ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಕೇಸ್‌ ದಾಖಲು

| Published : Jun 02 2025, 12:02 AM IST

ಸಾರಾಂಶ

ಕನ್ನಡದ ಇಬ್ಬರು ಸ್ಟಾರ್ ನಟರ ಜತೆ ಹೊಸ ಚಲನಚಿತ್ರ ನಿರ್ಮಾಣಕ್ಕೆ ಲಕ್ಷಾಂತರ ರು. ಸಾಲ ಪಡೆದು ಮರಳಿಸದೆ ಉದ್ಯಮಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಚಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡದ ಇಬ್ಬರು ಸ್ಟಾರ್ ನಟರ ಜತೆ ಹೊಸ ಚಲನಚಿತ್ರ ನಿರ್ಮಾಣಕ್ಕೆ ಲಕ್ಷಾಂತರ ರು. ಸಾಲ ಪಡೆದು ಮರಳಿಸದೆ ಉದ್ಯಮಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಚಲನಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಎಚ್.ಜಿ.ಲಕ್ಷ್ಮೀ ಅವರು ಸಂತ್ರಸ್ತರಾಗಿದ್ದು, ಖ್ಯಾತ ನಟರಾದ ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರ ನಟನೆ ಹೊಸ ಚಲನಚಿತ್ರ ನಿರ್ಮಿಸುವುದಾಗಿ ನಂಬಿಸಿ 92 ಲಕ್ಷ ರು. ಸಾಲ ಪಡೆದು, ಕೇವಲ 25 ಲಕ್ಷ ಹಿಂದಿರುಗಿಸಿದ್ದಾರೆ. ಬಾಕಿ 67 ಲಕ್ಷ ರು. ಅನ್ನು ಸೂರಪ್ಪ ಬಾಬು ವಾಪಸ್‌ ನೀಡಿಲ್ಲ ಎಂದು ಲಕ್ಷ್ಮೀ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಲಕ್ಷ್ಮೀ ಅವರು, ಚಲನಚಿತ್ರ ನಿರ್ಮಾಣ ಜತೆ ಲೇವಾದೇವಿ ವ್ಯವಹಾರ ಸಹ ನಡೆಸುತ್ತಾರೆ. ಸೂರಪ್ಪ ಬಾಬು ನಮ್ಮ ಮನೆಗೆ ಬಂದು ಶಿವರಾಜ್ ಕುಮಾರ್ ಹಾಗೂ ಗಣೇಶ್ ಅವರ ನಟನೆಯಲ್ಲಿ ಕೆ.ಎಸ್‌.ರವಿಕುಮಾರ್‌ ನಿರ್ದೇಶನದಲ್ಲಿ ಪ್ರೋಡಕ್ಷನ್‌ 06 ಹೆಸರಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದೇನೆ. ಇದಕ್ಕೆ ಸಾಲ ರೂಪದಲ್ಲಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಹಂತ ಹಂತವಾಗಿ ₹92 ಲಕ್ಷ ಸಾಲ ನೀಡಲಾಯಿತು. ಆದರೆ ಪೂರ್ವ ಒಪ್ಪಂದಂತೆ ಸಾಲದ ಪೈಕಿ ₹25 ಲಕ್ಷ ಮಾತ್ರ ಸಕಾಲಕ್ಕೆ ಮರಳಿಸಿದರು. ಇನ್ನುಳಿದ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಲಕ್ಷ್ಮೀ ಆರೋಪಿಸಿದ್ದಾರೆ.

ಈ ಸಾಲದ ಸಂಬಂಧ ಪರಸ್ಪರ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಾಲ ಹಣ ಕೊಡಲು ಹಿಂದೇಟು ಹಾಕಿದಾಗ ಚಲನಚಿತ್ರ ಬಗ್ಗೆ ವಿಚಾರಿಸಿದಾಗ ನಟರಾದ ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ನಟನೆಯಲ್ಲಿ ಸೂರಪ್ಪ ಬಾಬು ಯಾವುದೇ ಚಿತ್ರ ನಿರ್ಮಿಸುತ್ತಿಲ್ಲ ಎಂಬುದು ಗೊತ್ತಾಯಿತು ಎಂದು ಲಕ್ಷ್ಮೀ ಗಂಭೀರ ಆರೋಪ ಮಾಡಿದ್ದಾರೆ.