ಅಧಿಕೃತ ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಾಲೂಕು ಪರವಾನಿಗೆ ಪಡೆದ(ದಸ್ತು) ಪತ್ರ ಬರಹಗಾರರ ಸಂಘದಿಂದ ನಗರದ ಚನ್ನಗಿರಿ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಭದ್ರಾವತಿ: ಅಧಿಕೃತ ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಾಲೂಕು ಪರವಾನಿಗೆ ಪಡೆದ(ದಸ್ತು) ಪತ್ರ ಬರಹಗಾರರ ಸಂಘದಿಂದ ನಗರದ ಚನ್ನಗಿರಿ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪತ್ರ ಬರಹಗಾರರಲ್ಲದ ಹಾಗೂ ಪರವಾನಿಗೆ ಪಡೆಯದ ವ್ಯಕ್ತಿಗಳಿಂದ ಪರವಾನಿಗೆ ಪಡೆದ ಅಧಿಕೃತ ಪತ್ರ ಬರಹಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಸಮಸ್ಯೆ ಉಲ್ಬಣವಾಗುತ್ತಿದೆ. ಇತ್ತೀಚೆಗೆ ಕಾವೇರಿ ೨.೦ ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಅಳವಡಿಸಿದ್ದು, ಇದರ ಮೂಲಕವಾಗಿ ದಸ್ತಾವೇಜುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಅನಧಿಕೃತ ವ್ಯಕ್ತಿಗಳು ಪತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇದರಿಂದ ವೃತ್ತಿಯನ್ನು ನಂಬಿ ಬುದುಕುತ್ತಿರುವ ಅಧಿಕೃತ ಪತ್ರ ಬರಹಗಾರರು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಈಗಾಗಲೇ ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋರ್ಪಡಿಸಿದರು. ಹೊರ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು. ನೋಂದಣಿಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಅಧಿಕೃತ ಪತ್ರ ಬರಹಗಾರರ ಅಥವಾ ವಕೀಲರ ಬಿಕ್ಕಲಂ ಕಡ್ಡಾಯಗೊಳಿಸುವುದು. ಅಧಿಕೃತ ಪತ್ರ ಬರಹಗಾರರಿಗೆ ಏಕ ರೂಪದ ಅಧಿಕೃತ ಗುರುತಿನ ಚೀಟಿ ನೀಡುವುದು ಹಾಗೂ ಪತ್ರ ಬರಹಗಾರರ ಹೆಸರಿನಲ್ಲಿ ಇಲಾಖೆಗೆ ಬರುವ ಅನಧಿಕೃತ ವ್ಯಕ್ತಿಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮನವಿ ಮಂಡಣೆ ಮಾಡಲು ಹಾಗೂ ಸರ್ಕಾರ ಗಮನ ಸೆಳೆಯುವ ಉದ್ದೇಶದಿಂದ ಡಿ.೧೬ರಂದು ಬೆಳಗಾವಿ ಚಲೋ ಹಾಗೂ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಮತ್ತೊಮ್ಮೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಜಿ.ಪ್ರಕಾಶ್, ಕಾರ್ಯದರ್ಶಿ ಎಂ.ಶಿವಕುಮಾರ್, ಖಜಾಂಚಿ ಅಶ್ವಥನಾರಾಯಣ, ರಾಜ್ಯ ನಿರ್ದೇಶಕ ಎಂ.ಮುರುಡಪ್ಪ, ಜಿಲ್ಲಾ ಉಪಾಧ್ಯಕ್ಷ ಎನ್.ಎಸ್.ಸತ್ಯನಾರಾಯಣ, ಎಂ.ಶಿವರಾಜ್ ಶ್ರೀಧರ್, ಎಂ.ಮಂಜುನಾಥ, ಈ.ಚಂದ್ರಶೇಖರ್, ನಾಗೇಂದ್ರ, ಶರ್ಮ ಮತ್ತು ಗೋವಿಂದ ಇತರರಿದ್ದರು.