ಜೀವ ಸಂಕುಲ ಉಳಿಯಲು ವನಸಂಪತ್ತು ಅನಿವಾರ್ಯ

| Published : Jun 06 2024, 12:30 AM IST

ಸಾರಾಂಶ

ನಮಗೆ ಇರುವುದೊಂದೇ ಭೂಮಿ. ಪರಿಸರ ರಕ್ಷಣೆಯ ಮೂಲಕ ಭೂಮಿಯನ್ನು ಸಂರಕ್ಷಿಸಬೇಕಿದೆ. ಹಸಿರೇ ನಮ್ಮ ಉಸಿರು, ಭೂಮಿಯ ಮೇಲೆ ಸಕಲ ಜೀವಸಂಕುಲಗಳು ಉಳಿಯಬೇಕಾದರೆ ಮರ- ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು ಅನಿವಾರ್ಯ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಪರಿಸರ ದಿನ ಕಾರ್ಯಕ್ರಮದಲ್ಲಿ ಎಸಿ ಅಭಿಷೇಕ್‌ ಅಭಿಮತ - - - ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ನಮಗೆ ಇರುವುದೊಂದೇ ಭೂಮಿ. ಪರಿಸರ ರಕ್ಷಣೆಯ ಮೂಲಕ ಭೂಮಿಯನ್ನು ಸಂರಕ್ಷಿಸಬೇಕಿದೆ. ಹಸಿರೇ ನಮ್ಮ ಉಸಿರು, ಭೂಮಿಯ ಮೇಲೆ ಸಕಲ ಜೀವಸಂಕುಲಗಳು ಉಳಿಯಬೇಕಾದರೆ ಮರ- ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು ಅನಿವಾರ್ಯ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಹೇಳಿದರು.

ಪುರಸಭೆ ವತಿಯಿಂದ ವಿಶ್ಪ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ರಸ್ತೆ ವಿಭಜಕದಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ಪರಿಸರ ಸಂರಕ್ಷಣೆಯಿಂದ ನಮ್ಮ ಭವಿಷ್ಯದ ನಿರ್ಮಾಣ ಸಾಧ್ಯ. ವಿಶ್ವ ಪರಿಸರದ ಮೂಲ ಆಶಯವೇ ಪ್ರಕೃತಿ ಹಾಗೂ ಪರಿಸರವನ್ನು ಉಳಿಸುವುದಾಗಿದೆ ಎಂದರು.

ಪ್ರತಿಯೊಬ್ಬರು ಮನೆಗಳ ಮುಂದೆ ಹಾಗೂ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಬೇಕು. ಸಾಧ್ಯವಾದಷ್ಟು ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ, ರಸ್ತೆ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು ಇತರರಿಗೂ ಸಸಿಗಳನ್ನು ನೆಟ್ಟು ಫೋಷಿಸುವಂತೆ ಪ್ರೇರೇಪಿಸಬೇಕು. ಇದರಿಂದ ಆಗುವ ಸದುಪಯೋಗವನ್ನು ತಿಳಿಸಬೇಕು ಎಂದರು.

ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ ಮಾತನಾಡಿ, ಕೇವಲ ಇಂತಹ ಪರಿಸರ ದಿನಾಚರಣೆ ಅಥವಾ ಇನ್ಯಾವುದೋ ಕಾರ್ಯಕ್ರಮಗಳಲ್ಲಿ ಪರಿಸರದ ಬಗ್ಗೆ ಮಾತನಾಡಿ, ಅಲ್ಲಿಗೆ ಸುಮ್ಮನಾಗಿ ಬಿಡುತ್ತೇವೆ. ಆದರೆ, ಅದರಿಂದ ಏನೂ ಪ್ರಯೋಜನವಾಗದು. ನಾವು ವೇದಿಕೆಗಳಲ್ಲಿ ಮಾತನಾಡಿದ ಹಾಗೆ, ಅದರಂತೆ ನಾವೂ ನಡೆದುಕೊಳ್ಳಬೇಕು. ಆಗ ಮಾತ್ರ ಸಮಾಜ ನಮ್ಮ ಮಾತನ್ನು ಆಲಿಸುತ್ತದೆ. ಅದರಂತೆ ಗಿಡ ನೆಟ್ಟರೆ ಸಾಕಾಗುವುದಲ್ಲ. ಅದನ್ನು ನಾವೂ ಗಮನಿಸಿ ಬೆಳಸಬೇಕು. ಅದರಿಂದ 4 ಜನರಿಗೆ ನೆರಳು ನೀಡಿದರೆ ಮಾತ್ರ ನಮ್ಮ ಸತ್ಕಾರ್ಯ ಸಾರ್ಥಕವಾಗುತ್ತದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್, ಎಂಜಿನಿಯರ್ ದೇವರಾಜ್, ಆರೋಗ್ಯಾಧಿಕಾರಿ ಪರಮೇಶ ನಾಯ್ಕ, ವೃತ್ತ ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಆರ್. ಬಂತಿ, ಮುಖಂಡರಾದ ಮಹೇಶ್ ಹುಡೇದ್, ಮಂಜುನಾಥ್ ಇಂಚರ ಹಾಗೂ ಇತರರು ಇದ್ದರು.

- - -

ಕೋಟ್ ಹಸಿರು ಕರ್ನಾಟಕ ಯೋಜನೆಯಲ್ಲಿ ಪ್ರತಿಯೊಬ್ಬರೂ ಕನಿಷ್ಠ ಎರಡು ಗಿಡಗಳನ್ನಾದರೂ ನೆಡುವ ಸಂಕಲ್ಪ ಮಾಡಬೇಕು. ನಾವು ಮತ್ತು ನಮ್ಮ ಸಿಬ್ಬಂದಿ ಈ ಸೇವೆಗೆ ಜೊತೆ ಕೈಜೋಡಿಸುತ್ತೇವೆ

- ನಿರಂಜನಿ, ಮುಖ್ಯಾಧಿಕಾರಿ, ಪುರಸಭೆ

- - - -5ಎಚ್.ಎಲ್.ಐ1.:

ಪರಿಸರ ದಿನ ಅಂಗವಾಗಿ ಹೊನ್ನಾಳಿಯಲ್ಲಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ಪುರಸಭಾ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್ ಇತರರು ಇದ್ದರು.