ಸಾರಾಂಶ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅರಣ್ಯವಾಸಿಗಳ ಐತಿಹಾಸಿಕ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ಇಪ್ಪತ್ತು ಸಾವಿರಕ್ಕೂ ಅಧಿಕ ಆಕ್ಷೇಪಣಾ ಮೇಲ್ಮನವಿ ಸಲ್ಲಿಸುವ ಅಭೂತ ಪೂರ್ವ ಕಾರ್ಯಕ್ರಮ ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ಶಿರಸಿ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅರಣ್ಯವಾಸಿಗಳ ಐತಿಹಾಸಿಕ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ಇಪ್ಪತ್ತು ಸಾವಿರಕ್ಕೂ ಅಧಿಕ ಆಕ್ಷೇಪಣಾ ಮೇಲ್ಮನವಿ ಸಲ್ಲಿಸುವ ಅಭೂತ ಪೂರ್ವ ಕಾರ್ಯಕ್ರಮ ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಯಶಸ್ವಿಯಾಯಿತು.ಸರ್ಕಾರ ಪುನರ್ ಪರಿಶೀಲಿಸದೇ, ಅರ್ಜಿ ಕೇಂದ್ರಕ್ಕೆ ಸಲ್ಲಿಸಿದ ಹಿನ್ನೆಲೆ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ತಿರಸ್ಕರಿಸಿದ ಆದೇಶವನ್ನು ಪ್ರದರ್ಶಿಸುತ್ತ, ತಿರಸ್ಕರಿಸಿದ ಆದೇಶದ ಮೇಲ್ಮನವಿ ಹಿಡಿದು, ಗಟ್ಟಿ ಹೋರಾಟದ ಧ್ವನಿ ಕೇಳಿಬಂತು.
ಕಾನೂನು ಬಾಹಿರವಾಗಿ ಸುಪ್ರಿಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಿಯಮ ಉಲ್ಲಂಘಿಸಿರುವುದು ಪ್ರಸಕ್ತ ವರ್ಷದ ಫೆ. 28ರಂದು ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದು, ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಕರ್ನಾಟಕದಲ್ಲಿ ಒಟ್ಟು 2,94,489 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ 16,326 ಸಾಗುವಳಿ ಹಕ್ಕು ನೀಡಲಾಗಿದೆ. ಬಂದಿರುವ ಅರ್ಜಿಗಳಲ್ಲಿ 2,53,269 (ಶೇ.87.77) ಅರಣ್ಯವಾಸಿಗಳ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ ಎಂಬ ಅಂಶ ಮೇಲ್ಮನವಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅದರಂತೆ ರಾಜ್ಯ ಬುಡಕಟ್ಟು ಇಲಾಖೆಯ ವರದಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯಹಕ್ಕು ಕಾಯಿದೆ ಮಂಜೂರಿಗೆ ಸಂಬಂಧಪಟ್ಟಂತೆ 88,453 ಅರ್ಜಿ ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 2,867 (ಶೇ.3.2) ಅರ್ಜಿ ಸಾಗುವಳಿ ಹಕ್ಕು ದೊರಕಿದ್ದು ಇರುತ್ತದೆ. ಬಂದಿರುವ ಒಟ್ಟು ಅರ್ಜಿಗಳಲ್ಲಿ 73,859 (ಶೇ.82.76) ಅರ್ಜಿ ತಿರಸ್ಕರಿಸಿರುವ ಹಿನ್ನೆಲೆ ಪುನರ್ ಪರಿಶೀಲಿಸದೇ ಅರ್ಜಿ ತಿರಸ್ಕರಿಸದ ವರದಿಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಆಕ್ಷೇಪಣಾ ಪತ್ರದ ಮೇಲ್ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.ಹರಿದು ಬಂದ ಜನಸಾಗರ:
ಜಿಲ್ಲಾದ್ಯಂತ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನ ವಂಚಿತವಾಗುವ ಭೀತಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದಲೂ, ಅರಣ್ಯವಾಸಿಗಳು ಮಹಾಸಂಗ್ರಾಮಕ್ಕೆ ಜನಸಾಗರದಂತೆ ಹರಿದು ಬಂದಿರುವುದು ವಿಶೇಷವಾಗಿತ್ತು. ಬುಡಕಟ್ಟು ಜನಾಂಗ, ಆದಿವಾಸಿಗಳು, ಕರಾವಳಿಯ ಭಾಗದ ಮಹಿಳೆಯರು, ವೃದ್ದರೂ ಅಭಿಯಾನದಲ್ಲಿ ಭಾಗವಹಿಸಿರುವುದು ಐತಿಹಾಸಿಕ ಕಾರ್ಯಕ್ರಮವಾಯಿತು.