ಸಾರಾಂಶ
ಯಳಂದೂರು ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ರೈತ ಮರಿಸ್ವಾಮಪ್ಪ ಎಂಬವರ ಮೇಲೆ ಅರಣ್ಯ ಇಲಾಖೆಯ ವಾಚರ್ ಹಲ್ಲೆ ನಡೆಸಿದ್ದು ಇವರ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭವಾರ್ತೆ ಯಳಂದೂರು
ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ರೈತ ಮರಿಸ್ವಾಮಪ್ಪ ಎಂಬವರ ಮೇಲೆ ಅರಣ್ಯ ಇಲಾಖೆಯ ವಾಚರ್ ಹಲ್ಲೆ ನಡೆಸಿದ್ದು ಇವರ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ತಾಲೂಕಿನ ಕಾಡಂಚಿನ ಗ್ರಾಮಗಳಾದ ಕೆ. ದೇವರಹಳ್ಳಿ, ಶಿವಕಳ್ಳಿ, ಮಲಾರಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಇಲ್ಲಿನ ಸರ್ಕಾರಿ ಗೋಮಾಳದಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ತೆರಳುತ್ತಾರೆ. ಇವರು ಪ್ರತಿನಿತ್ಯ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಲಾಖೆಯ ಒಬ್ಬ ವಾಚರ್ ಕೆ.ದೇವರಹಳ್ಳಿ ಗ್ರಾಮದ ರೈತ ಮರಿಸ್ವಾಮಪ್ಪ ಎಂಬವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಖಂಡನಾರ್ಹ ವಿಷಯವಾಗಿದೆ. ರೈತರು ಅರಣ್ಯದೊಳಗೆ ತಮ್ಮ ಜಾನುವಾರುಗಳನ್ನು ಬಿಡುವುದಿಲ್ಲ. ಸರ್ಕಾರಿ ಗೋಮಾಳಗಳಲ್ಲಿ ದನ, ಹಸು, ಕರು, ಕುರಿ, ಮೇಕೆಗಳನ್ನು ಮೇಯಿಸಲು ತೆರಳುತ್ತಾರೆ. ಆದರೆ ಅರಣ್ಯ ಸಿಬ್ಬಂದಿ ಇಲ್ಲೂ ಜಾನುವಾರು ಮೇಯಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರಿದೆ. ಈ ಇಲಾಖೆಯ ವಿರುದ್ಧ ಸೂಕ್ತ ಕ್ರಮ ವಹಿಸಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದಕ್ಕೆ ಆರ್ಎಫ್ಒ ನಾಗೇಂದ್ರನಾಯಕ್ ನಮ್ಮ ಸಿಬ್ಬಂದಿಯಿಂದ ಹಲ್ಲೆಯಾಗಿದ್ದರೆ ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇನ್ನು ಮುಂದೆ ರೈತರಿಗೆ ನಮ್ಮ ಇಲಾಖೆಯಿಂದ ಯಾವುದೇ ತೊಂದರೆಯಾಗದಂತೆ ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತೇನೆ ಎಂದರು. ನಂತರ ಎಸ್ಬಿಐ ಬ್ಯಾಂಕ್ ಬಳಿ ಬಂದ ಪ್ರತಿಭಟನಾಕಾರರು ಈ ಬ್ಯಾಂಕಿನ ಶಾಖೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿಯಲ್ಲಿನ ಹಣ, ಸಾಮಾಜಿಕ ಭದ್ರತಾ ಠೇವಣಿ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇತರೆ ರೈತರಿಗೆ ಬರುವ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಈ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದ್ದರೂ ಇದನ್ನು ಧಿಕ್ಕರಿಸಲಾಗುತ್ತಿದೆ ಎಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಬ್ಯಾಂಕಿನ ವ್ಯವಸ್ಥಾಪಕರು ಈ ಬಗ್ಗೆ ಹೀಗಾಗದಂತೆ ಕ್ರಮವಹಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ ಸದಸ್ಯರಾದ ಗೌಡಹಳ್ಳಿ ಸ್ವಾಮಿ, ವೃಷಬೇಂದ್ರ, ಷಡಕ್ಷರಿ, ಶಿವರುದ್ರಪ್ಪ, ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.೧೦೦೮ವೈಎಲ್ಡಿಪಿ೦೧ ಯಳಂದೂರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಮುಂಭಾಗ ಮಂಗಳವಾರ ರೈತ ಸಂಘದ ಸದಸ್ಯರು ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.