ಸಾರಾಂಶ
ಕನಕಗಿರಿ: ಈಚೆಗೆ ಗಂಗಾವತಿಯಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾದ ಕೇಸ್ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.ಸಂಘಟನೆ ಜಿಲ್ಲಾ ಸಹ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಗಂಗಾವತಿ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣೇಶಮೂರ್ತಿ ವಿಸರ್ಜಿಸುವಾಗ ಮೆರವಣಿಗೆ ನಡೆಸುವುದು ರೂಢಿ. ಕಾರ್ಯಕ್ರಮದಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾರ್ಗದಲ್ಲಿ ಬರುವ ಪೂಜನೀಯ ಸ್ಥಳಗಳಲ್ಲಿ ಆರತಿ ಮಾಡಲಾಗುತ್ತದೆ. ಇದನ್ನೇ ಟಾರ್ಗೆಟ್ ಮಾಡಿರುವ ಕೆಲ ಅಧಿಕಾರಿಗಳು ಐವರು ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ರೀತಿ ಪೊಲೀಸ್ ಅಧಿಕಾರಿಗಳು ದುರುದ್ದೇಶದಿಂದ ಹಿಂದೂ ಕಾರ್ಯಕರ್ತರ ವಿರುದ್ಧ ಗಂಗಾವತಿ ಮಾತ್ರವಲ್ಲ ರಾಜ್ಯದ ನಾನಾ ಕಡೆಗಳಲ್ಲಿ ಕೇಸ್ ದಾಖಲಿಸುವ ಪ್ರಯತ್ನ ನಡೆದಿದೆ. ಈ ಹಿಂದೆ ಇಲ್ಲದ ಕೇಸ್ ಈಗ ಏಕಾಏಕಿ ದಾಖಲಿಸಿರುವ ಉದ್ದೇಶವೇನು? ಹನುಮನ ನಾಡಿನಲ್ಲಿ ಜೈ ಶ್ರೀರಾಮ್, ಭಾರತ ಮಾತಾಕಿ ಜೈ ಘೋಷಣೆ ಕೂಗುವುದರಲ್ಲಿ ತಪ್ಪೇನಿದೆ? ಮೆರವಣಿಗೆಯುದ್ದಕ್ಕೂ ಪೊಲೀಸರು ಮಾಡಿರುವ ವಿಡಿಯೋಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ತಹಶೀಲ್ದಾರ ವಿಶ್ವನಾಥ ಮುರುಡಿ ಮನವಿ ಸ್ವೀಕರಿಸಿದರು.ಪ್ರಮುಖರಾದ ಪೃಥ್ವಿಕುಮಾರ ಮ್ಯಾಗೇರಿ, ಕಿರಣಕುಮಾರ ಕೆ., ಸಂಪತಕುಮಾರ, ಶ್ರೀನಿವಾಸ ಗಂಗಾಮತ, ಸೂರಜ್, ಹನುಮೇಶ ಡಿಶ್, ಪ್ರಹ್ಲಾದರೆಡ್ಡಿ ಮಹಲಿನಮನಿ, ಸೋಮಶೇಖರರೆಡ್ಡಿ ಇದ್ದರು.