ಗದಗ: ಆ. 14ರಿಂದ 18ರ ವರೆಗೆ ನಗರದ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಗದಗ ಉತ್ಸವ-2 026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಮೇಳ ನಡೆಯಲಿದೆ. ಜಿಲ್ಲೆ ಹಾಗೂ ರಾಜ್ಯದ ವಿವಿಧ ಕೈಗಾರಿಕಾ ಉತ್ಪನ್ನಗಳು, ಸ್ವ- ಸಹಾಯ ಸಂಘಗಳ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ವ್ಯಾಪಾರಸ್ಥರಿಗೆ ಅಗತ್ಯವಿರುವ ಸಾಟೆಕ್ಸ್, ಗ್ರೇಡಿಂಗ್, ಮಡ್‌ ಕ್ಲೀನರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಾಗುವುದು. ಪ್ರತಿದಿನ ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಆ. 14ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಉದ್ಘಾಟಿಸುವರು. ಶರಣಬಸಪ್ಪ ಗುಡಿಮನಿ ಅಧ್ಯಕ್ಷತೆ ವಹಿಸುವರು.

ಆ. 15ರಂದು ಸಂಜೆ 5ಕ್ಕೆ ಸಾಧಕರ ಸನ್ಮಾನ ಸಮಾರಂಭ ನಡೆಯಲಿದ್ದು, ಕಾಸಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಭಾಗವಹಿಸುವರು. ಆ. 16ರಂದು ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರ ನಡೆಯಲಿದೆ. ಸಂಜೆ 4.30ಕ್ಕೆ 2026ನೇ ಸಾಲಿನ ಜೀವಮಾನ ಸಾಧನೆ, ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಹಾಗೂ ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉಪಸ್ಥಿತರಿರುವರು. ಗ್ರಾಮೀಣಾಭಿವೃದ್ದಿ ಸಚಿವ ಈಶ್ವರ ಖಂಡ್ರೆ, ಸಚಿವ ಬಸವರಾಜ ರಾಯರಡ್ಡಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಭಾಗವಹಿಸುವರು ಎಂದರು.


ಆ. 17ರಂದು ಬೆಳಗ್ಗೆ 10ಕ್ಕೆ ಜವಳಿ ವಲಯದ ರಫ್ತು ಉದ್ಯಮಿದಾರರಿಗೆ ಪ್ರೋತ್ಸಾಹ ಕಾರ್ಯಾಗಾರ ನಡೆಯಲಿದೆ. ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ. ಬಸವರಾಜು ಉದ್ಘಾಟಿಸುವರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಗ್ರಾಮೀಣ ಕೈಗಾರಿಕೆ ಪ್ರಭಾರ ಉಪನಿರ್ದೇಶಕ ಅಜೀತ ನಾಯಕ ಭಾಗವಹಿಸುವರು.

ಅಂದು ಸಂಜೆ 5ಕ್ಕೆ ಮಹಿಳಾ ಘಟಕದಿಂದ ನವ ಮಹಿಳಾ ಉದ್ಯಮಿದಾರರ ಸಂವಾದ, ಸಮಸ್ಯೆ ಹಾಗೂ ಪರಿಹಾರ ಕಾರ್ಯಕ್ರಮ ನಡೆಯಲಿದೆ.

ಆ. 18ರಂದು ಬೆಳಗ್ಗೆ 10 ಕ್ಕೆ ಮಹಿಳೆಯರ ಅಡುಗೆ ಸ್ಪರ್ಧೆ ನಡೆಯಲಿದ್ದು, ಕೃಷಿ ಇಲಾಖೆ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಭಾಗವಹಿಸುವರು. ಸಂಜೆ 4.30 ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಗದಗ ಉತ್ಸವ ಸಮಿತಿ ಚೇರಮನ್ ಮಧುಸೂದನ ಪುಣೇಕರ ಇದ್ದರು.ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ...

ಜೀವಮಾನ ಸಾಧನೆ ಪ್ರಶಸ್ತಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಆನಂದ ಪೋತ್ನಿಸ್, ಈಶಣ್ಣ ಮುನವಳ್ಳಿ ಆಯ್ಕೆಯಾಗಿದ್ದಾರೆ. ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಗದಗಿನ ಆಗ್ರೋ ಇಂಡಸ್ಟ್ರೀಜ್‌ನ ಕುಮಾರ ವಿ. ಪಟ್ಟದ, ಗಜೇಂದ್ರಗಡದ ವಿಜಯಾ ಆಯಿಲ್ ಮಿಲ್‌ನ ವೀರಣ್ಣ ಸೊನ್ನದ ಹಾಗೂ ಶಿರಹಟ್ಟಿಯ ಶ್ರೀಮದ್ ರಂಭಾಪುರಿ ಟೆಕ್ಸ್‌ ಟೈಲ್‌ನ ವೀರಣ್ಣ ಪವಾಡದ ಅವರಿಗೆ ನೀಡಲಾಗುವುದು.ಶ್ರೇಷ್ಠ ವರ್ತಕ ಪ್ರಶಸ್ತಿಗೆ ಗದಗಿನ ಓಸವಾಲ ಕಲೆಕ್ಷನ್‌ನ ಸುರೇಶಕುಮಾರ ಓಸವಾಲ, ನರಗುಂದದ ವಿ.ಎಸ್. ಶೆಟ್ಟಿಕೇರಿ ಆ್ಯಂಡ್ ಕಂಪನಿಯ ಬಸಪ್ಪ ಶೆಟ್ಟಿಕೇರಿ, ಹೊಳೆಆಲೂರಿನ ಯಚ್ಚರೇಶ್ವರ ಕಿರಾಣಿ ಸ್ಟೋರ್‌ನ ಸಂಗಮೇಶ ಗೌರಿಮರ ಹಾಗೂ ಮುಂಡರಗಿಯ ರಾಮದೇವ ಟ್ರೇಡಿಂಗ್ ಕಂಪನಿಯ ಗೌತಮ್‌ಚಂದ ಚೋಪ್ರಾ ಆಯ್ಕೆಯಾಗಿದ್ದಾರೆ. ಶ್ರೇಷ್ಠ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಗದಗಿನ ಕೂಡಲಸಂಗಮೇಶ್ವರ ಪ್ಯಾಕೇಜಸ್‌ನ ನಿರ್ಮಲಾ ಕೊಳ್ಳಿ ಅವರಿಗೆ ನೀಡಲಾಗುವುದು.ಸಿಂಧನೂರು (ಕಣಗಿನಹಾಳ)ದ ಉದ್ಯಮಿ ಸಿದ್ದನಗೌಡ ಪಾಟೀಲ, ಬೆಂಗಳೂರಿನ ಹುಮೈಮ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅರಷರ್ ಖಾಜಿ ಹಾಗೂ ಗದುಗಿನ ನಾರಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತೆ ಸುವರ್ಣಾ ಮದರಿಮಠ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ.