ಹಿಂದೂ ಎಂದರೆ ಹೆಮ್ಮೆ, ಅಭಿಮಾನ ಪಡುವ ಸಂಗತಿ, ಮನೆ, ಮನೆ ಹಾಗೂ ಮನಗಳಲ್ಲಿ ಹಿಂದೂತ್ವದ ಅಭಿಮಾನ ಮೊಳಗಬೇಕಿದೆ.
ಹೊಸಪೇಟೆ: ಜಾತಿಪಂಥ ಬೇಧ ಮೆರೆತು ಹಿಂದೂಗಳೆಲ್ಲರೂ ಒಂದಾಗಬೇಕಿದೆ. ಈ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ದಕ್ಷಿಣ ಉತ್ತರ ಭಾಗದ ಕ್ಷೇತ್ರ ಬೌಧಿಕ ಪ್ರಮುಖರಾದ ಶ್ರೀಧರಸ್ವಾಮಿ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಿಂದು ಸಮ್ಮೇಳನ ಆಚರಣಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹಿಂದು ಸಮ್ಮೇಳನ (3,4,5 ಮತ್ತು 6 ನೇ ವಾರ್ಡಗಳು)ದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಎಂದರೆ ಹೆಮ್ಮೆ, ಅಭಿಮಾನ ಪಡುವ ಸಂಗತಿ, ಮನೆ, ಮನೆ ಹಾಗೂ ಮನಗಳಲ್ಲಿ ಹಿಂದೂತ್ವದ ಅಭಿಮಾನ ಮೊಳಗಬೇಕಿದೆ. ಇದು ಕೇವಲ ಆಚರಣೆಯಾಗದೇ ಅನುಷ್ಠಾನವಾಗಬೇಕಿದೆ. ಜಾತಿ ಭೇದ ಮರೆತು ನಾವೆಲ್ಲರೂ ಒಂದಾಗಬೇಕಿದೆ. ಈ ಮೂಲಕ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ ಅನಾಚಾರಗಳಿಗೆ ಕಡಿವಾಣ ಹಾಕಬೇಕು. ಮಕ್ಕಳಿಗೆ ಸ್ವದೇಶಿ ಪ್ರೇಮ ಬೆಳಸಬೇಕಿದೆ. ಸಂಪ್ರದಾಯಆಚರಣೆಗಳಿಗೆ ಅಣಿಗೊಳಿಸಬೇಕಿದೆ. ನದಿಜಲಗಳ ರಕ್ಷಣೆ, ಪರಿಸರ ಕಾಳಜಿ ಮೂಡಿಸಬೇಕಿದೆ. ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ವಸ್ತುಗಳು ತ್ಯಜಿಸಬೇಕು. ಇದಕ್ಕಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.ವ್ಯಾಸರಾಜ ಮಠ (ಸೋಸಲೆ)ದ ವಿದ್ಯಾಶ್ರೀಶತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿ, ಇಂದಿನ ದಿನಮಾನದಲ್ಲಿ ರಾಷ್ಟ್ರ, ಧರ್ಮ, ಸಂಪ್ರದಾಯ, ಸಂಸ್ಕೃತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಇವುಗಳನ್ನು ಉಳಿಸುವಂತ ಹೊಣೆಗಾರಿಕೆ ಎಲ್ಲರ ಮೇಲಿದೆ. ಇತ್ತೀಚೆಗೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಂಕಮ, ಜನಿವಾರ, ಮಾಂಗಲ್ಯ ಸರ ತೆಗೆಸುತ್ತಿರುವ ಬೆಳವಣಿಗೆ ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.
ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮಿಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ವಿಶ್ವಗುರು ಆಗುವ ಹೊತ್ತಿನಲ್ಲಿ ನಾವೆಲ್ಲರೂ ಸೈನಿಕರಂತೆ ಒಂದಾಗಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ. ದೇಶದ ಸಂಪ್ರದಾಯ, ಸಂಸ್ಕೃತಿ ಆಚರಣೆಗಳನ್ನು ಮಕ್ಕಳಿಗೆ ಮೈಗೂಡಿಸಬೇಕಿದೆ. ಈ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯ ಜನರು ದೃಡ ಸಂಕಲ್ಪ ಮಾಡಬೇಕು ಎಂದು ಹೇಳಿದರು.ಹಿಂದೂ ಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಜಗನ್ನಾಥ, ಪ್ರತಿಜ್ಞಾವಿಧಿ ಬೋಧಿಸಿದರು. ನಗರಸಭೆ ಅಧ್ಯಕ್ಷ ರೂಪೇಶಕುಮಾರ್, ಬಿಜೆಪಿ ಓಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಸಮಿತಿ ಸಂಚಾಲ ಕಟಗಿ ರಾಮಕೃಷ್ಣ ಇದ್ದರು. ನರಪತ್ ಸಿಂಗ್ ಸ್ವಾಗತಿಸಿದರು. ವಿಜಯಕುಮಾರ್ ಎಂ.ಕೆ.ನಿರೂಪಿಸಿದರು. ವೇಣುಗೋಪಾಲ ವಂದಿಸಿದರು. ರಾಣಿಪೇಟೆ ಬಯಲು ಆಂಜನೇಯ ದೇವಸ್ಥಾನದಿಂದ ಹಿಂದು ಸಮ್ಮೇಳನದ ಮೆರವಣಿಗೆ ನಡೆಯಿತು.