ಕನ್ನಡಪ್ರಭ ವಾರ್ತೆ ತುಮಕೂರು ಕರ್ನಾಟಕ ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗೂ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಎಸ್.ಎಸ್.ಪುರಂನ ಉಮಾಮಹೇಶ್ವರ ದೇವಾಲಯದ ಬಳಿ ಆಚರಿಸಲಾಯಿತು. ಉಮಾಮಹೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ, ಜಿ.ಬಿ.ಜ್ಯೋತಿಗಣೇಶ್ ಅವರು, ಬಿ.ಎಸ್.ಯಡಿಯೂರಪ್ಪ ಓರ್ವ ಹುಟ್ಟು ಹೋರಾಟಗಾರರು, ಸೈಕಲ್ ಮೇಲೆ ಶಿಕಾರಿಪುರದಿಂದ ವಿಧಾನಸೌಧದವರೆಗೆ ಯಾತ್ರೆ ಕೈಗೊಂಡು, ಬಿಜೆಪಿ ಪಕ್ಷವನ್ನು ಹಂತ ಹಂತವಾಗಿ ಅಧಿಕಾರಕ್ಕೆ ತಂದವರು ಎಂದರು. ಹಿಡಿದ ಕೆಲಸವನ್ನು ಎಂದಿಗೂ ಕೈಬಿಡದೆ ನಡೆಸುತ್ತಿದ್ದ ಅವರ ಜೀವನ ಇತರೆ ರಾಜಕಾರಣಿಗಳಿಗೆ ಮಾದರಿ. ೮೪ನೇ ವಯಸ್ಸಿನಲ್ಲಿಯೂ ಪಕ್ಷವನ್ನು ಮುನ್ನಡೆಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.

ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಸಂಚಾಲಕ ಸದಾಶಿವಯ್ಯ ಮಾತನಾಡಿ, ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ. 1972 ಶಿಕಾರಿಪುರದಲ್ಲಿ ಜನಸಂಘದ ಜಿಲ್ಲಾಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ಧುಮುಕಿದ ಅವರು, ಬಗರ್ ಹುಕುಂ ಸಾಗುವಳಿದಾರರ ವೇದಿಕೆ ಅಧ್ಯಕ್ಷರಾಗಿ ಹಲವಾರು ಹೋರಾಟಗಳನ್ನು ನಡೆಸಿ, ಜನಾನುರಾಗಿಗಳಾದರೆ. ಹತ್ತಾರು ವರ್ಷಗಳಿಂದಲೂ ದಕ್ಷಿಣ ಭಾರತದಲ್ಲಿ ರಾಜಕೀಯ ಅಸ್ಥಿತ್ವ ಕಂಡುಕೊಳ್ಳಲು ಬಿಜೆಪಿ ಕನಸನ್ನು 2008 ರಲ್ಲಿ ಮುಖ್ಯಮಂತ್ರಿಯಾಗುವ ಮೂಲಕ ನನಸು ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದರು.ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತುಗಳು ಕೇಳಿ ಬರುತಿದ್ದವು. ತಮ್ಮನ್ನು ನಂಬಿ ಬಂದವರನ್ನು ಕೈಬಿಡದೆ ರಾಜಕೀಯವಾಗಿ ದಡ ಸೇರಿಸಿದ ವ್ಯಕ್ತಿ ಎಂದರೆ ಬಿ.ಎಸ್.ಯಡಿಯೂರಪ್ಪ ಮಾತ್ರ. ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಮತ್ತಷ್ಟು ಮಾರ್ಗದರ್ಶನ ಮಾಡುವ ಹುಮ್ಮಸ್ಸು ನೀಡಲಿ ಎಂದು ಶುಭ ಹಾರೈಸಿದರು. ನಂತರ ಯಡಿಯೂರಪ್ಪನವರ ರಾಜಕೀಯ ಜೀವನದ ಕುರಿತಾದ ಕಿರುಹೊತ್ತಿಗೆಯನ್ನು ಸಹ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಪಿ. ಸದಾಶಿವಯ್ಯ, ಆರ್.ಜಿ.ಸುರೇಶ್, ಎನ್.ಆರ್. ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್, ವಿನಯ್ ಜೈನ್, ಲೋಕೇಶ್ ಹೊನ್ನುಡಿಕೆ, ರಾಜಾರಾಮ್ ಮೆಡಿಕಲ್ ಮತ್ತಿತರರು ಭಾಗವಹಿಸಿದ್ದರು.