- ಕಾಂಗ್ರೆಸ್ಸಿನ ಎಸ್‌ಸಿ-ಎಸ್‌ಟಿ ಸಚಿವ-ಶಾಸಕರ ಮೌನವೇಕೆ? । ಉಚ್ಛಾಟಿತರ ಮರುಸೇರ್ಪಡೆ ಹೈಕಮಾಂಡ್‌ಗೆ ಬಿಟ್ಟ ವಿಚಾರ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ಸರ್ಕಾರದಲ್ಲಿ ನೀಡಿದ್ದ ಮೀಸಲಾತಿ ತಡೆಯಾಜ್ಞೆಯನ್ನು ತಕ್ಷಣವೇ ರಾಜ್ಯದ ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿ, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳಿಗೆ ಸಾಮಾಜಿಕ ನ್ಯಾಯ ನೀಡಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆಶೇ.3ರಿಂದ ಶೇ.7 ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಗೆ ಸಮುದಾಯಕ್ಕೆ ಶೇ.15ರಿಂದ ಶೇ.17 ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಅವಧಿಯಲ್ಲಿ ನೀಡಿದ್ದ ಹೆಚ್ಚುವರಿ ಮೀಸಲಾತಿ ಕಸಿಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಪರಿಶಿಷ್ಟರ ಮೀಸಲಾತಿ ಕಡಿತಗೊಳಿಸಿ, ಸಾಮಾಜಿಕ ನ್ಯಾಯವನ್ನೇ ಕಸಿಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರದ ಇಂತಹ ಧೋರಣೆ ವಿರುದ್ಧ ರಾಜ್ಯವ್ಯಾಪಿ ಉಗ್ರ ಹೋರಾಟ ಸಂಘಟಿಸಲಿದ್ದೇವೆ. ಸರ್ಕಾರಿ ಅಭಿಯೋಜಕರು ತಕ್ಷಣವೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತೆರವುಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ಅದನ್ನು ಬಿಟ್ಟು ಕೇವಲ 9ನೇ ಷೆಡ್ಯೂಲ್‌ ನೆಪ ಹೇಳಿ, ಸಮುದಾಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಅವರು ಸರ್ಕಾರಕ್ಕೆ ಅ‍ವರು ಚಾಟಿ ಬೀಸಿದರು.


ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಕಡಿತಗೊಳಿಸಿದ್ದರಿಂದ ಪ್ರಸ್ತುತ ಶಾಲಾ- ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಎಸ್‌ಟಿ ಸಮುದಾಯದ ಮಕ್ಕಳಿಗೆ ಶೇ.3ರಷ್ಟು ಮಾತ್ರ ಅವಕಾಶ ಸಿಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಅವಕಾಶಗಳಿಂದಲೂ ವಂಚಿತರಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಅವರು ಕಿಡಿಕಾರಿದರು.

ಪರಿಶಿಷ್ಟ ಜಾತಿ- ಪಂಗಡಗಳ ಸಚಿವರು, ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿದ್ದರೂ ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಬಿಜೆಪಿಯಿಂದ ಈ ಸಲ ಯಾರೂ ಗೆಲ್ಲದಿರಬಹುದು. ಆದರೆ, ಕಾಂಗ್ರೆಸ್‌ ಪಕ್ಷದಿಂದ ಗೆದ್ದ ಸಚಿವರು, ಶಾಸಕರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು, ಸಮುದಾಯದ ಹಿತದೃಷ್ಟಿಯಿಂದ ಸರ್ಕಾರದ ನಡೆಯನ್ನು ಖಂಡಿಸಿ, ಅದರ ವಿರುದ್ಧ ಧ್ವನಿ ಎಚ್ಚಬೇಕಿದೆ. ಟೇಬಲ್‌ ತಟ್ಟಿ ಮೀಸಲಾತಿಯನ್ನು ಮರಳಿ ಕೊಡಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಕೆಲಸ ಮಾಡಿ ಎಂದು ತಿಳಿಹೇಳಿದರು.

ಒಂದುವೇಳೆ ಕಾಂಗ್ರೆಸ್ ಸರ್ಕಾರವು ಮೀಸಲಾತಿ ನೀಡುವಲ್ಲಿ ವಿಫಲವಾದರೆ 2028ರಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಂತೂ ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ನಮ್ಮ ಸರ್ಕಾರ ನೀಡಿದ್ದ ಹಳೆಯ ಮೀಸಲಾತಿಯನ್ನೇ ಯಥಾಸ್ಥಿತಿಯಲ್ಲಿ ಮರು ಸ್ಥಾಪಿಸಲಾಗುವುದು ಎಂದು ಬಿ.ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಉಚ್ಛಾಟಿತ ಬಿಜೆಪಿ ನಾಯಕರ ಮರುಸೇರ್ಪಡೆ ನಮ್ಮ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ.

- - -