ಯುವ ವಿಪ್ರ ವೇದಿಕೆ ಟ್ರಸ್ಟ್ ಬೆಂಗಳೂರು ವತಿಯಿಂದ ಟ್ರಸ್ಟ್‌ನ ಸದಸ್ಯರು ಹಾಗೂ ಕುಟುಂಬ ಸದಸ್ಯರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಗಿರಿನಗರದ ಅನಂತ ಪರ್ವ ಹಾಲ್‌ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವ ವಿಪ್ರ ವೇದಿಕೆ ಟ್ರಸ್ಟ್ ಬೆಂಗಳೂರು ವತಿಯಿಂದ ಟ್ರಸ್ಟ್‌ನ ಸದಸ್ಯರು ಹಾಗೂ ಕುಟುಂಬ ಸದಸ್ಯರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಗಿರಿನಗರದ ಅನಂತ ಪರ್ವ ಹಾಲ್‌ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.ಶಿಬಿರವನ್ನು ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಪ್ರಭಾವತಿ ಉದ್ಘಾಟಿಸಿದರು. ವಿವಿಧ ವೈದ್ಯಕೀಯ ವಿಭಾಗಗಳ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು.

ಹೃದಯ ತಪಾಸಣೆ, ಸಾಮಾನ್ಯ ವೈದ್ಯಕೀಯ ಹಾಗೂ ಮಧುಮೇಹ, ಸ್ತ್ರೀರೋಗ, ಮೂಳೆ-ಸಂಧಿ ಹಾಗೂ ನೇತ್ರ ತಪಾಸಣೆ ಸೇರಿದಂತೆ ವಿವಿಧ ವಿಭಾಗಗಳ ಸೇವೆಗಳು ಶಿಬಿರದಲ್ಲಿ ಲಭ್ಯವಿದ್ದವು. ಡಾ.ಪ್ರಭಾವತಿ, ಡಾ.ಅರುಣ್ ಬಿ.ಎಸ್, ಡಾ.ಸೂರ್ಯ ಪ್ರಕಾಶ್, ಡಾ.ಮಂಜು ಭಾರ್ಗವ್, ಡಾ.ಮಹೇಶ್ ಪಿ., ಡಾ.ಸರಸ್ವತಿ ಐತಾಳ್, ಡಾ.ಅರುಂಧತಿ ಹೇರ್ಲೆ, ಡಾ.ಶ್ರೀನಿಧಿ ಐ.ಎಸ್. ಹಾಗೂ ಡಾ.ಶಾರದಾ ಎಂ. ಸೇರಿದಂತೆ ತಜ್ಞ ವೈದ್ಯರು ಸೇವೆ ಸಲ್ಲಿಸಿದರು.

ಶಿಬಿರದಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ಕಾನ್ಸರ್ ಸ್ಕ್ರೀನಿಂಗ್ ಹಾಗೂ ಮೂಳೆ ಸಾಂದ್ರತೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ‘ಆಹಾರವೇ ಔಷಧಿ-ನಿಮ್ಮ ತಟ್ಟೆಯಲ್ಲಿ ಏನಿರಬೇಕು?’ ಎಂಬ ವಿಷಯದ ಕುರಿತು ಡಾ.ಸರಸ್ವತಿ ಐತಾಳ್ ಉಪನ್ಯಾಸ ನೀಡಿದರು. ಆರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಅವರು ಮಾಹಿತಿ ನೀಡಿದರು.

ವೇದಿಕೆಯ ಸದಸ್ಯರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಹಾಗೂ ರಕ್ತದಾನದ ಮಹತ್ವವನ್ನು ಸಾರುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದು ಯುವ ವಿಪ್ರ ವೇದಿಕೆಯ ಅಧ್ಯಕ್ಷ ರವೀಂದ್ರ ಭಟ್ ಕೆ ಹೇಳಿದರು. ಕಾರ್ಯಕ್ರಮದಲ್ಲಿ ಮಾತಾಸ್ ಕಾಫಿ ಮಾಲೀಕ ವಿಶ್ವನಾಥ ಅಡಿಗ, ಟ್ರಸ್ಟಿಗಳಾದ ಕುಮಾರ್ ಭಾಗವತ್, ರಮೇಶ್ ಭಾಗವತ್ ಉಪಸ್ಥಿತರಿದ್ದರು.