ಬಂಟ್ವಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

| Published : May 08 2024, 01:01 AM IST

ಬಂಟ್ವಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಭಾಷೆಯ ಸಮರ್ಪಕ ಬಳಕೆಯೊಂದಿಗೆ ಉತ್ತಮ ಸಾಹಿತ್ಯ ರಚಿಸಿ ಓದುಗರ ಶೋತೃಗಳ ಮನಸನ್ನು ಗೆದ್ದಾಗ ಸಾಹಿತ್ಯದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಸಂಘಟಕ, ಕವಿ ಅಬೂಬಕರ್ ಅಮ್ಮುಂಜೆ ಹೇಳಿದರು.

ಅವರು ಬಿ.ಸಿ.ರೋಡಿನ ಕನ್ನಡ ಭವನ ದಲ್ಲಿ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸಂದರ್ಭ ಮಾತನಾಡಿದರು‌.

ಪರಿಷತ್ತಿನ ಹುದ್ದೆಯನ್ನು ವಹಿಸಿಕೊಂಡರಷ್ಟೇ ಸಾಲದು ಪರಿಷತ್ತಿನ ಉದ್ದೇಶವನ್ನು ಕನ್ನಡಿಗರಿಗೆ ತಿಳಿಸುವಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ಅನಿವಾರ್ಯ ಎಂದರು.

ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಸಾರಥ್ಯವನ್ನು ನೀರ್ಪಾಜೆ ಭೀಮ ಭಟ್ಟರಿಂದ ವಿಶ್ವನಾಥ ಬಂಟ್ವಾಳ ತನಕ ಹಲವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು‌‌.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಬಂಟ್ವಾಳ ತಾಲೂಕಿನಲ್ಲಿ ಇರುವಷ್ಟು ದತ್ತಿ ಉಪನ್ಯಾಸಗಳು ಇನ್ನೆಲ್ಲೂ ಇಲ್ಲ‌. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಾಹಿತಿಗಳನ್ನು, ಕಲಾವಿದರನ್ನು ರಂಗಕರ್ಮಿಗಳು, ರಾಜಕಾರಣಿಗಳನ್ನು , ಪತ್ರಕರ್ತರನ್ನು, ಶಿಕ್ಷಣ ತಜ್ಞರನ್ನು ಸಾಮಾಜಿಕ ಧಾರ್ಮಿಕ ಮುಖಂಡರನ್ನು ಬಂಟ್ವಾಳ ತಾಲೂಕು ನೀಡಿದೆ ಎಂದರು.

ಮಾದರಿ ಸಮ್ಮೇಳನ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಮಾತನಾಡಿ, ಅಮ್ಮುಂಜೆಯಲ್ಲಿ ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಲ್ಲೇಖಿಸಿ ರಾಜ್ಯಕ್ಕೆ ಮಾದರಿ ಎನಿಸಿದ ಇಂತಹ ಸಮ್ಮೇಳನಗಳು ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ನಡೆಯಬೇಕು ಎಂದರು. ತಾಲೂಕು ಘಟಕ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಸಮ್ಮೇಳನಗಳು ನಡೆಯಲಿವೆ ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಪಡ್ರೆ ಸ್ವಾಗತಿಸಿದರು. ಪ್ರಸ್ತಾವನೆಗೈದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿ.ಸು. ಭಟ್ ಕಾರ್ಯಕ್ರಮ ನಿರೂಪಿಸಿದರು.