ಭಾರತ ಸಮ ಸಂಸ್ಕೃತಿ ದೇಶ. ಸಮ ಸಮಾಜದ ನಿರ್ಮಾಣವಾಗಬೇಕು ಎಂದು ಗಾಂಧೀಜಿ ಬಯಸಿದ್ದರು. ಇಲ್ಲಿ ಅವರೇ ದುಡಿದು ಅವರೇ ಅನ್ನ ತಿನ್ನಬೇಕು ಎಂದಿದ್ದರು. ಆದರೆ, ಗಾಂಧೀಜಿಯವರ ದೊಡ್ಡ ಕಲ್ಪನೆಯನ್ನು ಸ್ವಾತಂತ್ರ್ಯ ನಂತರ ದೂರವಿಟ್ಟಿದ್ದು ನಮ್ಮ ಹೀಗಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧೀಜಿಯವರ ಕಲ್ಪನೆಗಳನ್ನು ದೂರವಿಟ್ಟಿರುವ ಪರಿಣಾಮ ದೇಶದಲ್ಲಿ ಇಂದಿಗೂ ನಮ್ಮ ಹಲವು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ನಾಡೋಜ ವೂಡೇ ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ಎಜುಕೇಷನಲ್ ಇನ್ಸ್ಟಿಟ್ಯೂಷನ್, ಆರ್ಕೆ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಬಹುರೂಪಿ ಗಾಂಧಿ- ಗಾಂಧೀಜಿ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಚಿಂತನೆಗಳ ಪ್ರಸ್ತುತತೆ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಪ್ರಮುಖ ಅಸ್ತ್ರಗಳಲ್ಲಿ ಅಹಿಂಸಾತ್ಮಕ ಅಸ್ತ್ರ ಅದು ಸತ್ಯಾಗ್ರಹ. ಸತ್ಯಕ್ಕಾಗಿ ಹೋರಾಡು ಒಂದಾಗಿದೆ. 2ನೇಯದು ಸತ್ಯಗ್ರಾಹಿಯಾಗು ಸತ್ಯವನ್ನು ಅರಿತುಕೊಳ್ಳಬೇಕು. ಇದು ಆಧ್ಯಾತ್ಮಿಕ ಮುಖವಾಗಿದೆ. ಸತ್ಯಾಗ್ರಹದ ಕಲ್ಪನೆ ಎಂದರೆ ಜನರ ಮುಂದೆ ಸತ್ಯವನ್ನು ಮುಂದಿಟ್ಟು ಆಳವಾದ ಅಧ್ಯಯನ ನಡೆಸುವುದು. ಎಲ್ಲಿ ಯಾರಿಗೆ ಅನ್ಯಾಯ ಆಗಿದೆ ಅದನ್ನು ಗುರುತಿಸಿ ಸರಿಪಡಿಸಲು ಎಲ್ಲಿ ಹೇಳಬೇಕು. ಯಾರಿಗೆ ಅವಕಾಶ ಕೊಡಬೇಕು ಎಂದು ಚಿಂತಿಸುತ್ತಿದ್ದರು. ಸರಿಪಡಿಸದಿದ್ದರೆ ಗಾಂಧೀಜಿ ಸತ್ಯಾಗ್ರಹ ಮಾಡುತ್ತಿದ್ದರು ಎಂದರು.ಗಾಂಧೀಜಿಯವರ ಮತ್ತೊಂದು ಪ್ರಮುಖ ಅಸ್ತ್ರ ಸರ್ವೋದಯ. ಸರ್ವ ಜನ ಸುಖಾಯ ಎಲ್ಲರೂ ನೆಮ್ಮದಿಯಿಂದ ಇರಬೇಕು. ಎಲ್ಲರೂ ಚೆನ್ನಾಗಿರಬೇಕು ಎಂಬ ಕಲ್ಪನೆ ಹೊಂದಿದ್ದರು. ಸರ್ವೋದಯವಾಗಲಿ ಸರ್ವರಲಿ ಎಂದು ಹೇಳಿರುವ ರಾಷ್ಟ್ರಕವಿ ಕುವೆಂಪು ಅವರ ಚಿಂತನೆಯನ್ನು ಗಾಂಧೀಜಿಯವರು ಅಕ್ಷರಸಃ ಪಾಲನೆ ಮಾಡಲು ಪ್ರಯತ್ನಿಸಿದ್ದರು. ಅವುಗಳನ್ನು ಜನರಲ್ಲಿ ಬಿತ್ತಲು ಮುಂದಾಗಿದ್ದರು ಎಂದರು.
ಎಲ್ಲರ ಒಳಿತಿನಲ್ಲಿ ಒಬ್ಬ ವ್ಯಕ್ತಿಯ ಒಳಿತು ಅಡಗಿದೆ. ಎಲ್ಲರಿಗೂ ಅವರವರ ಶಕ್ತಿಗೆ ಅನುಸಾರ ಅವರು ಬೆಳೆಯುವ ಅವಕಾಶವಿದೆ. ಪ್ರತಿಯೊಬ್ಬರಿಗೂ ವೃತ್ತಿಗೆ ಅನುಗುಣವಾಗಿ ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಿರಬೇಕು ಎಂದು ಸರ್ವೋದಯ ಕಲ್ಪನೆಯಲ್ಲಿ ಹೇಳಿದ್ದರು ಎಂದರು.ಭಾರತ ಸಮ ಸಂಸ್ಕೃತಿ ದೇಶ. ಸಮ ಸಮಾಜದ ನಿರ್ಮಾಣವಾಗಬೇಕು ಎಂದು ಗಾಂಧೀಜಿ ಬಯಸಿದ್ದರು. ಇಲ್ಲಿ ಅವರೇ ದುಡಿದು ಅವರೇ ಅನ್ನ ತಿನ್ನಬೇಕು ಎಂದಿದ್ದರು. ಆದರೆ, ಗಾಂಧೀಜಿಯವರ ದೊಡ್ಡ ಕಲ್ಪನೆಯನ್ನು ಸ್ವಾತಂತ್ರ್ಯ ನಂತರ ದೂರವಿಟ್ಟಿದ್ದು ನಮ್ಮ ಹೀಗಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2329 ದಿನ ಜೈಲು ವಾಸ ಅನುಭವಿಸಿದ್ದ ಗಾಂಧೀಜಿ ಅವರು ಹತ್ಯೆಯಾದ ಒಂದು ವಾರದ ಮುಂಚೆ ಆರ್ಥಿಕ, ನೈತಿಕ ಸ್ವಾತಂತ್ಯ ಇನ್ನೂ ಬರಬೇಕಿದೆ ಎಂಬ ಮಾತನ್ನು ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ. 78 ವರ್ಷ ಕ್ರಮಿಸಿದೆ ಇದುವರೆಗೂ ರಾಜಕೀಯವಾಗಿ ಹೊರತು ಪಡಿಸಿ ಆರ್ಥಿಕ, ಸಾಮಾಜಿಕ, ನೈತಿಕವಾಗಿ ಇನ್ನೂ ಸ್ವತಂತ್ರರಾಗಿಲ್ಲ. ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯದ ಸಂಪೂರ್ಣ ಕಲ್ಪನೆ ಸಹಕಾರಗೊಳಿಸಲು, ಕನಸಿನ ಭಾರತ ಕಟ್ಟಲು ಇಂದಿನ ಮಕ್ಕಳು, ಯುವ ಜನಾಂಗದೊಂದಿಗೆ ಹಿರಿಯರು ಕೈ ಜೋಡಿಸಬೇಕಿದೆ ಎಂದು ಮನವಿ ಮಾಡಿದರು.ವಿಧಾನ ಪರಿಷತ್ ನ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಹಿರಿಯರ ತತ್ವ, ಆದರ್ಶ, ಸಿದ್ಧಾಂತಗಳನ್ನು ಕೊಲ್ಲುತ್ತಿದ್ದೇವೆ. ಸತ್ಯಾದರ್ಶಗಳು, ನಡೆನುಡಿಗಳು ಕನಸಿನ ದಿನಗಳಾಗುತ್ತಿವೆ. ಕಾಯಕವೇ ಕೈಲಾಸ ಎಂಬ ಮಾತುಗಳ ಮರೆತು ಕೈ ಸಾಲವೇ ಕಾಯಕವಾಗಿದೆ ಎಂದು ಮರುಕಪಟ್ಟರು.
ಶಿಕ್ಷಣ ಸಂಸ್ಥೆಗಳು ಜ್ಞಾನ ಶಿಕ್ಷಣ ನೀಡುವ ಬದಲು ಅನ್ನದ ಶಿಕ್ಷಣಕ್ಕೆ ಸೀಮಿತಗೊಂಡಿವೆ. ಮೌಲ್ಯಯುತ ಶಿಕ್ಷಣ ಇಲ್ಲದೆರ ಕಲಿತ ವಿದ್ಯೆಗೆ ಬೆಲೆ ಇಲ್ಲಾದಾಗಿದೆ. ಕನಕ, ಪುರಂದರ, ಕಬೀರ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಅವರ ಆದರ್ಶಗಳನ್ನು ಮರೆಯುತ್ತಿದ್ದೇವೆ. ಭವಿಷ್ಯದ ಭಾರತ ಆತಂಕಕಾರಿಯಾಗಿದೆ. ಪಂಚೇಂದ್ರಿಯಗಳನ್ನು ಮರೆತು ಪಂಚಾಂಗವನ್ನು ಹಿಡಿದಿದ್ದೇವೆ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಆರ್ಕೆ ಎಜುಕೇಷನಲ್ ಇನ್ಸ್ಟಿಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಮಾತನಾಡಿದರು. ಹಿರಿಯ ಗಾಂಧಿವಾದಿ ಪ್ರೊ.ಜಿ.ಬಿ.ಶಿವರಾಜು, ಪ್ರಾಂಶುಪಾಲ ಡಾ.ಎಂ.ಸಿ.ಸತೀಶ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರ್ಕೆ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಬಿ.ರಾಮಕೃಷ್ಣ ಶೈಕ್ಷಣಿಕ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಸಾಹಿತಿ ಡಾ.ಎಸ್.ತುಕಾರಾಂ, ಶಿವಣ್ಣಗೌಡ, ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮೀಗೌಡ, ಶೈಕ್ಷಣಿಕ ಪಾಲುದಾರ ಹಾಗೂ ಸಹಾಯಕ ಪ್ರಾಧ್ಯಾಪಕ ಎ.ಜಿ.ಚಂದ್ರ, ಎಸ್. ಬಸವರಾಜು, ಆರ್ ಎನ್ ಮುತ್ತಲಿಂಗಯ್ಯ ಇದ್ದರು.