪಿಗಳಿಂದ ಕಚೇರಿಗೆ ತಲುಪಿಸಲು ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪಿ.ಎಂ. ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರಾದ ಪಿ ಶ್ರೀಧರಮೂರ್ತಿ, ಸಂಘದ ಖಜಾಂಚಿ ಎಸ್. ಮಲ್ಲಿಕಾರ್ಜುನ, ಸಿದ್ದಣ್ಣ ಯಳವಾರ, ಮುಖಂಡರಾದ ಪ್ರೇಮಾ ಕೆ, ಕಲ್ಪನಾ ಮುಂತಾದವರು ಉಪಸ್ಥಿತರಿದ್ದರು.ಸಂಡೂರಿರು ತಾಲೂಕು ಘಟಕದ ಮುಖಂಡರು ತಮ್ಮ ಬೇಡಿಕೆಗಳ ಮನವಿಯನ್ನು ತಾಪಂ ಇಒ ಷಡಾಕ್ಷರಯ್ಯಗೆ ಸಲ್ಲಿಸಿದರು.