ಕನ್ನಡಪ್ರಭ ವಾರ್ತೆ ನಾಗಮಂಗಲ
ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ 81ನೇ ಜಯಂತ್ಯುತ್ಸವ ಹಾಗೂ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಪಟ್ಟಾಭಿಷೇಕದ ಸವಿನೆನಪಿಗಾಗಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 81 ಮಂದಿಗೆ ಉಚಿತವಾಗಿ ಕೃತಕ ಮಂಡಿ ಕೀಲು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಕೆ.ಎಸ್.ರವಿ ತಿಳಿಸಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಗ್ರಾಮೀಣ ಪ್ರದೇಶದ ವ್ಯಕ್ತಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ರೈತಾಪಿ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಎಲ್ಲರಿಗೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇನ್ನು ಮುಂದೆ ಎಲ್ಲರಂತೆ ಸಹಜವಾಗಿ ನಡೆದಾಡಬಹುದು, ಹೊಲ ಗದ್ದೆಗಳಲ್ಲಿ ಯಾವುದೇ ನೋವಿಲ್ಲದೆ ಸಹಜವಾಗಿ ಕೆಲಸ ಮಾಡಬಹುದು ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ನುರಿತ ವೈದ್ಯರ ತಂಡದಿಂದ ಶಸ್ತ್ರ ಚಿಕಿತ್ಸೆ ನಡೆಸಿ ಉಚಿತ ಔಷಧಿ, ಪರೀಕ್ಷೆಗಳು ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಶಸ್ತ್ರ ಚಿಕಿತ್ಸೆಗೆ ಇತರೆ ಆಸ್ಪತ್ರೆಗಳಲ್ಲಾಗಿದ್ದರೆ ಸುಮಾರು ₹2 ಲಕ್ಷ ಖರ್ಚಾಗುತ್ತಿತ್ತು. ಇದಕ್ಕಾಗಿ ಶ್ರೀಮಠದ ವತಿಯಿಂದಲೇ ₹2 ಕೋಟಿ ವ್ಯಯಿಸಲಾಗಿದೆ ಎಂದು ಹೇಳಿದರು.ಖ್ಯಾತ ಮೂಳೆ ತಜ್ಞ ಡಾ. ಡಿ.ವಿ. ಮಹೇಶ್ ಮಾತನಾಡಿ, ಯಾವುದೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಇರಬಹುದಾದ ಉತ್ತಮ ಸೌಲಭ್ಯ ಗುಣಮಟ್ಟದ ಚಿಕಿತ್ಸೆಗಿಂತಲೂ ಮಿಗಿಲಾದ ಸೌಲಭ್ಯಗಳು ಮತ್ತು ಉತ್ತಮ ಚಿಕಿತ್ಸೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶದ ಬಡಜನರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತದೆ. ಇದನ್ನು ಮನ ಗಂಡು ಡಾ. ನಿರ್ಮಲಾನಂದನಾಥಶ್ರೀಗಳು ಆರ್ಥಿಕವಾಗಿ ದುರ್ಬಲವಾಗಿರುವ ಅಸಕ್ತರಿಗೆ ಚಿಕಿತ್ಸೆ ನೀಡಿದರೆ ಅವರ ಬದುಕು ಉಜ್ವಲವಾಗಲಿದೆ ಎಂದು ಚಿಂತಿಸಿ ಇಂತಹ ಮಹತ್ಕಾರ್ಯಕ್ಕೆ ಪ್ರೇರಣೆಯಾಗಿದ್ದಾರೆ. ಮಂಡಿ ನೋವು ಮತ್ತು ಸೊಟ್ಟ ಕಾಲುಗಳನ್ನು ಯಶಸ್ವಿ ಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ ಎಂದರು.
ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧಮೇಂದ್ರ ಮಾತನಾಡಿ, ಆದಿಚುಂಚನಗಿರಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದ ಜನತೆಗೆ ಕಳೆದ 30 ವರ್ಷಗಳಿಂದಲೂ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಅಲ್ಲದೆ ನೂರಾರು ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಲಕ್ಷಾಂತರ ಮಂದಿಗೆ ಆರೋಗ್ಯವನ್ನು ಕಲ್ಪಿಸಿದೆ ಎಂದು ತಿಳಿಸಿದರು.
ಉಚಿತ ಕೃತಕ ಕೈ ಮತ್ತು ಕಾಲು ಜೋಡಣೆ,ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ವಿರೂಪ ಮಕ್ಕಳ ಸೀಳು ತುಟಿ ಮತ್ತು ಅಂಗುಳ ಚಿಕಿತ್ಸೆಯನ್ನು ಅಮೆರಿಕಾದ ನುರಿತ ವೈದ್ಯರ ತಂಡದಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
38 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ರೇಡಿಯೋ ಥೆರಪಿ ಘಟಕ:ಕ್ಯಾನ್ಸರ್ ಪೀಡಿತರಿಗೆ ಇನ್ನು ಮುಂದೆ ನಮ್ಮ ಆಸ್ಪತ್ರೆಯಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವ ಸಂಕಲ್ಪವನ್ನು ನಿರ್ಮಲಾನಂದನಾಥ ಶ್ರೀಗಳು ಮಾಡಿದ್ದಾರೆ. ದೂರದ ಊರುಗಳಿಗೆ ಹೋಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ರೇಡಿಯೋ ಥೆರಪಿಯನ್ನು ಮಾಡಲಾಗುವುದು ಎಂದರು.
ನಮ್ಮಲ್ಲಿ ಸಿಗುವ ಗುಣಮಟ್ಟದ ಸೌಲಭ್ಯ ಮಂಡ್ಯ, ಹಾಸನ, ತುಮಕೂರು, ಮೈಸೂರು ಸೇರಿದಂತೆ ಐದಾರು ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. 38 ಕೋಟಿ ವೆಚ್ಚದಲ್ಲಿ ರೇಡಿಯೋ ಥೆರಪಿ ಘಟಕ ಸ್ಥಾಪನೆ ಮಾಡಲಾಗಿದೆ. ಈ ಸೌಲಭ್ಯ ಸೆ.25 ರಿಂದ ಸಿಗಲಿದೆ. ಅಂದು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಪಟ್ಟಾಭಿಷೇಕದ ದಿನವಾಗಿದೆ. ಆ ಸವಿನೆನಪಿಗಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.ಅತ್ಯಂತ ಕಡಿಮೆ ದರದಲ್ಲಿ ಹೆರಿಗೆ:
ಆದಿಚುಂಚನಗಿರಿ ಆಸ್ಪತ್ರೆ ಹೆರಿಗೆ ವಿಭಾಗ ಅತ್ಯಂತ ಕ್ರಿಯಾಶೀಲತೆಯಿಂದ ಸೇವೆ ಮಾಡುತ್ತಿದೆ. ನುರಿತ ವೈದ್ಯರ ತಂಡ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಹೆಣ್ಣು ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇನ್ನು ಮುಂದೆ ಅತ್ಯಂತ ಕಡಿಮೆ ದರದಲ್ಲಿ ಹೆರಿಗೆ ಸೌಲಭ್ಯ ಸಿಗಲಿದೆ. ಸಹಜ ಹೆರಿಗೆಗೆ ₹5 ಸಾವಿರ ಮತ್ತು ಶಸ್ತ್ರ ಚಿಕಿತ್ಸೆ ಹೆರಿಗೆಗೆ ₹10 ಸಾವಿರ ಹಣವನ್ನು ಪ್ಯಾಕೇಜ್ ಮೂಲಕ ನಿಗದಿ ಮಾಡಲಾಗಿದೆ. ಇದರಲ್ಲಿ ಔಷಧಿ, ಪರೀಕ್ಷೆಗಳು, ಸ್ಕ್ಯಾನಿಂಗ್, ಊಟ ಎಲ್ಲವೂ ಸೇರಿರುತ್ತವೆ ಎಂದರು.ಆಸ್ಪತ್ರೆಯಲ್ಲಿ ನ್ಯೂರೋ ರಿಯಾಬ್ ಸೆಂಟರ್ ಸ್ಥಾಪಿಸಲಾಗಿದೆ. ಇದರಿಂದ ನರ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರಕಲಿದೆ. ಸೌಂದರ್ಯ ವರ್ಧಕ ಸರ್ಜರಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೃತಕ ಮಂಡಿ ಕೀಲು ಜೋಡಣಾ ಶಸ್ತ್ರ ಚಿಕಿತ್ಸೆಯ ಫಲಾನುಭವಿಗಳು ಮಾತನಾಡಿ, ಶ್ರೀಮಠದ ಪೀಠಾಧ್ಯಕ್ಷರ ಕೃಪೆಯಿಂದಾಗಿ ಹಲವು ವರ್ಷಗಳಿಂದ ಕೀಲು ನೋವಿನಿಂದ ಬಳಲುತ್ತಿದ್ದ ನಾವು ಈಗ ಎಲ್ಲರಂತೆ ಸಹಜವಾಗಿ ಕೆಲಸ ಮಾಡುವಂತಾಗಿದೆ. ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ, ಊಟ, ಔಷಧೋಪಚಾರ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ಕೊಟ್ಟಿದ್ದಾರೆ. ಆದಿಚುಂಚನಗಿರಿ ಆಸ್ಪತ್ರೆಯು ಬಡಜನರ ಆಶಾಕಿರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.