ಹೊಸಕೋಟೆ: ಹೆಣ್ಣು ಕುಟುಂಬದ ಕಣ್ಣಾಗಿ, ಸಂಸಾರದ ನೊಗವನ್ನು ಹೊರುವುದರ ಜೊತೆಜೊತೆಗೆ ಸಮಾಜದ ಅಭಿವೃದ್ಧಿಯತ್ತಲೂ ಗಮನಹರಿಸಬೇಕಿದೆ ಎಂದು ಟೀಮ್ ಎಸ್ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ತಿಳಿಸಿದರು.
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಳ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಸಂಸಾರದಲ್ಲಿ ದೈಹಿಕ-ಮಾನಸಿಕವಾಗಿ ಹಲವು ಸಮಸ್ಯೆಗಳ ಜೊತೆ ಬದುಕುತ್ತಲೇ ಕುಟುಂಬದ ಅಭಿವೃದ್ಧಿಗಾಗಿ, ಸದಸ್ಯರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಾಳೆ. ಇಂತಹ ಹೆಣ್ಣಿಗೆ ಸಮಾಜದಲ್ಲಿ ಟೀಕೆ, ನಿಂದನೆಗಳನ್ನು ಎದುರಿಸುವುದು ತಪ್ಪಿದ್ದಲ್ಲ. ಆದ್ದರಿಂದ ಹೆಣ್ಣು ಮಕ್ಕಳು ಟೀಕಾಕಾರರನ್ನ ಬದಿಗೊತ್ತಿ ಸಮಾಜದಲ್ಲಿ ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಶಾಸಕ ಶರತ್ ಬಚ್ಚೇಗೌಡರ ಸೂಚನೆಯಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಮಹಿಳಾ ಕ್ರೀಡಾಕೂಟಗಳನ್ನು ಆಯೋಜಿಸಿ ಉತ್ತೇಜನ ನೀಡಲಾಗುತ್ತಿದೆ. ಪುರುಷರು ಕೂಡ ಮಹಿಳೆಯರ ಮನಸ್ಥಿತಿಯನ್ನು ಅರಿತುಕೊಂಡು ಅವರ ಏಳಿಗೆಗೆ ಸಹಕರಿಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಪುರುಷರಷ್ಟೇ ಸರಿಸಮಾನವಾಗಿ ಸಮಾಜದ ಎಲ್ಲಾ ರಂಗಗಳಲ್ಲೂ ದುಡಿಯುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತಷ್ಟು ಮುನ್ನೆಲೆಗೆ ಮಹಿಳೆಯರು ಬರಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಂದರ್ ಮಾತನಾಡಿ, ಮಹಿಳಾ ಗ್ರಾಮ ಸಭೆಯನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಿ ಮಹಿಳೆಯರ ಕುಂದುಕೊರತೆಗಳನ್ನು ಆಲಿಸುವುದು ಸರ್ಕಾರದ ಉದ್ದೇಶ. ಆದರೆ ಹೊಸಕೋಟೆ ಕ್ಷೇತ್ರದಲ್ಲಿ ಶಾಸಕ ಶರತ್ ಬಚ್ಚೇಗೌಡರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಮಹಿಳಾ ಕ್ರೀಡಾಕೂಟ ಆಯೋಜಿಸಿದ ಬಳಿಕ ಮಹಿಳಾ ಗ್ರಾಮ ಸಭೆ ಆಯೋಜಿಸಿ ಅವರಿಗೆ ಬಹುಮಾನ ವಿತರಿಸಿ ಸಮಾಜದಲ್ಲಿ ಧೈರ್ಯವಾಗಿ ಬದುಕುವ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಹೇಳಿದರು.
ಮಹಿಳಾ ಕ್ರೀಡಾಕೂಟದಲ್ಲಿ ದೊಡ್ಡನಲ್ಲಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದ ೮೦೦ಕ್ಕೂ ಹೆಚ್ಚಿನ ಮಹಿಳೆಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷರಾದ ನಾರಾಯಣಸ್ವಾಮಿ, ಸಂಜೀವ್ಗೌಡ, ಮಾಜಿ ಉಪಾಧ್ಯಕ್ಷ ಪ್ರಕಾಶ್, ಭೂ ನ್ಯಾಯ ಮಂಡಳಿ ಸದಸ್ಯ ಪಿಕೆಎಸ್ ಶ್ರೀನಿವಾಸ್, ಪಿಡಿಒ ಸುಂದರ್, ಮುಖಂಡರಾದ ಒಳಗೆರೆಪುರ ಸುರೇಶ್, ವೈ.ಗೋವಿಂದಪ್ಪ, ಮುನಿರಾಜು, ಅಪ್ಪಸಂದ್ರ ನಾರಾಯಣಸ್ವಾಮಿ, ಮುರಳಿ, ಚಂದ್ರಪ್ಪ, ಉಮ್ಮಲು ಕೃಷ್ಣಮೂರ್ತಿ, ವೆಂಕಟೇಶ್, ಚಿನ್ನಂಡಹಳ್ಳಿ ಸುಬ್ರಮಣಿ ಇತರರು ಹಾಜರಿದ್ದರು.
ಫೋಟೋ : 14 ಹೆಚ್ಎಸ್ಕೆ 1 ಮತ್ತು ೨2
ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಹಿಳಾ ತಂಡಗಳಿಗೆ ಟೀಮ್ ಎಸ್ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಬಹುಮಾನ ವಿತರಣೆ ಮಾಡಿದರು.