ಸಾರಾಂಶ
ಸರ್ಕಾರದ ಕರಾಳ ಶಾಸನಗಳ ವಿರುದ್ಧ ಸೆ. 3 ರಂದು ಬೃಹತ್ ಪ್ರತಿಭಟನಾ ಹೋರಾಟದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ, ಶೃಂಗೇರಿಸರ್ಕಾರಗಳ ರೈತ, ಜನವಿರೋಧಿ ಕಾಯ್ದೆಗಳು, ಅರಣ್ಯ ಇಲಾಖೆ ದೌರ್ಜನ್ಯ, ದಬ್ಬಾಳಿಕೆಯಿಂದ ಮಲೆನಾಡಿನ ಜನರ ಬದುಕು ಅತಂತ್ರವಾಗಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬಳೂರು ರಾಮಕೃಷ್ಣ ರಾವ್ ಆರೋಪಿಸಿದರು.
ಪಟ್ಟಣದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ಸರ್ಕಾರದ ಕರಾಳ ಶಾಸನಗಳ ವಿರುದ್ಧ ಸೆ. 3 ರಂದು ಆಯೋಜಿಸಿರುವ ಬೃಹತ್ ಪ್ರತಿಭಟನಾ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಲೆತಲಾಂತರದಿಂದ ಈ ಭಾಗದಲ್ಲಿ ಜನರು ಪರಿಸರದೊಂದಿಗೆ ಹೊಂದಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಆದರೆ ಸರ್ಕಾರದ ಕರಾಳ ಶಾಸನಗಳು, ಅರಣ್ಯ ಇಲಾಖೆ ದೌರ್ಜನ್ಯ, ದಬ್ಬಾಳಿಕೆಗಳು ಇಲ್ಲಿನ ಜನರ ನಿದ್ದೆಗೆಡಿಸುತ್ತಿದೆ.ಸಣ್ಣಪುಟ್ಟ ಸಾಗುವಳಿ, ಒತ್ತುವರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೀಗ ಸರ್ಕಾರದ ಕಾಯ್ದೆಗಳು, ಅರಣ್ಯ ಇಲಾಖೆ ನೀತಿಗಳು ಇಲ್ಲಿನ ಜನರನ್ನು ಬೀದಿಗೆ ತಂದು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 2002 ರಲ್ಲಿ ಅಂದಿನ ಜಿಲ್ಲಾಧಿಕಾರಿ ಅವೈಜ್ಞಾನಿಕ, ಅನಾಗರಿಕ ಆದೇಶ ಮಾಡಿ 25 ಸಾವಿರ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿರುವುದರಿಂದ ಕಂದಾಯ ಭೂಮಿಯೇ ಇಲ್ಲದಂತಾಗಿದೆ. ಈ ಭಾಗದ ರೈತರು, ನಿವೇಶನ ರಹಿತರು, ಕಾರ್ಮಿಕರು ನೆಲೆ, ಜಮೀನು ಕಳೆದುಕೊಳ್ಳುವ ಭೀತಿ ಉಂಟಾಗಿದೆ.
ನಮ್ಮ ಸಂಘಟನೆ 2002 ರ ಜಿಲ್ಲಾದಿಕಾರಿಗಳ ಆದೇಶ ವಾಪಸ್ ಪಡೆದು 25 ಸಾವಿರ ಎಕರೆ ಕಂದಾಯ ಭೂಮಿಯನ್ನು ವಾಪಾಸ್ ಪಡೆಯಲು ಬಾಕಿ ಇರುವ 50,53,57,94 ಸಿ ಅರ್ಜಿಗಳನ್ನು ಯಾವುದೇ ಷರತ್ತಿಲ್ಲದೆ ಮಂಜೂರು ಮಾಡುವಂತೆ, ಈಗಾಗಲೇ ವಿತರಿಸಿರುವ ಸಾಗುವಳಿ ಚೀಟಿಗಳಿಗೆ ಪಹಣಿ ಹಾಕುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ನಡೆಸಲಾಗುವುದು.ಸೆ. 3 ರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಶೃಂಗೇರಿ ಬಸ್ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲೂಕು ಕಚೇರಿ ಎದುರು ಸಮಾವೇಶಗೊಂಡು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಸಭೆಯಲ್ಲಿ ತನಿಕೋಡು ಮಂಜುನಾಥ್, ಕೆ.ಎಂ.ಶ್ರೀನಿವಾಸ್, ತ್ಯಾಗರಾಜ್, ಅಂಗುರ್ಡಿ ದಿನೇಶ್, ಬಿ.ಜಿ.ಪ್ರಸನ್ನ, ಆಗುಂಬೆ ಗಣೇಶ್ ಹೆಗ್ಡೆ,ಮತ್ತಿತರರು ಉಪಸ್ಥಿತರಿದ್ದರು.
21 ಶ್ರೀ ಚಿತ್ರ 3-ಶೃಂಗೇರಿ ಪಟ್ಟಣದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸೆ. 3 ರಂದು ನಡೆಸಲು ಉದ್ದೇಶಿಸಿರುವ ಬೃಹತ್ ಪ್ರತಿಭಟನೆ ಕುರಿತ ಪೂರ್ವಭಾವಿ ಸಭೆ ನಡೆಸಿತು.