ಸಾರಾಂಶ
ಭಾರತೀಯ ಮೂಲದ ಯೋಗ ಮತ್ತು ಆಯುರ್ವೇದದ ಮೂಲಕ ಭಾರತ ವಿಶ್ವ ಗುರುವಿನ ಸ್ಥಾನ ಹೊಂದುವ ಅರ್ಹತೆಯನ್ನು ಹೊಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭಾರತೀಯ ಮೂಲದ ಯೋಗ ಮತ್ತು ಆಯುರ್ವೇದದ ಮೂಲಕ ಭಾರತ ವಿಶ್ವ ಗುರುವಿನ ಸ್ಥಾನ ಹೊಂದುವ ಅರ್ಹತೆಯನ್ನು ಹೊಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.11 ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ತೀರ್ಥಹಳ್ಳಿ ಪಟ್ಟಣದ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಶನಿವಾರ ಸಂಜೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಾರತ ಜಗತ್ತಿನ ಹಿತಕ್ಕೆ ನೀಡಿದ ಈ ಕೊಡುಗೆಯನ್ನು ಪ್ರಸ್ಥುತ 190 ರಾಷ್ಟ್ರಗಳು ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಗುರುವಿನ ಸ್ಥಾನದಲ್ಲಿದೆ ಎಂದು ಹೇಳಿದರು.
ಜಗತ್ತು ಶಾಂತವಾಗಿರಲು ಋಷಿ ಮುನಿಗಳ ಪರಿಶ್ರಮದಿಂದ ಸಂಶೋಧನೆ ಮಾಡಿರುವ ಯೋಗದ ಅನುಸರಣೆ ಸಹಕಾರಿಯಾಗಿದೆ. ಇಂದಿಗೆ ಸರಿಯಾಗಿ 11 ವರ್ಷದ ಹಿಂದೆ ವಿಶ್ವಸಂಸ್ಥೆಯಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದ ಪರಿಣಾಮ ಜಗತ್ತಿನ ಬಹುತೇಕ ರಾಷ್ಟ್ರಗಳು ಯೋಗವನ್ನು ಅನುಸರಿಸುತ್ತಿದ್ದು, ಇಂದಿನ ದಿನ ಈ ವರ್ಷದ ಘೋಷವಾಕ್ಯವಾದ ಒನ್ಅರ್ಥ್ ಒನ್ಹೆಲ್ತ್ ಘೋಷಣೆಯೊಂದಿಗೆ ವಿಶ್ವಯೋಗ ದಿನಾಚರಣೆಯನ್ನು ಕೂಡ ಆಚರಿಸುತ್ತಿವೆ. ಯೋಗ ಮತ್ತು ಆಯುರ್ವೇದದ ಸಂಶೋಧನೆಗೆ ಅಪಾರ ಮಂದಿ ತಮ್ಮ ಬದುಕನ್ನು ಕೊಟ್ಟು ಮನುಕುಲಕ್ಕ ಕೊಡುಗೆ ನೀಡಿದ್ದಾರೆ ಎಂದೂ ಹೇಳಿದರು.ದಿಕ್ಸೂಚಿ ಭಾಷಣ ಮಾಡಿದ ಚಿಂತಕ ದಾಮೋದರ ಶರ್ಮಾ, ಇಂದಿನ ಶುಭ ಅವಸರದಲ್ಲಿ ಜಾತಿ ಮತ ಪಂಗಡದ ಸಲುವಾಗಿ ಸಂಘರ್ಷಕ್ಕಿಳಿಯದೇ ಭಾರತೀಯ ಸಂಸ್ಕೃತಿಯ ಘನತೆಯನ್ನು ಮೆರೆಯುವ ಮೂಲಕ ಸಮೃದ್ದ ನಾಡನ್ನು ಕಟ್ಟುವ ಸಂಕಲ್ಪ ತೊಡಬೇಕಿದೆ. ಯುವ ಜನತೆ ಹದಿಹರೆಯದ ಬಯಕೆಗೆ ಬಲಿಯಾಗದೇ ಹೆತ್ತವರನ್ನು ಸಂಧ್ಯಾಕಾಲದಲ್ಲಿ ಅವರನ್ನು ಮಕ್ಕಳಂತೆಯೇ ಸಲಹುವ ಅಗತ್ಯವನ್ನು ಮನಗಾಣಬೇಕಿದೆ ಎಂದರು. ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ನ ಗೌರವಾಧ್ಯಕ್ಷ ಡಾ. ಜೀವಂಧರಜೈನ್ ಸಮಯೋಚಿತವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮದ ನಂತರ ಯೋಗ ಶಿಕ್ಷಣ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.