ಗುತ್ತಿಗೆದಾರರಿಂದ ಲಂಚದ ಹಣ ಪಡೆಯುವಾಗ ವಲಯ ಅರಣ್ಯಾಧಿಕಾರಿ ಕೆ.ಎಸ್.ಸತೀಶ್ ಚಂದ್ರ ಹಾಗೂ ಹೊರ ಗುತ್ತಿಗೆ ನೌಕರ ಶೌಕತ್ ಇಬ್ಬರು ಹಣದ ಸಮೇತ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಗುತ್ತಿಗೆದಾರರಿಂದ ಲಂಚದ ಹಣ ಪಡೆಯುವಾಗ ವಲಯ ಅರಣ್ಯಾಧಿಕಾರಿ ಕೆ.ಎಸ್.ಸತೀಶ್ ಚಂದ್ರ ಹಾಗೂ ಹೊರ ಗುತ್ತಿಗೆ ನೌಕರ ಶೌಕತ್ ಇಬ್ಬರು ಹಣದ ಸಮೇತ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. 2025-26 ನೇ ಸಾಲಿನಲ್ಲಿ ಮಂಜೂರಾದ ಗುಬ್ಬಿ ಅರಣ್ಯ ವಲಯದಲ್ಲಿ ಸಿಸಿಟಿ ಅಗೆಯುವಿಕೆ ಹಾಗೂ ಬದುಗಳ ಮೇಲೆ ಅಗೇವಾ ಸಸ್ಯ ನೆಡುವ ಕಾಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿಗೆ ಉದ್ದೇಶಪೂರ್ವಕವಾಗಿ ತಡೆ ಹಿಡಿದು ಶೇಕಡಾ 30 ರಂತೆ 5 ಲಕ್ಷಕ್ಕೆ ಲಂಚ ಬೇಡಿಕೆ ಇಟ್ಟು ನಂತರ 3.50 ಲಕ್ಷ ರು. ನಲ್ಲಿ ಈಗಾಗಲೇ ಮೊದಲ ಕಂತಿನ 50 ಸಾವಿರ ಪಡೆದಿದ್ದಾರೆ. ಲಂಚ ಕೊಡಲು ಮನಸ್ಸಿಲ್ಲದ ಗುತ್ತಿಗೆದಾರ ಶಿವರಾಜ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಬಾಕಿ ಹಣಕ್ಕೆ ಬೇಡಿಕೆ ಇಟ್ಟ ಹಿನ್ನಲೆ ಗುತ್ತಿಗೆದಾರ ಶಿವರಾಜ್ ಎರಡು ಲಕ್ಷ ಹಣವನ್ನು ವಲಯ ಅರಣ್ಯಾಧಿಕಾರಿಗಳ ವಸತಿ ಗೃಹದಲ್ಲಿ ಹೊರ ಗುತ್ತಿಗೆ ನೌಕರ ಶೌಕತ್ ಮೇಲಾಧಿಕಾರಿಗಳ ಸೂಚನೆಯಂತೆ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತರ ತಂಡ ದಾಳಿ ಮಾಡಿ ಹಣದ ಸಮೇತ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಹಾಗೂ ಹೊರ ಗುತ್ತಿಗೆ ನೌಕರ ಶೌಕತ್ ಇಬ್ಬರನ್ನೂ ಬಂಧಿಸಿ ಮುಂದಿನ ತನಿಖೆ ನಡೆಸಿದ್ದಾರೆ. ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ್ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಸಂತೋಷ್ ಅವರ ನೇತೃತ್ವದ ತಂಡದಲ್ಲಿ ನಿರೀಕ್ಷಕರಾದ ಮಂಜುನಾಥ್, ಟಿ.ರಾಜು, ರಾಘವೇಂದ್ರ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.