ದೇಶಾದ್ಯಂತ 502 ಜನಕ್ಕೆ ವಂಚಿಸಿದ ನಾಲ್ವರ ಬಂಧನ

| Published : May 23 2024, 01:05 AM IST / Updated: May 23 2024, 09:29 AM IST

ಸಾರಾಂಶ

ಖ್ಯಾತ ವೈದ್ಯರೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಆರೋಪಿಗಳು ದೇಶದ ವಿವಿಧ ಬ್ಯಾಂಕ್ಗಳಲ್ಲಿ ಅನಾಮಧೇಯ 170 ಖಾತೆ ತೆರೆದು ದೇಶಾದ್ಯಂತ 502 ಜನರಿಗೆ ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

  ವಿಜಯಪುರ :  ಖ್ಯಾತ ವೈದ್ಯರೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಆರೋಪಿಗಳು ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಅನಾಮಧೇಯ 170 ಖಾತೆ ತೆರೆದು ದೇಶಾದ್ಯಂತ 502 ಜನರಿಗೆ ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಹರಿಯಾಣದ ಕುರುಕ್ಷೇತ್ರ ನಿವಾಸಿ ರಾಜೀವ್ ಸತ್ಪಾಲ್ ವಾಲಿಯಾ, ರಾಜಸ್ಥಾನದ ಉದಯಪುರ ಜಿಲ್ಲೆ ನಿವಾಸಿ ರಾಜಶೇಖರ ಶಂಕರಲಾಲ ಟೈಲರ್, ಕರಣ್ ತೇಜಪಾಲ್ ಯಾದವ್, ಸುರೇಂದ್ರಸಿಂಗ್ ನಾಕೋಡಾ ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಿವಿಧ ಕಂಪನಿಯ 9 ಮೊಬೈಲ್‌ಗಳು, 7 ಸಿಮ್ ಕಾರ್ಡ್‌ಗಳು,1ಟ್ಯಾಬ್ ವಶಪಡಿಸಿಕೊಂಡು ಆಪಾದಿತರ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಪ್ರೀಜ್ ಮಾಡಲಾಗಿದೆ. ಈ ಪ್ರಕರಣ ಹಾಗೂ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ₹68,77,135 ವಂಚನೆ ಆಗಿದ್ದು, ಈ ಪೈಕಿ ಈಗಾಗಲೇ ₹40 ಲಕ್ಷಗಳನ್ನು ಪಿರ್ಯಾದಿದಾರರಿಗೆ ರಿಫಂಡ್ ಮಾಡಲಾಗಿದೆ ಎಂದರು.

120 ಸಿಮ್‌ ಬಳಕೆ:

ವಿಜಯಪುರ ಪೊಲೀಸರು ಬಂಧಿಸಿರುವ ಆರೋಪಿಗಳೇ ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿದ ಬಗ್ಗೆ ತಿಳಿದು ಬಂದಿದೆ. ಈ ಆರೋಪಿಗಳು ಅನಾಮಧೇಯ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 170 ಖಾತೆಗಳನ್ನು ತೆರೆದು ಜನರಿಗೆ ವಂಚನೆ ಮಾಡಿರುವುದು ಸಹ ಬೆಳಕಿಗೆ ಬಂದಿದೆ. ಆರೋಪಿತರು ಅನಾಮಧೇಯರ ಹೆಸರಿನಲ್ಲಿ ವಿವಿಧ ಕಂಪನಿಯ 120 ಸಿಮ್‌ಗಳನ್ನು ಉಪಯೋಗ ಮಾಡಿದ ದೊಡ್ಡ ಜಾಲವೂ ತನಿಖೆ ವೇಳೆ ತಿಳಿದು ಬಂದಿದೆ ಎಂದು ವಿವರಿಸಿದರು.

ಆನ್‌ಲೈನ್‌ ವಂಚನೆ ಗ್ಯಾಂಗ್‌:

ವೈದ್ಯರನ್ನು ವಂಚಿಸಿದ್ದಾರೆ. ಅದರಲ್ಲಿ ವಿಜಯಪುರದ ಖ್ಯಾತ ಹೃದಯರೋಗ ತಜ್ಞ ಡಾ.ಅನಿರುದ್ಧ ಉಮರ್ಜಿ ಅವರನ್ನು ವಂಚಿಸಿದ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ವೈದ್ಯರಾಗಿರುವ ಡಾ.ಅನಿರುದ್ಧ ಉಮರ್ಜಿ ಅವರಿಗೆ ಈ ಆರೋಪಿಗಳು ಆನ್‌ಲೈನ್ ಮೂಲಕ ಮೋಸ ಮಾಡುವ ಉದ್ದೇಶದಿಂದ ಅವರಿಗೆ ಫೆಡ್‌ಎಕ್ಸ್ ಕೋರಿಯರ್ ಮೂಲಕ ಕಾಬೂಲ್‌ಗೆ ನಿಷೇಧಿತ ವಸ್ತುಗಳಾದ ಅಂತಾರಾಷ್ಟ್ರೀಯ ಸಿಮ್ ಕಾರ್ಡ್, ಮಾದಕ ದ್ರವ್ಯ ಕಳುಹಿಸಿದ್ದಾರೆ.

ಈ ಬಗ್ಗೆ ಮುಂಬೈ ನಾರ್ಕೋಟಿಕ್ಸ್‌ನಲ್ಲಿ ದೂರು ದಾಖಲಾಗಿದೆ ಎಂದು ಹೆದರಿಸಿ ವೈದ್ಯರ ಎಫ್.ಡಿ. ಖಾತೆಯಲ್ಲಿದ್ದ ₹೫೪ ಲಕ್ಷ ಹಣವನ್ನು ತಮ್ಮ ಪಂಜಾಬ್‌ ನ್ಯಾಶನಲ್ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ಆನ್‌ಲೈನ್ ಮೂಲಕ ಡಿಜಿಟಲ್‌ ಅರೆಸ್ಟ್ ಮಾದರಿಯಲ್ಲಿ ಮೋಸ ಮಾಡಿದ್ದರು. ಅದೇ ತೆರನಾಗಿ ಮಖಣಾಪೂರ ತಾಂಡಾ ನಿವಾಸಿ ಬಬನ್ ನಾಮದೇವ ಚವ್ಹಾಣ ಸಹ ಬೇರೆ ರೀತಿಯಲ್ಲಿ ಮೋಸ ಹೋಗಿದ್ದರು. ಪಾರ್ಟ್ ಜಾಬ್ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡಿ ₹೧೪,೭೭,೧೩೫ ಪಡೆದುಕೊಂಡಿದ್ದರು. ಈ ಬಗ್ಗೆ ಅವರು ಸಹ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ನಡೆಸಿದ ಪರಿಣಾಮವಾಗಿ ದೊಡ್ಡ ಜಾಲವನ್ನೇ ಪೊಲೀಸರು ಮಟ್ಟ ಹಾಕಿದ್ದಾರೆ ಎಂದರು.

ಪೊಲೀಸ್ ಅಧಿಕಾರಿ ಸುನೀಲಕುಮಾರ ನಂದೇಶ್ವರ ನೇತೃತ್ವದ ತನಿಖಾ ತಂಡು ತಾಂತ್ರಿಕ ಸಾಕ್ಷಾಧಾರಗಳ ಮೂಲಕ ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಆಧರಿಸಿ ಹರಿಯಾಣ ಮತ್ತು ರಾಜ್ಯಸ್ಥಾನ ಆರೋಪಿಗಳನ್ನು ಬಂಧಿಸಿದೆ ಎಂದರು.