ಸಾರಾಂಶ
ಬನವಾಸಿಯಲ್ಲಿ ಮಾ. ೫ ಮತ್ತು ೬ರಂದು ಕದಂಬೋತ್ಸವ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ.
ಶಿರಸಿ:
ಪಂಪ ಪ್ರಶಸ್ತಿಯನ್ನು ಕದಂಬೋತ್ಸವ ವೇದಿಕೆಯಲ್ಲಿಯೇ ಪ್ರದಾನ ಮಾಡುವ ಕುರಿತು ಮುಂದಿನ ವರ್ಷ ಕ್ರಮ ವಹಿಸಲಾಗುವುದಲ್ಲದೇ, ಇದು ಮರುಕಳಿಸಿದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಶನಿವಾರ ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಿರುವ ವಿಷಯ ವಿಳಂಬವಾಗಿ ತಿಳಿದು ಬಂದಿದೆ. ನಂತರ ಇದರ ಕುರಿತು ವಿಚಾರಿಸಿದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ೭ ಪ್ರಶಸ್ತಿಗಳು ಪ್ರದಾನವಾಗಬೇಕಿತ್ತು. ಅದರ ಜತೆ ಪಂಪ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ನಾ. ಡಿಸೋಜಾ ಅವರ ಆರೋಗ್ಯ ಪರಿಸ್ಥಿತಿಯೂ ಗಂಭೀರವಾಗಿದ್ದು, ಬೆಂಗಳೂರಿನಲ್ಲಿ ಆದರೆ ಬರುತ್ತೇನೆ ಎಂದು ಹೇಳಿದ್ದರು. ಆ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನೀಡಿದ್ದಾರೆ ಎಂದು ತಿಳಿದು ಬಂದಿದೆ ಎಂದರು.ಬನವಾಸಿಯಲ್ಲಿ ಮಾ. ೫ ಮತ್ತು ೬ರಂದು ಕದಂಬೋತ್ಸವ ಆಚರಿಸಲಾಗುತ್ತದೆ. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಧಾನಸೌಧದಲ್ಲಿ ಭೇಟಿಯಾದ ಸಂದರ್ಭದಲ್ಲಿ ಹೇಳಿದ್ದಾರೆ ಎಂದ ಅವರು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಕದಂಬೋತ್ಸವ ನಡೆಯುವುದಿಲ್ಲ ಎಂದರು.ಅನುದಾನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ, ಕದಂಬೋತ್ಸವಕ್ಕೆ ಅನುದಾನ ಬಿಡುಗಡೆ ಬಗ್ಗೆ ಸಮರ್ಥ ಉಸ್ತುವಾರಿ ಸಚಿವರಿದ್ದಾರೆ. ಅದನ್ನೆಲ್ಲವೂ ನಿಭಾಯಿಸುತ್ತಾರೆ. ಕದಂಬೋತ್ಸವ ಜನೋತ್ಸವವಾಗಬೇಕೆಂಬುದು ಎಲ್ಲರ ಆಸೆ. ಸರ್ಕಾರ ನಿರ್ಧರಿಸುವ ಉತ್ಸವ. ಸರ್ಕಾರದಿಂದಲೇ ಮಾಹಿತಿ ಪಡೆಯಬೇಕು ಎಂದು ನುಣುಚಿಕೊಂಡರು.