ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಲು ಎಲ್ಲೆಡೆ ಭರದ ಸಿದ್ಧತೆಗಳು ನಡೆದಿವೆ.

ಸಂಡೂರು: ಜೂ.೫ರಂದು ವಿಶ್ವದಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಂದು ಗಿಡಗಳನ್ನು ನಾಟಿ ಮಾಡಿ, ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಲು ಎಲ್ಲೆಡೆ ಭರದ ಸಿದ್ಧತೆಗಳು ನಡೆದಿವೆ.

ಜೂನ್ ತಿಂಗಳಲ್ಲಿ ಮಳೆಗಾಲವೂ ಆರಂಭವಾಗುವುದರಿಂದ ಈ ಅವಧಿಯಲ್ಲಿ ಗಿಡಗಳನ್ನು ನಾಟಿ ಮಾಡಿದರೆ, ಅವುಗಳು ಮಳೆ ನೀರಿನಿಂದ ಸೊಂಪಾಗಿ ಬೆಳೆಯಲು ಅನುಕೂಲವಾಗಲಿದೆ. ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಶಾಲಾ ಕಾಲೇಜು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಆವರಣ, ರಸ್ತೆ ಬದಿಯಲ್ಲಿ, ಸಾರ್ವಜನಿಕ ಖಾಲಿ ಸ್ಥಳಗಳಲ್ಲಿ, ಹೊಲ ಗದ್ದೆಗಳಲ್ಲಿ, ಅರಣ್ಯ ಭಾಗದಲ್ಲಿ ನೆಡುತೋಪು ನಿರ್ಮಾಣಕ್ಕಾಗಿ ಅನುಕೂಲವಾಗಲೆಂದು ಅರಣ್ಯ ಇಲಾಖೆ ವತಿಯಿಂದ ಅವರ ನರ್ಸರಿಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

೪೧೫೦೦ ಸಸಿಗಳು ನಾಟಿಗೆ ಸಿದ್ಧ:

ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಿತರಿಸಲು ತಾಲೂಕಿನ ಉತ್ತರ ಅರಣ್ಯ ವಲಯದಿಂದ ೨೦,೦೦೦ ಹಾಗೂ ದಕ್ಷಿಣ ಅರಣ್ಯ ವಲಯದಿಂದ ೨೧,೫೦೦ ಸಸಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಚಿಕ್ಕ ಗಾತ್ರದ ಸಸಿಗಳನ್ನು ₹೩ರಂತೆ ಹಾಗೂ ಸ್ವಲ್ಪ ದೊಡ್ಡ ಗಾತ್ರದ ಸಸಿಗಳನ್ನು ₹೬ರಂತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದೆಂದು ತಾಲೂಕಿನ ಉತ್ತರ ಹಾಗೂ ದಕ್ಷಿಣ ವಲಯ ಅರಣ್ಯಾಧಿಕಾರಿಗಳಾದ ಬಿ.ಎಸ್. ಮಂಜುನಾಥ್ ಹಾಗೂ ದಾದಾ ಖಲಂದರ್ ಕನ್ನಡಪ್ರಭಕ್ಕೆ ತಿಳಿಸಿದರು.

ತಾಲೂಕು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಲಭ್ಯವಿರುವ ವಿವಿಧ ಜಾತಿಯ ಸಸಿಗಳ ವಿವರ:

ನುಗ್ಗೆ, ತೇಗ, ನಿಂಬೆ, ಬೇವು, ಪೇರಳೆ, ಸಿಲ್ವರ್ ಓಕ್, ಶ್ರೀಗಂಧ, ಮಹಾಗನಿ, ಕರಿಬೇವು, ರಕ್ತಚಂದನ, ಹುಣಸೆ, ಬಿದಿರು, ಹೊಂಗೆ, ಬಿಲ್ವಪತ್ರೆ, ಗಾಳಿಮರ, ಸೀತಾಫಲ, ಅಶೋಕ ಹಾಗೂ ಹಲಸಿನ ಸಸಿಗಳನ್ನು ತಾಲೂಕಿನ ಉತ್ತರ ಹಾಗೂ ದಕ್ಷಿಣ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ನರ್ಸರಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ವಿಶ್ವಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಡೆ ಭರದ ಸಿದ್ಧತೆ ನಡೆದಿದೆ. ಪರಿಸರ ಸಂಬಂಧಿ ತೊಂದರೆಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿರುವುದರಿಂದ ಜನತೆಯಲ್ಲಿಯೂ ಉತ್ತಮ ಪರಿಸರ ನಿರ್ಮಾಣದ ಅಗತ್ಯತೆಯ ಕುರಿತು ಜಾಗೃತಿ ಮೂಡುತ್ತಿದೆ. ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯವಿದೆ.