ಬಸವರಾಜ ರಾಯರೆಡ್ಡಿ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಬೆಂಗಳೂರಿನಲ್ಲಿರುವ ಕೆಲವರು 2023 ರ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಗಂಗಾವತಿ: ಸಚಿವ ಶಿವರಾಜ ತಂಗಡಗಿ ಗುಡುಗಿದ ಎರಡು ದಿನಗಳ ನಂತರ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ತಂಗಡಗಿ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಅನ್ಸಾರಿ ಮಸೀದಿಗೆ ಪತ್ರ ಬರೆದು ಒಂದು ಸೆಕೆಂಡ್ ನಲ್ಲಿ ಸೋಲಿಸಬಲ್ಲೆ ಎಂದು ಹೇಳಿಕೆ ನೀಡಿರುವದರ ಬಗ್ಗೆ ಸಚಿವ ಶಿವರಾಜ ತಂಗಡಗಿ ಅವರು ಅನ್ಸಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮತ್ತೆ ಸಚಿವರ ವಿರುದ್ಧ ಅನ್ಸಾರಿ ತಮ್ಮ ಆಕ್ರೋಶ ಹೊರ ಹಾಕಿದ್ದು, ಬೆಂಗಳೂರಿನಿಂದ ಆಡಿಯೋ ಬಿಡುಗಡೆ ಮಾಡಿ ಸಚಿವ ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಬೆಂಗಳೂರಿನಲ್ಲಿರುವ ಕೆಲವರು 2023 ರ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಶಿವರಾಜ ತಂಗಡಗಿ ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ವರ್ಗಾವಣೆ ಸೇರಿದಂತೆ ನಾಮ ನಿರ್ದೇಶಗಳಲ್ಲಿಯೂ ರಾಜಕೀಯ ಮಾಡಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯಗೆ ಇಲ್ಲಸಲ್ಲದ ಮಾತು ಹೇಳಿ ನನ್ನನ್ನು ಕಡೆಗಣಿಸಲು ಕಾರಣರಾಗಿದ್ದಾರೆ. ಸಚಿವ ತಂಗಡಗಿ ಪ್ರವಾಸಿ ಮಂದಿರದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೆವತಿದ್ದಾರೆ. ಅಲ್ಲದೆ ಕೈಗಳು ಸಹ ಶೇಕ್ ಆಗುತ್ತವೆ. ಇದರಿಂದ ಸತ್ಯ ಸಂಗತಿ ತಿಳಿಯುತ್ತಿದೆ ಎಂದರು.

ತಂಗಡಗಿ ಮುಸ್ಲಿಂ ಸಮಾಜಕ್ಕೆ ನೀಡಿದ ಕೊಡುಗೆ ಏನು, ಕನಕಗಿರಿ, ಕಾರಟಗಿ ತಾಲೂಕಲ್ಲಿ ಮುಸ್ಲಿಂ ಸಮುದಾಯಕ್ಕೆ ಏನು ಸಹಕಾರ ಮಾಡಿದ್ದಾರೆ. ಸರ್ಕಾರದ ಯೋಜನೆ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ತಂಗಡಗಿ ಆರ್‌ಎಸ್‌ಎಸ್‌ ವ್ಯಕ್ತಿ, ಜಾತ್ಯಾತೀತ ವ್ಯಕ್ತಿಯಲ್ಲ ಎಂದು ಹರಿಹಾಯ್ದಿದ್ದಾರೆ.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಜನರ ಸೇವೆ ಮಾಡಿದ್ದೇನೆ. ಕೆಲವರು ಜೆಸಿಬಿಯಿಂದ ದುಡ್ಡು ಅಗೆದು ಮನೆಗೆ ತೆಗೆದುಕೊಂಡು ಹೋದಂತೆ ನಾನು ಹೋಗಿಲ್ಲ. ನಾನು ಮನಸ್ಸು ಮಾಡಿದರೆ ಮತ್ತೆ ಕಣಕ್ಕೆ ಇಳಿದು ಗೆದ್ದು ತೋರಿಸುತ್ತೇನೆ ಎಂದಿರುವ ಅನ್ಸಾರಿ, ನನ್ನ ಕ್ಷೇತ್ರದಲ್ಲಿ ತಹಸೀಲ್ದಾರ ವರ್ಗಾವಣೆ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಕೈ ಹಾಕಿರುವ ತಂಗಡಗಿ ಮೊದಲು ತನ್ನ ಕ್ಷೇತ್ರದ ಕಡೆಗೆ ಗಮನಹರಿಸಲಿ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಗಂಗಾವತಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬೇಡಿ, ಬಿಜೆಪಿ, ಗಾಲಿ ಜನಾರ್ದನ ರೆಡ್ಡಿಗೆ ಬೆಂಬಲಿಸಿ ಎಂದು ಹೇಳಿರುವ ನೀವು ಕಾಂಗ್ರೆಸ್ಸಿಗರೇ ಎಂದು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹಿಟ್ನಾಳ್ ಗೆಲುವಿಗೆ ಹಗಲು ರಾತ್ರಿ ಶ್ರಮಿಸಿದ್ದೇನೆ. ಗೆದ್ದ ಮೇಲೆ ಬಂದು ಸೌಜನ್ಯಕ್ಕಾದರೂ ಥ್ಯಾಂಕ್ಸ್ ಹೇಳಿಲ್ಲ. ಗಂಗಾವತಿ ಕ್ಷೇತ್ರದಲ್ಲಿ ಅಧಿಕ ಮತ ಹಾಕಿಸಿದ್ದೇನೆ. ಕನಕಗಿರಿ ಕ್ಷೇತ್ರದಲ್ಲಿ ಎಷ್ಟು ಮತ ತಂಗಡಗಿ ಹಾಕಿಸಿದ್ದಾರೆ ಎನ್ನುವದನ್ನು ಹಿಟ್ನಾಳ್ ಅರಿತುಕೊಳ್ಳಬೇಕು ಎಂದಿದ್ದಾರೆ.

ಸಚಿವ ಬಸವರಾಜ ರಾಯರೆಡ್ಡಿ ಅವರು ಹಿರಿಯರು ಅವರ ಬಗ್ಗೆ ಅಪಾರ ಗೌರವ ಇತ್ತು. ಈಗ ಕಳೆದುಕೊಂಡಿದ್ದಾರೆ. ಹಿಟ್ನಾಳ್ ಕುಟಂಬದವರು ಹೇಳಿದಂತೆ ರಾಯರಡ್ಡಿ ನಡೆದುಕೊಂಡಿದ್ದಾರೆ. ಈ ಹಿಂದೆ ಶಿವರಾಜ ತಂಗಡಗಿ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದಾಗ ಏನೇನು ಹಗರಣವಾಗಿರುವದರ ಬಗ್ಗೆ ಮುಂದಿನ ಎಪಿಸೋಡ್ ನಲ್ಲಿ ಮಾತನಾಡ್ತೀನಿ ಎಂದ ಇಕ್ಬಾಲ್ ಅನ್ಸಾರಿ ಆಡಿಯೋ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.