ಅದ್ಧೂರಿಯಾಗಿ ನಡೆದ ಗಣೇಶ ಮೂರ್ತಿ ವಿಸರ್ಜನೆ

| Published : Oct 28 2024, 01:06 AM IST

ಸಾರಾಂಶ

ಸಿದ್ದಿ ವಿನಾಯಕ ಸೇವಾ ಸಮಿತಿಯಿಂದ 44ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಗಣೇಶ ಪೆಂಡಾಲ್‌ನಲ್ಲಿ 45 ದಿನಕಾಲ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಶಿಬಿರ, ಹೋಮ ಹಾಗೂ ಅನ್ನಸಂತರ್ಪಣೆ ನಡೆಸಲಾಗಿತ್ತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಪಟ್ಟಣದ ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿಯಿಂದ ಗಣೇಶ ಹಬ್ಬದಂದು ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಣೇಶ, ಗೌರಿ, ಈಶ್ವರ ಹಾಗೂ ಪಾರ್ವತಿ ವಿಗ್ರಹವನ್ನು 45 ದಿನಗಳ ಬಳಿಕ ವಿವಿಧ ಜಾನಪದ ಕಲಾ ತಂಡ ಅದ್ಧೂರಿ ಮೆರವಣಿಗೆಯೊಂದಿಗೆ ಪೊಲೀಸರ ಭದ್ರತೆಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.

ಸಿದ್ದಿ ವಿನಾಯಕ ಸೇವಾ ಸಮಿತಿಯಿಂದ 44ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಗಣೇಶ ಪೆಂಡಾಲ್‌ನಲ್ಲಿ 45 ದಿನಕಾಲ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಶಿಬಿರ, ಹೋಮ ಹಾಗೂ ಅನ್ನಸಂತರ್ಪಣೆ ನಡೆಸಲಾಗಿತ್ತು.

ಭಾನುವಾರ ಮಧ್ಯಾಹ್ನ ಹೊರಟ ಗಣೇಶನ ಮೆರವಣಿಗೆ ಪೇಟೆಬೀದಿ, ಪೊಲೀಸ್ ಠಾಣೆ ರಸ್ತೆ, ಕಾಮಚೌಕ, ಬೀರಶೆಟ್ಟಹಳ್ಳಿ ರಸ್ತೆ, ನಾಗಮಂಗಲ ರಸ್ತೆ, ಮಂಡ್ಯ ಸರ್ಕಲ್, ಐದುದೀಪದ ವೃತ್ತ, ಹಾರೋಹಳ್ಳಿ ರಸ್ತೆ, ಬಾಲಕೀಯರ ಕಾಲೇಜು ವೃತ್ತದ ಮೂಲಕ ಸಂಚರಿಸಿ ರಾತ್ರಿ ಪೋಸ್ಟ್ ಆಫೀಸ್ ರಸ್ತೆ ಮೂಲಕ ವಿಸಿ ನಾಲೆಗೆ ಬಳಿ ಹೋಗಿ ಕ್ರೇನ್ ಮೂಲಕ ಗಣಪತಿ, ಗೌರಿ, ಪಾರ್ವತಿ, ಈಶ್ವರ ಮೂರ್ತಿಗಳನ್ನು ನಾಲೆಗೆ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯುದ್ದಕ್ಕೂ ಪೂಜಾ ಕುಣಿತ, ವೀರಗಾಸೆ, ಚಂಡವಾಧ್ಯ, ತಮಟೆ, ವಾಧ್ಯ, ಕಾಳಿನೃತ್ಯಗಳು ಎಲ್ಲರ ಗಮನಸೆಳೆದವು. ಡಿಜೆ ಸೌಂಡ್‌ನಲ್ಲಿ ಹಲವು ಹಾಡುಗಳಿಗೆ ಪುಟ್ಟಪುಟ್ಟ ಮಕ್ಕಳು ಸೇರಿದಂತೆ ಯುವಕ-ಯುವತಿಯರು, ಸಾರ್ವಜನಿಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು.

ಪ್ರಸಾದ ವಿತರಣೆ:

ಮೆರವಣಿಗೆ ಪಟ್ಟಣದ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿ ಮುಖ್ಯಸ್ಥ ಸುಬ್ರಮಣ್ಯ ನಿವಾಸದ ಆಗಮಿಸಿದಾಗ 101 ಈಡುಗಾಯಿ ಹೊಡೆದು ವಿಶೇಷ ಪೂಜೆಸಲ್ಲಿಸಿ ನಂತರ ನೆರೆದಿದ್ದ ಭಕ್ತರಿಗೆ ಪುಳಿಯೊಗರೆ, ಮೊಸರನ್ನ ವಿತರಣೆ ಮಾಡಿದರು. ಮೆರವಣಿಗೆಯುದ್ದಕ್ಕೂ ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್‌ಪೆಕ್ಟರ್ ಆರ್.ಬಿ.ಉಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಭದ್ರತೆಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು. ವಿಸರ್ಜನೆ ವೇಳೆ ಶ್ರೀಸಿದ್ದಿ ವಿನಾಯಕ ಸೇವಾ ಸಮಿತಿಯ ಎಲ್ಲಾ ಸದಸ್ಯರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.