ಆಟೋ ಚಾಲಕನಿಂದ ಉದ್ಯಮ ದಿಗ್ಗಜ... ಸತ್ಯಶಂಕರ್ ಭಟ್ ಯಶೋಗಾಥೆಯ ಷಷ್ಟ್ಯಬ್ಧ ಸಂಭ್ರಮ

| Published : May 24 2025, 12:08 AM IST

ಆಟೋ ಚಾಲಕನಿಂದ ಉದ್ಯಮ ದಿಗ್ಗಜ... ಸತ್ಯಶಂಕರ್ ಭಟ್ ಯಶೋಗಾಥೆಯ ಷಷ್ಟ್ಯಬ್ಧ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಜಿ. ಸಮೂಹ ಸಂಸ್ಥೆಗಳ ರೂವಾರಿ, ಸತ್ಯಶಂಕರ್ ಭಟ್ ಅವರ ಜೀವನದ 60 ವಸಂತಗಳ ಸಂಭ್ರಮ, ಪುತ್ತೂರಿನ ನರಿಮೊಗರಿನಲ್ಲಿರುವ ಎಸ್‌.ಜಿ. ಫಾರ್ಮ್‌ನಲ್ಲಿ ಅದ್ದೂರಿಯಾಗಿ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಒಂದು ‘ಬಿಂದು’ವಿನಿಂದ ಆರಂಭಿಸಿ, ಅದನ್ನು ಯಶಸ್ಸಿನ ‘ಸಿಂಧು’ವಾಗಿ ಪರಿವರ್ತಿಸಿದ ಎಸ್.ಜಿ. ಸಮೂಹ ಸಂಸ್ಥೆಗಳ ರೂವಾರಿ, ಸತ್ಯಶಂಕರ್ ಭಟ್ ಅವರ ಜೀವನದ 60 ವಸಂತಗಳ ಸಂಭ್ರಮ, ಪುತ್ತೂರಿನ ನರಿಮೊಗರಿನಲ್ಲಿರುವ ಎಸ್‌.ಜಿ. ಫಾರ್ಮ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

ಗ್ರಾಮೀಣ ಕನ್ನಡ ಶಾಲೆಯ ಅಂಗಳದಿಂದ ಜಗತ್ತಿನ ಉದ್ಯಮ ಭೂಪಟದಲ್ಲಿ ತಮ್ಮದೇ ಛಾಪು ಮೂಡಿಸಿದ ಸತ್ಯಶಂಕರ್ ಅವರ ಜೀವನಯಾನ ಒಂದು ಸ್ಫೂರ್ತಿದಾಯಕ ಕಥನ. ಅವರ ಈ ಕ್ರಾಂತಿಕಾರಿ ಬದುಕಿನ ಪುಟಗಳನ್ನು ಈ ಕಾರ್ಯಕ್ರಮದಲ್ಲಿ ತೆರೆದಿಡಲಾಯಿತು.

ಸುಮಾರು ನಾಲ್ಕು ದಶಕಗಳ ಹಿಂದೆ, ಆರ್ಥಿಕ ಅಡಚಣೆಯಿಂದ ಪಿಯುಸಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಕೇವಲ 15 ಸಾವಿರ ರುಪಾಯಿಗಳ ಬ್ಯಾಂಕ್ ಸಾಲ ಮತ್ತು 5 ಸಾವಿರ ರುಪಾಯಿಗಳ ಸರ್ಕಾರಿ ಸಹಾಯಧನದಿಂದ ಆಟೋರಿಕ್ಷಾ ಚಾಲಕನಾಗಿ ಜೀವನ ಆರಂಭಿಸಿದ ಓರ್ವ ಯುವಕ, ಈಗ 850 ಕೋಟಿ ರುಪಾಯಿಗಳ ವಹಿವಾಟು ನಡೆಸುವ ಬೃಹತ್ ಸಾಮ್ರಾಜ್ಯದ ಅಧಿಪತಿಯಾಗಿ ಬೆಳೆದ ರೋಚಕ ಪಯಣವನ್ನು ವಿಡಿಯೋ ಸಾಕ್ಷ್ಯಚಿತ್ರದ ಮೂಲಕ ಅನಾವರಣಗೊಳಿಸಲಾಯಿತು. ಇದು ‘ಶೂನ್ಯದಿಂದ ಶಿಖರಕ್ಕೆ’ ಸಾಗಿದ ಅವರ ಅದಮ್ಯ ಸಾಹಸಕ್ಕೆ ಹಿಡಿದ ಕನ್ನಡಿಯಂತಿತ್ತು.

ಈ ಶುಭ ಸಂದರ್ಭದಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ ಚೌಟ, ಶಾಸಕ ಅಶೋಕ್ ಕುಮಾರ್‌ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ನಾಡಿನ ಗಣ್ಯ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಆಗಮಿಸಿ ಸತ್ಯಶಂಕರ್ ಭಟ್ ಅವರಿಗೆ ಶುಭ ಹಾರೈಸಿ, ಅವರ ಸಾಧನೆಯನ್ನು ಕೊಂಡಾಡಿದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ನಿರ್ದೇಶಕಿಯರಾದ ಮೇಘಾ ಶಂಕರ್, ಮಹಿಮಾ ಶಂಕರ್, ನಿರ್ದೇಶಕ ಮನಸ್ವಿತ್ ಶಂಕರ್ ಹಾಗೂ ಸುಧನ್ವ ಬಿ. ಅಚಾರ್ಯ ಈ ಸಂಭ್ರಮಕ್ಕೆ ಸಾಕ್ಷಿಯಾದರು.

‘ಬಿಂದು’ ಮಿನರಲ್ ವಾಟರ್, ‘ಬಿಂದು’ ಜೀರಾ, ಸಿಪ್ಅನ್ ನಂತಹ 50ಕ್ಕೂ ಅಧಿಕ ಜನಪ್ರಿಯ ಪಾನೀಯಗಳು ಮತ್ತು ಕ್ರಿಸ್ಟಿ ತಿನಿಸುಗಳ ಮೂಲಕ ಮನಮಾತಾಗಿರುವ ಎಸ್.ಜಿ. ಸಮೂಹ ಸಂಸ್ಥೆಗಳ ಮೂಲಕ ಸತ್ಯಶಂಕರ್ ಅವರು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಗ್ರಾಮೀಣ ಭಾಗದ ಸಹಸ್ರಾರು ಕುಟುಂಬಗಳಿಗೆ ಆಶಾಕಿರಣವಾಗಿದ್ದಾರೆ. ತಮ್ಮ ವ್ಯಾಪಾರ ಜಾಲವನ್ನು ತೆಲಂಗಾಣ ರಾಜ್ಯಕ್ಕೂ ವಿಸ್ತರಿಸಿ, ಯಶಸ್ಸಿನ ಪತಾಕೆಯನ್ನು ಹಾರಿಸಿದ್ದಾರೆ. ಇದೀಗ ಬಿಂದು ಸಾಮ್ರಾಜ್ಯ ಅಂಧ್ರಪ್ರದೇಶದ ವಿಶಾಖಪಟ್ಟಣಂಗೂ ವಿಸ್ತರಣೆಗ ಜೂನ್ ತಿಂಗಳಲ್ಲಿ ಹೊಸ ಕಂಪನಿ ವಿಶಾಖಪಟ್ಟಣಂನಲ್ಲಿ ಶುಭಾರಂಭಗೊಳ್ಳಲಿದೆ.

ಸತ್ಯಶಂಕರ್ ಭಟ್ ಅವರ ಜೀವನಗಾಥೆ ‘ದುಡಿದರೆ ದುಃಖವಿಲ್ಲ’ ಎಂಬ ಮಾತಿಗೆ ಹಿಡಿದ ಕನ್ನಡಿಯಂತಿದ್ದು, ಅದೆಷ್ಟೋ ಯುವಕರಿಗೆ ಪ್ರೇರಣೆಯ ಸೆಲೆಯಾಗಿದೆ.