ಯುವಕನ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದ ಪ್ರಕರಣದ ಸಂಬಂಧ ನಾಲ್ವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಯುವಕನ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದ ಪ್ರಕರಣದ ಸಂಬಂಧ ನಾಲ್ವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಿರೀಶ್‌ಗೌಡ(19), ಪ್ರತಾಪ್‌(25), ಶರತ್‌ (24) ಮತ್ತು ಆಕಾಶ್‌(18) ಬಂಧಿತರು. ನಾಗರಹೊಳೆ ಸರ್ಕಲ್ ನಿವಾಸಿ ಶರತ್ ಎಂಬುವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ಶರತ್ ಅವರು,​​ ಮಾ.24 ಸಂಜೆ 5 ಗಂಟೆಯ ಸುಮಾರಿಗೆ ಮಹದೇಶ್ವರನಗರ, ನಾಗರಹೊಳೆ ಸರ್ಕಲ್ ಅಂಗಡಿಯೊಂದರ ಬಳಿ ಚಹಾ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಬಂದಿದ್ದ ಆರೋಪಿಗಳು ನೀನು ನಟನ ಎಂದು ವಿಚಾರಿಸಿದ್ದರು. ಇಲ್ಲ ನನ್ನ ಹೆಸರು ಶರತ್‌ ಎಂದು ಹೇಳಿದ್ದರು. ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು. ಬಳಿಕ ಆಟೋದಲ್ಲಿ ಹತ್ತಿಸಿಕೊಂಡು ಚಾಕುವನ್ನು ಉಲ್ಟಾ ಮಾಡಿಕೊಂಡು ಹಲ್ಲೆ ನಡೆಸಿದ್ದರು. ನಂತರ ಆಟೋದಿಂದ ಇಳಿಸಿ ಜೀವ ಬೆದರಿಕೆ ಹಾಕಿ ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಟ್ಟದಾಗಿ ಮೆಸೇಜ್‌ ಮಾಡಿದಕ್ಕೆ ಹಲ್ಲೆ!: ಶರತ್‌ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಮೇಸೆಜ್‌ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.