ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಹೊಸದಾಗಿ ಅರಣ್ಯ ಅತಿಕ್ರಮಣಕ್ಕೆ ಅವಕಾಶ ಇಲ್ಲ. ಆದರೆ, ಹಳೆಯ ಅತಿಕ್ರಮಣ ಇದ್ದೂ, ಜಿಪಿಎಸ್ ಆಗದೇ ಇದ್ದರೂ ತೆರವು ಮಾಡದೇ ಮಾನವೀಯತೆ ತೋರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.ಶನಿವಾರ ನಗರದ ಝೂ ಸರ್ಕಲ್ ಬಳಿಯ ಮಕ್ಕಳ ಉದ್ಯಾನವನದಲ್ಲಿ 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ವನ್ಯ ಜೀವಿ ಸಂರಕ್ಷಣಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಪಂ ಮತ್ತು ಜಿಪಂ ಪ್ರತಿನಿಧಿಗಳು ಇಲ್ಲದ ಕಾರಣ ಜಿಪಿಎಸ್ ಮಾಡಿದ ಅತಿಕ್ರಮಣದಾರರ ಅರ್ಜಿ ವಿಲೇವಾರಿ ಮಾಡಲು ಆಗುವುದಿಲ್ಲ ಎಂಬಸ್ಥಿತಿ ಇದೆ ಎಂಬ ಅರಿವಿದೆ. ಅರಣ್ಯ ಭೂಮಿಯಲ್ಲಿ ಹುಲ್ಲುಗಾವಲು ಪ್ರದೇಶವು ಕಡಿಮೆ ಆಗಿರುವುದು ವನ್ಯಜೀವಿಗಳ ಆಹಾರದ ಭದ್ರತೆಗೆ ಕೊರತೆ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ಆಗಬೇಕಿದೆ. ಪಾರಂಪರಿಕ ಅರಣ್ಯ ಸಂರಕ್ಷಣೆ ಆಗಬೇಕು. ಆದರೆ, ಇರುವ ಅರಣ್ಯದ ಅಂಚಿನಲ್ಲೂ ಗಿಡಗಳನ್ನು ನೆಟ್ಟು ನೆಟ್ಟು ಹುಲ್ಲುಗಾವಲು ಕೊರತೆ ಆಯಿತೇ? ಅರಣ್ಯ ಭೂಮಿಯಲ್ಲಿ ಹುಲ್ಲು ಇಲ್ಲದೇ ಕೃಷಿ ಭೂಮಿಯತ್ತ ವನ್ಯಜೀವಿಗಳು ಆಹಾರ ಹುಡುಕಿ ಬಂದವೇ ಎಂದು ನೋಡಬೇಕಾಗಿದೆ ಎಂದ ಅವರು, ವನ್ಯಜೀವಿಗಳ ಸಂರಕ್ಷಣೆ ಇಲಾಖೆ ಹಾಗೂ ಜನಸಾಮಾನ್ಯರ ಜಂಟಿ ಕರ್ತವ್ಯ ಎಂದರು.
ಅರಣ್ಯಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಮಾತನಾಡಿ, ವನ್ಯಜೀವಿ ಸಂರಕ್ಷಣೆ ಆಗಬೇಕು. ಜನರ ಸಹಭಾಗಿತ್ವದಲ್ಲಿ ದೇಶದ ಕಿರೀಟವಾದ ವನ್ಯಜೀವಿ ಸಂರಕ್ಷಣೆ ಮಾಡಲೇಬೇಕು ಎಂದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಮಾನವರಿಂದ ಪರಿಸರ ನಾಶ ಆಗುತ್ತಿದ್ದು, ಇದನ್ನು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮತ್ತಿತರರು ಇದ್ದರು. ಜಾಥಾದಲ್ಲಿ ಶಾಸಕರು, ಅಧಿಕಾರಿಗಳು, ಸಾರ್ವಜನಿಕರು, ಅರಣ್ಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.