ಸಾರಾಂಶ
ರಾಯಭಾರ ಕಚೇರಿಯಿಂದ ಮಾತನಾಡುತ್ತಿರುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರು. ವರ್ಗಾಯಿಸಿಕೊಂಡ ಘಟನೆ ನಡೆದಿದೆ. ನಗರದ ಕಿನ್ನಿಮೂಲ್ಕಿಯ ಸಂದೇಶ್ ವಂಚನೆಗೊಳಗಾದವರು.
ಕನ್ನಡಪ್ರಭ ವಾರ್ತೆ ಉಡುಪಿಭಾರತೀಯ ರಾಯಭಾರ ಕಚೇರಿಯಿಂದ ಮಾತನಾಡುತ್ತಿರುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರು. ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ನಗರದ ಕಿನ್ನಿಮೂಲ್ಕಿಯ ಸಂದೇಶ್ (25) ವಂಚನೆಗೊಳಗಾದವರು. ಅವರು 2024ರಿಂದ ಐರ್ಲೆಂಡ್ನ ಡಬ್ಲಿನ್ನಲ್ಲಿ ಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ರಜೆಯಲ್ಲಿ ಊರಿಗೆ ಬಂದಿದ್ದಾರೆ. ಜು.30ರಂದು ಅಪರಿಚಿತ ವ್ಯಕ್ತಿ ಅವರಿಗೆ ಕರೆ ಮಾಡಿ ನಾನು ಭಾರತೀಯ ರಾಯಭಾರಿ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನೀವು ಐರ್ಲೆಂಡ್ನಲ್ಲಿ ಸಲ್ಲಿಸಿದ ಐಆರ್ಪಿ ಅರ್ಜಿಯಲ್ಲಿ ನಮೂದಿಸಿದ ಜನ್ಮದಿನಾಂಕ ತಪ್ಪಾಗಿದೆ. ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ಪಾಸ್ಪೋರ್ಟನ್ನು ಯೆಲ್ಲೋ ಗ್ರೂಪ್ಗೆ ಸೇರಿಸಿ ನಿಮ್ಮ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಹೆದರಿಸಿದ. ಅದನ್ನು ನಂಬಿದ ಸಂದೇಶ್, ಆರೋಪಿಯು ನೀಡಿದ ಇಮೇಲ್ ಐಡಿಗೆ ತನ್ನ ಆಧಾರ್ ಕಾರ್ಡ್, ಜನ್ಮ ಪ್ರಮಾಣಪತ್ರ ಮತ್ತು ಮತದಾರರ ಚುನಾವಣೆ ಗುರುತಿನ ಚೀಟಿ ನಕಲು ಪ್ರತಿಗಳನ್ನು ಕಳುಹಿಸಿದರು. ಅನಂತರ ಆರೋಪಿಯು ಸಂದೇಶ್ ಅವರಲ್ಲಿ ಭದ್ರತೆಯ ನೆಪ ಹೇಳಿ ವಿವಿಧ ಖಾತೆಗಳಿಗೆ ಹಣ ಕಳುಹಿಸಲು ಹೇಳಿ, ಜನ್ಮದಿನಾಂಕ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಹಿಂದಿರುಗಿಸುತ್ತೇವೆ ಎಂದು ಹೇಳಿದ್ದನು.ಅದರಂತೆ ಸಂದೇಶ್ ಆರೋಪಿ ನೀಡಿದ ಖಾತೆಗಳಿಗೆ ತನ್ನ ಹಾಗೂ ತಂದೆಯ ಖಾತೆಯಿಂದ ಒಟ್ಟು 1,00,663 ರು.ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದರು. ಅಪರಿಚಿತನು ಮತ್ತಷ್ಟು ಹಣವನ್ನು ನೀಡುವಂತೆ ಪೀಡಿಸಿದಾಗ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.