ಜನರನ್ನು ಒಗ್ಗೂಡಿಸಲು ಗಣಪತಿ ಉತ್ಸವ ಆರಂಭ: ನಿರಂಜನಗೌಡ

| Published : Sep 05 2025, 01:00 AM IST

ಸಾರಾಂಶ

ನರಸಿಂಹರಾಜಪುರ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕ್ ಸಾರ್ಜನಿಕ ಗಣೇಶೋತ್ಸವವನ್ನು ಹುಟ್ಟು ಹಾಕಿದರು ಎಂದು ಠಾಣಾಧಿಕಾರಿ ಎಸ್.ನಿರಂಜನ್‌ಗೌಡ ಹೇಳಿದರು.

- ಶೆಟ್ಟಿಕೊಪ್ಪದಲ್ಲಿ ಗಣೇಶೋತ್ಸವ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕ್ ಸಾರ್ಜನಿಕ ಗಣೇಶೋತ್ಸವವನ್ನು ಹುಟ್ಟು ಹಾಕಿದರು ಎಂದು ಠಾಣಾಧಿಕಾರಿ ಎಸ್.ನಿರಂಜನ್‌ಗೌಡ ಹೇಳಿದರು.

ಮಂಗಳವಾರ ರಾತ್ರಿ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಗಣೇಶೋ ತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅದೇ ಇಂದು ದೇಶದೆಲ್ಲೆಡೆ ಹಿಂದೂಗಳ ಧಾರ್ಮಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಕೆಲವೆಡೆ ಹಿಂದೂ, ಮುಸ್ಲೀಂ, ಕ್ರೈಸ್ತರು ಒಗ್ಗೂಡಿ ಗಣೇಶೋತ್ಸವ ಆಚರಿಸುತ್ತಾರೆ. ತಾಲೂಕಿನಲ್ಲಿ 125 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಅದರಲ್ಲಿ 7 ನೇ ದಿನ 110 ಗಣಪತಿ ವಿಸರ್ಜಿಸಲಾಗಿದೆ. ಎಲ್ಲಾ ಗಣಪತಿ ಸಮಿತಿ ಯವರು ಕಾನೂನು ಪಾಲನೆ ಮಾಡಿ ಶಾಂತವಾಗಿ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸಬೇಕೆಂದರು. ಸಿದ್ಧಿ ವಿನಾಯಕ ಸೇವಾ ಸಮಿತಿ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಹಬ್ಬಗಳ ಆಚರಣೆ ಮನುಷ್ಯನ ಬದುಕಿಗೆ ನೆಮ್ಮದಿ, ಸಂತೋಷ ತಂದು ಕೊಡುತ್ತವೆ. ಯುವಕರು ಹೆಚ್ಚೆಚ್ಚು ಗಣೇಶೋತ್ಸವ ಆಚರಣೆಗಳಲ್ಲಿ ಸಕ್ರಿಯ ರಾಗಬೇಕು. ಎಲ್ಲರೂ ಧಾರ್ಮಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ಗ್ರಾಮದ ಜನರ ಒಗ್ಗಟ್ಟಿಗೆ ಇಂತಹ ಧಾರ್ಮಿಕ ಆಚರಣೆಗಳು ಉದಾಹರಣೆಗಳಾಗುತ್ತವೆ. ಜಾತಿ, ಧರ್ಮ, ಬೇಧ ಮರೆತು ಗಣೇಶೋತ್ಸವ ಆಚರಿಸುತ್ತಿದ್ದೇವೆ. ದೇಶದಲ್ಲಿ ಶಾಂತಿ, ಸಹಬಾಳ್ವೆಯಿಂದ ಬದುಕಬೇಕೆಂದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗಣೇಶೋತ್ಸವ ಯಶಸ್ವಿಗೆ ಕಾರಣರಾದ ಸಮಿತಿ ಅಧ್ಯಕ್ಷ ನಿದರ್ಶನ್ ಹಾಗೂ ಕಾರ್ಯದರ್ಶಿ ಪುನೀತ್ ಅವರನ್ನು ಊರಿನ ಗ್ರಾಮಸ್ಥರ ಪರವಾಗಿ ಸಮಿತಿ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ನಿದರ್ಶನ್ ಇತರರು ಇದ್ದರು.

ನಂತರ ರಾತ್ರಿ ಗಣೇಶನ ವಿಸರ್ಜನಾ ಮೆರವಣಿಗೆ ನಡೆಸಿ ಗಣೇಶನ ವಿಗ್ರಹವನ್ನು ಜಲಸ್ಥಂಬನಗೊಳಿಸಲಾಯಿತು.