ಶಾಸಕ ಸುರೇಶ್ ವಿರುದ್ಧ ಅರಣ್ಯಾಧಿಕಾರಿಗಳ ಪ್ರತಿಭಟನೆ

| Published : Feb 15 2025, 12:31 AM IST

ಸಾರಾಂಶ

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣದ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿಸಿ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಉಪವಿಭಾಗಾಧಿಕಾರಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು. ಜನಪ್ರತಿನಿಧಿಗಳಿಗೆ ಸರ್ಕಾರದ ರೀತಿ ರಿವಾಜುಗಳ ಬಗ್ಗೆ ಅರಿವಿದ್ದರೂ ಸಹ ಇಲಾಖಾ ಸಿಬ್ಬಂದಿಗಳು ಕಾಡಾನೆ ಹಾವಳಿ ತಡೆಗಟ್ಟಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತಿಳಿವಳಿಕೆ ಇದ್ದರೂ ಕೂಡ ಉದ್ದೇಶ ಪೂರ್ವಕವಾಗಿ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿರುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣದ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿಸಿ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಉಪವಿಭಾಗಾಧಿಕಾರಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಕೃಷ್ಣ ಮಾತನಾಡಿ, ಕಳೆದ ಒಂದು ದಿನದ ಹಿಂದೆ ಬೇಲೂರು ವಲಯದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಪ್ರಕರಣದ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ರವರು ಇಲಾಖಾ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಆಕಸ್ಮಿಕವಾಗಿ ಕಾಡಾನೆ ದಾಳಿಯಿಂದ ಬೆಳ್ಳಾವರ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿರುತ್ತಾರೆ. ಅರಣ್ಯ ಇಲಾಖೆಯಿಂದ ಕಾಡಾನೆಗಳ ಕುರಿತು ಬೆಳ್ಳಾವರ ಗ್ರಾಮದಲ್ಲಿ ಪ್ರಚಾರ ಪಡಿಸಿ, ಮುಜಾಗ್ರತೆ ವಹಿಸುವಂತೆ ಗ್ರಾಮಸ್ಥರಿಗೆ ಸೂಕ್ತ ಎಚ್ಚರಿಕೆಯನ್ನು ಜಿಲ್ಲಾ ಆನೆ ಕಾರ್ಯಪಡೆ ವತಿಯಿಂದ ನೀಡಿ, ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾಗಿಯೂ ಆಕಸ್ಮಿಕವಾಗಿ ವಯೋವೃದ್ಧ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರಿಂದ ಸ್ಥಳಕ್ಕೆ ತ್ವರಿತವಾಗಿ ಹಾಸನ ಅರಣ್ಯ ವಿಭಾಗದ ಹಿರಿಯ ಅರಣ್ಯಾಧಿಕಾರಿಗಳಾದ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಕ್ಷೇತ್ರ ಸಿಬ್ಬಂದಿಗಳು ಸದರಿ ಸ್ಥಳಕ್ಕೆ ತೆರಳಿ, ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಮವನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಆಗಮಿಸಿದ್ದತಂಹ ಶಾಸಕ ಎಚ್.ಕೆ. ಸುರೇಶ್ ರವರು ಸಾರ್ವಜನಿಕರು ಮತ್ತು ಅಧಿಕಾರಿಗಳು ನೆರೆದಿದ್ದಂತಹ ಸಂದರ್ಭದಲ್ಲಿ ಸರ್ಕಾರದ ಕಾನೂನಾತ್ಮಕ ರೀತಿ ವಿಚಾರ ತಿಳಿದುಕೊಳ್ಳದೇ ಏಕಾಏಕಿ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಮನಬಂದಂತೆ ವಾಗ್ದಾಳಿ ಮಾಡಿರುತ್ತಾರೆ ಎಂದು ದೂರಿದರು.

ಸಾರ್ವಜನಿಕವಾಗಿ ಹಾಸನ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹಾಸನ ವಿಭಾಗ ಇವರನ್ನು ಏಕವಚನದಲ್ಲಿ ಬೈದು ಹೀಯಾಳಿಸಿ, ಸಾರ್ವಜನಿಕವಾಗಿ ಭಾರತೀಯ ಅರಣ್ಯ ಸೇವೆಗೆ ಸೇರಿದ ಇಲಾಖೆಯ ಅತ್ಯುನ್ನತ ಅಧಿಕಾರಿಯ ಹುದ್ದೆಗೆ, ಅಧಿಕಾರಿಗಳ ಕರ್ತವ್ಯಗಳಿಗೆ ಮತ್ತು ಅಧಿಕಾರಿಗಳ ಕುಟುಂಬದವರಿಗೆ ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಾಸಕರು ಅಮಾನುಷವಾಗಿ ಅವಹೇಳನ ಮಾಡಿದ್ದು, ಹಾಸನ ಜಿಲ್ಲೆಯ ಕೆಲವು ಜನಪ್ರತಿನಿಧಿಗಳಿಗೆ ಸರ್ಕಾರದ ರೀತಿ ರಿವಾಜುಗಳ ಬಗ್ಗೆ ಅರಿವಿದ್ದರೂ ಸಹ ಇಲಾಖಾ ಸಿಬ್ಬಂದಿಗಳು ಕಾಡಾನೆ ಹಾವಳಿ ತಡೆಗಟ್ಟಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತಿಳಿವಳಿಕೆ ಇದ್ದರೂ ಕೂಡ ಉದ್ದೇಶ ಪೂರ್ವಕವಾಗಿ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿರುತ್ತಾರೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಸಾರ್ವಜನಿಕವಾಗಿ ಸಾರ್ವಜನಿಕರಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನೆರೆದಿದ್ದ ಸಾರ್ವಜನಿಕರುಗಳಿಗೆ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ನೀಡಿ, ಅರಣ್ಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿ ಸ್ಥಳದಲ್ಲಿ ಗಲಭೆಗಳನ್ನು ಸೃಷ್ಟಿಸಲು ಪ್ರಯತ್ನಿಸಿರುತ್ತಾರೆ ಹಾಗು ಒಬ್ಬ ಜವಾಬ್ದಾರಿಯುತ ವಿಭಾಗದ ಮುಖ್ಯಸ್ಥನಿಗೆ ಸಿಗದಿರುವ ಗೌರವ ಮತ್ತು ರಕ್ಷಣೆ ಅವರ ಅಧೀನ ಸಿಬ್ಬಂದಿಗೆ ಸಿಗುವುದು ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅಧೀನ ಸಿಬ್ಬಂದಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಉಪ ಅರಣ್ಯ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಮಾಧ್ಯಮದೊಂದಿಗೆ ಮಾತನಾಡಿ, ಅಧಿಕಾರಿಗಳ ಸಂಘದ ಶಾಸಕರು ಸ್ಥಳದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ನಿಂಧಿಸಿದ್ದು, ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಹಾಗು ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಅಧೀನ ಸಿಬ್ಬಂದಿ ಆತ್ಮಸ್ಥೈರ್ಯವನ್ನು ಕುಗ್ಗಿಸಿರುತ್ತಾರೆ. ಶಾಸಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾರ್ವಜನಿಕವಾಗಿ ಬಟ್ಟೆಗಳನ್ನು ಬಿಚ್ಚಲಾಗುತ್ತದೆಂದು ಬೆದರಿಕೆ ಹಾಕಿ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಈ ಘಟನೆಯನ್ನು ತಮ್ಮ ದುರುದ್ದೇಶಕ್ಕಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಪ್ರಚೋದನೆಗಳಿಂದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಇವರಿಗೆ ಯಾವುದೇ ಅನಾಹುತಗಳಾದರೂ ಶಾಸಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಸಿದರು.

ಈ ರೀತಿಯ ಬೆಳವಣಿಗೆಗಳಿಂದ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಆತಂಕ ಉಂಟಾಗಿದ್ದು, ಈ ಜನಪ್ರತಿನಿದಿಗಳು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಘನತೆ, ಗೌರವಗಳಿಗೆ ಕುತ್ತು ತಂದಿದ್ದು, ಅರಣ್ಯ ಭೂಗಳ್ಳರಿಗೆ, ಅರಣ್ಯ ಸಂಪತ್ತನ್ನು ಲೂಟಿ ಮಾಡುವವರಿಗೆ ಪರೋಕ್ಷವಾಗಿ ಸಹಕಾರ ಹಾಗ ಪ್ರಚೋದನೆಯನ್ನು ನೀಡಿದ್ದು, ಅಮೂಲ್ಯವಾದ ಅರಣ್ಯ ಮತ್ತು ವನ್ಯಜೀವಿಗಳ ಅವನತಿಗೆ ಪರೋಕ್ಷವಾಗಿ ಕಾರಣಕರ್ತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಆದುದರಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಹಾಗೂ ಅರಣ್ಯ ಸಂಪತ್ತನ್ನು ರಕ್ಷಿಸಲು ಹಗಲಿರಳು ಶ್ರಮ ವಹಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿದರು.

ಇನ್ನು ನೌಕರರು ಸಾಮೂಹಿಕ ರಜೆ ಮೇಲೆ ತೆರಳಲು ನಿರ್ಧರಿಸಿರುವುದಾಗಿ ಈ ಮೂಲಕ ತಮ್ಮ ಅವಗಾಹನೆಗೆ ತರಬಯಸುತ್ತೇವೆ. ಒಂದು ವೇಳೆ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿದ ಸಂದರ್ಭದಲ್ಲಿ ಅರಣ್ಯ ಸಂಪತ್ತಿಗೆ ಹಾಗೂ ವನ್ಯಪ್ರಾಣಿಗಳಿಗೆ ಮತ್ತು ವನ್ಯಪ್ರಾಣಿಗಳಿಂದ ಸಾರ್ವಜನಿಕರಿಗೆ ಯಾವುದೇ ಹಾನಿ ಉಂಟಾದಲ್ಲಿ ಶಾಸಕರನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಅರಣ್ಯ ಅಧಿಕಾರಿಗಳ ಸಂಘದ ಯತೀಶ್, ದಿಲೀಪ್, ಚಂದ್ರೇಗೌಡ, ಮಧುಸೂದನ್, ಕಲಂದರ್, ಮೋಹನ್, ತೇಜಸ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.