ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್

| Published : May 22 2025, 01:14 AM IST

ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸಿನಿಂದ ಆರಂಭವಾಗುವ ಶಿರಸಿ- ಹಾವೇರಿ ಹೆದ್ದಾರಿ ಶಿರಸಿ ವ್ಯಾಪ್ತಿಯಲ್ಲಿ 28 ಹೆಕ್ಟೇರ್ ಹಾಗೂ ಹಾವೇರಿ ವ್ಯಾಪ್ತಿಯಲ್ಲಿ 2 ಹೆಕ್ಟೇರ್ ಅರಣ್ಯ ಜಾಗದಲ್ಲಿ ಹಾಯ್ದು ಹೋಗಿದೆ. ಅಗಲೀಕರಣ ಸಂದರ್ಭದಲ್ಲಿ ಮರಗಳ ಕಟಿಂಗ್ ಮಾಡಬೇಕಾಗಿದೆ. ಅದಕ್ಕೀಗ ಅನುಮತಿ ಸಿಕ್ಕಿದೆ

ಮಾರುತಿ ಶಿಡ್ಲಾಪೂರಹಾನಗಲ್ಲ: ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 766 ಇ ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಬೇಕಾದ ಶಿರಸಿ- ಹಾವೇರಿ ಹೆದ್ದಾರಿಯ ಕಾಮಗಾರಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಏಳೆಂಟು ತಿಂಗಳ ನಂತರ ಕಾಮಗಾರಿ ನಡೆಸಲು ಅನುಮತಿ ಸಿಕ್ಕಿದೆ.ತಾಲೂಕಿನ ನಾಲ್ಕರ ಕ್ರಾಸಿನಿಂದ ಆರಂಭವಾಗುವ ಶಿರಸಿ- ಹಾವೇರಿ ಹೆದ್ದಾರಿ ಶಿರಸಿ ವ್ಯಾಪ್ತಿಯಲ್ಲಿ 28 ಹೆಕ್ಟೇರ್ ಹಾಗೂ ಹಾವೇರಿ ವ್ಯಾಪ್ತಿಯಲ್ಲಿ 2 ಹೆಕ್ಟೇರ್ ಅರಣ್ಯ ಜಾಗದಲ್ಲಿ ಹಾಯ್ದು ಹೋಗಿದೆ. ಅಗಲೀಕರಣ ಸಂದರ್ಭದಲ್ಲಿ ಮರಗಳ ಕಟಿಂಗ್ ಮಾಡಬೇಕಾಗಿದೆ. ಅದಕ್ಕೀಗ ಅನುಮತಿ ಸಿಕ್ಕಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೇ ರಸ್ತೆ ಅಗೆದು ಹಾಕಲಾಗಿತ್ತು. ಇದರಿಂದ ಸಂಚಾರಕ್ಕೆ ಸಂಚಕಾರ ತಂದೊದಗಿತ್ತು.

ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಾವೇರಿ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರನ್ನು ಶಾಸಕ ಶ್ರೀನಿವಾಸ ಮಾನೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಅರಣ್ಯ ಇಲಾಖೆಗೆ ₹17 ಕೋಟಿ ಭರಿಸಿದೆ. ಜತೆಯಲ್ಲಿ ಹೆದ್ದಾರಿಗೆ ಹೋಗುವ ಅರಣ್ಯ ಜಾಗದ ಬದಲು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಅರಣ್ಯ ಬೆಳೆಸಲು ಪ್ರತ್ಯೇಕ ಜಾಗ ನೀಡಬೇಕೆನ್ನುವ ನಿಯಮದ ಹಿನ್ನೆಲೆ ವಿಜಯಪುರದಲ್ಲಿ 50 ಎಕರೆ ನೀಡಿದೆ. ಈ ಎಲ್ಲ ಪ್ರಕ್ರಿಯೆಗಳ ನಂತರವೇ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.32 ಕಿಮೀ. ಕೆಲಸ ಬಾಕಿ ಇರುವುದರಿಂದ ಕಳೆದ 2 ವರ್ಷಗಳಿಂದ ಶಿರಸಿ- ಹಾವೇರಿ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುವಂತಾಗಿತ್ತು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸಲು ಇದೇ ಮಾರ್ಗದಲ್ಲಿ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಯ ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಪ್ರಯಾಣಿಕರ ಗೋಳು ಹೇಳತೀರದ್ದಾಗಿತ್ತು.

ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಶಿರಸಿ, ಹಾವೇರಿ ಭಾಗದ ಹಲವು ಜನಪ್ರತಿನಿಧಿಗಳ ಪ್ರಯತ್ನದ ಕಾರಣದಿಂದ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅನುಮತಿ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇನ್ನಾದರೂ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನತೆಯ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಗಮನ ಸೆಳೆಯಲಾಗಿತ್ತು: ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿ ಕುರಿತು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಈ ಭಾಗದ ಜನತೆಯ ಸಮಸ್ಯೆಗೆ ಸ್ಪಂದಿಸಿ ಅಧಿಕಾರಿಗಳು ಬೇಗನೇ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.