ಸಾರಾಂಶ
ಹಿಂದೆ ಸ್ಮಾರಕಗಳನ್ನು ನಮ್ಮ ಅಸ್ಮಿತೆ ಎಂಬಂತೆ ನಿರ್ಮಿಸಲಾಗುತ್ತಿತ್ತು. ಅವು ನಮ್ಮ ಸಂಸ್ಕೃತಿ ಪ್ರತೀಕ ಎಂಬುದು ಒಂದು ಕಡೆಯಾದರೆ ಮತ್ತೊಂದೆಡೆ ಆದೇಶಗಳೂ ಆಗಿದ್ದವು.
ಕೊಪ್ಪಳ: ಕೋಟೆ, ಸ್ಮಾರಕಗಳು ಐತಿಹಾಸಿಕ ಪ್ರತೀಕ. ಅವು ಹಿಂದೆ ನಮ್ಮನ್ನೂ ರಕ್ಷಿಸಿದ್ದ ಸ್ಮಾರಕಗಳಾಗಿದ್ದವು. ಇಂದು ನಾವು ಅವುಗಳನ್ನು ರಕ್ಷಿಸಬೇಕಿದೆ ಎಂದು ಗವಿಸಿದ್ಧೇಶ್ವರ ಕಾಲೇಜಿನ ಇತಿಹಾಸ ಉಪನ್ಯಾಸಕ ಮಂಜುನಾಥ ಕೀರ್ತಿಗೌಡ ಹೇಳಿದರು.
ಕೊಪ್ಪಳ ಚಾರಣ ಬಳಗದಿಂದ ಹಮ್ಮಿಕೊಂಡಿದ್ದ ೫ನೇ ಚಾರಣದಲ್ಲಿ ತಾಲೂಕಿನ ಇರಕಲ್ಲಗಡಾ ಕೋಟೆ ವೀಕ್ಷಣೆ ಮತ್ತು ಚರಿತ್ರೆ ಮನನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಸ್ಮಾರಕಗಳನ್ನು ನಮ್ಮ ಅಸ್ಮಿತೆ ಎಂಬಂತೆ ನಿರ್ಮಿಸಲಾಗುತ್ತಿತ್ತು. ಅವು ನಮ್ಮ ಸಂಸ್ಕೃತಿ ಪ್ರತೀಕ ಎಂಬುದು ಒಂದು ಕಡೆಯಾದರೆ ಮತ್ತೊಂದೆಡೆ ಆದೇಶಗಳೂ ಆಗಿದ್ದವು. ಅವುಗಳನ್ನು ಪಾಲಿಸುವುದು ಮತ್ತು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿತ್ತು. ಆದರೆ ಇಂದು ಅವುಗಳ ಬಗ್ಗೆ ತತ್ಸಾರ ಭಾವನೆ ಉಂಟಾಗುತ್ತಿದ್ದು, ಇದು ಸರಿಯಲ್ಲ. ಇರಕಲ್ಲಗಡ ಕೋಟೆ ಮರಾಠ, ನಿಜಾಮ, ಬ್ರಿಟಿಷ್, ಹೈದರಲಿ, ಟಿಪ್ಪುಸುಲ್ತಾನ ಮುಂತಾದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇದನ್ನು ರಕ್ಷಿಸಬೇಕಾಗಿರುವುದು ಬಹಳ ಮುಖ್ಯ ಎಂದರು.ಪ್ರಾಧ್ಯಾಪಕಿ ಡಾ.ಗೀತಾ ಪಾಟೀಲ ಮಾತನಾಡಿ, ಸ್ಮಾರಕಗಳನ್ನು ನಮ್ಮ ಮನೆಯಂತೆ ರಕ್ಷಿಸಬೇಕಿದೆ ಎಂದರು.ಡಾ.ವಿಜಯ ಸುಂಕದ್, ಡಾ.ಮಂಜುನಾಥ ಬಡಿಗೇರಾ, ಸಿ.ಡಿ. ಪಾಟೀಲ, ಶಿವರಾಯಪ್ಪ ನೀರಲೋಟಿ, ಅರುಣ ಶೆಟ್ಟರ, ಶಶಿಕುಮಾರ ಉಳ್ಳಾಗಡ್ಡಿ ಮಾತನಾಡಿದರು. ಚಾರಣ ಸಂಚಾಲಕ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.