ಬೀದರ್: ಗಣಪತಿ ಬೊಪ್ಪ ಮೋರಾಯದ್ದೆ ಜೋರು, ದೇವನಾಮಗಳ ಜೊತೆ ಸಿನಿ ಹಾಡುಗಳ ಝೇಂಕಾರ, ಕುಣಿದು ಕುಪ್ಪಳಿಸುತ್ತಿದ್ದ ಯುವ ಸಮುದಾಯ, ಕಣ್ಮನ ಸೆಳೆದ ವಿದ್ಯುತ್ ಅಲಂಕಾರ. ಹೀಗೆಯೇ ಸಂಭ್ರಮ ಸಡಗರದೊಂದಿಗೆ ಪ್ರತಿಷ್ಠಾಪನೆಯಾಗಿ ಸರ್ವ ಭಕ್ತರ ಗಮನ ಸೆಳೆದು ಆಶೀರ್ವಾದವಷ್ಟೇ ಅಲ್ಲ ಜನ ಜಾಗೃತಿಯನ್ನೂ ಮೂಡಿಸುವ ಯತ್ನ ಮಾಡಲಾಗಿತ್ತು. ಕಣ್ಣಗಲಿಸಿದಲ್ಲೆಲ್ಲ ಜನ ಸಾಗರ, ಇದರ ಮಧ್ಯ ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ವಿಘ್ನ ನಿವಾರಕ ವಿನಾಯಕನ ವಿಸರ್ಜನೆ ಕಾರ್ಯ ನಡೆಯಿತು.ಸಂಜೆ ಹೊತ್ತಿಗೆ ಗಾವಾನ್ ವೃತ್ತದ ಬಳಿ ರಾಮಮಂದಿರ ಗಣೇಶ ಮೂರ್ತಿಗೆ ಸಂಪ್ರದಾಯದಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಎಸ್ಪಿ ಪ್ರದೀಪ ಗುಂಟಿ ಪೂಜೆ ನೆರವೇರಿಸಿದರು. ಗಾವಾನ್ ವೃತ್ತಕ್ಕೆ ಪ್ರಮುಖ ಗಣೇಶ ಮಂಡಳಿಗ ಗಣೇಶ ಮೂರ್ತಿಗಳ ಪ್ರವೇಶ ಆದದ್ದು ರಾತ್ರಿ 9.30ರ ನಂತರವೇ. ಐತಿಹಾಸಿಕ ಚೌಬಾರಾ ಗೋಪುರದ ಮೇಲಿಂದ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಗಣೇಶ ಮಹಾಮಂಡಳಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ ಗುಂಟಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಗಣೇಶ ಮೂರ್ತಿಗಳನ್ನು ಸ್ವಾಗತಿಸಿ ಹೂ ಮಾಲೆಗಳನ್ನು ಹಾಕಿದರು. ನಂತರ ಆಗಮಿಸಿದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಗಣೇಶ ಮಂಡಳಿಗಳಿಗೆ ಸ್ವಾಗತ ಕೋರಿದರು. ಭಕ್ತಾದಿಗಳು ಮೆವಣಿಗೆಯಲ್ಲಿ ಪಾಲ್ಗೊಂಡವರಿಗಾಗಿ ಅಲ್ಲಲ್ಲಿ ಕುಡಿಯುವ ನೀರು ಮತ್ತು ಪ್ರಸಾದ ವ್ಯವಸ್ಥೆ ಮಾಡಿಸಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಹಬ್ಬ ಹರಿದಿನಗಳು ಭಾವೈಕ್ಯತೆ ಹಾಗೂ ಸಾಮರಸ್ಯವನ್ನು ಮೂಡಿಸುವಂಥದ್ದು ಅಸತ್ಯದಿಂದ ಸತ್ಯದತ್ತ ಹೋಗಲು ದಾರಿಯನ್ನು ತೋರುವಂಥದ್ದು ಶಿವ ಪಾರ್ವತಿಯ ಪುತ್ರ ಗಣೇಶನ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸಿದಾಗ ಇಲ್ಲಿ ಪರಿಸರ ಕಾಳಜಿ ಒಂದೆಡೆ ಇದ್ದರೆ ಇನ್ನೊಂದೆಡೆ ಇತಿಹಾಸದ ಪುಟಗಳಲ್ಲಿ ಒಗ್ಗಟ್ಟಿನ ಮಂತ್ರವನ್ನು ತೋರಿಸುತ್ತದೆ, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಮಹಾಮಂಡಳಿ ಹೆಜ್ಜೆಯಿಡಬೇಕು ಎಂಬುವದನ್ನು ಮರೆಯದಿರೋಣ ಎಂದರು.ಗಣೇಶ ಮಹಾಮಂಡಳಿಯು ಅತ್ಯಂತ ಶಿಸ್ತುಬದ್ಧವಾಗಿ ಗಣೇಶ ಮಂಡಳಿಗಳ ಮೂಲಕ ಗಣೇಶ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದಷ್ಟೇ ಅಲ್ಲ ವಿಘ್ನ ನಿವಾರಕ ವಿನಾಯಕನ ವಿಸರ್ಜನೆಗೂ ಜಿಲ್ಲಾಡಳಿತ, ಪೊಲೀಸ್ಗೆ ಸಹಕರಿಸಿ ಅತ್ಯುತ್ತಮವಾಗಿ ನೆರವೇರಿಸುತ್ತಿರುವದು ಶ್ಲಾಘನೀಯ, ಮುಂದಿನ ವರ್ಷ ಗಣೇಶ ವಿಸರ್ಜನೆಗೆ ಹೊಂಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವದು ಎಂದರು.ಭಕ್ತಿ ಗೀತೆಗೆ ಕುಣಿದ ಸಚಿವರು:ಪರಿಸರ ಗಣೇಶ ವಾಸವಿ ಗಣೇಶ ಮಂಡಳದ ಪಾಂಡುರಂಗ ಮಂದಿರದ ಗಣೇಶನಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಿ ಗೀತೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಸೇರಿದಂತೆ ಮತ್ತಿತರ ಜನಪ್ರತಿನಿಧಿ, ಅಧಿಕಾರಿ ಹಾಗೂ ಮುಖಂಡರು ಕುಣಿದು ಗಮನ ಸೆಳೆದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಘುನಾಥ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ, ಕಲಬುರಗಿ ವಲಯದ ಐಜಿಪಿ ಅಜಯ ಹಿಲೋರಿ, ಕೆಕೆಆರ್ಡಿಬಿ ಕಾರ್ಯದರ್ಶಿ ನಳೀನ್ ಅತುಲ್, ಗಣೇಶ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ನಂದಕಿಶೋರ ವರ್ಮಾ, ಸೋಮಶೇಖರ ಪಾಟೀಲ್ ಗಾದಗಿ, ಶಿವಶರಣಪ್ಪ ವಾಲಿ, ಡಾ. ರಜನೀಶ ವಾಲಿ, ದೀಪಕ ಪಾಲಿ, ಸೂರ್ಯಕಾಂತ ಶೆಟಕಾರ್, ಈಶ್ವರಸಿಂಗ್ ಠಾಕೂರ್, ವಿಜಯಕುಮಾರ ಪಾಟೀಲ್, ಮನೋಹರ ದಂಡೆ, ಮಡಿವಾಳಪ್ಪ ಮಂಗಲಗಿ, ಸಂತೋಷ ಪಾಟೀಲ್, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ ಸೇರಿದಂತೆ ಅನೇಕರಿದ್ದರು. ಬಸವರಾಜ ಪವಾರ ಹಾಗೂ ನಾಗಶೆಟ್ಟಿ ಧರಂಪೂರ್ ನಿರೂಪಿಸಿದರು.
ಸಡಗರ, ಸಂಭ್ರಮದಿಂದ ಗಣೇಶ ಮೂರ್ತಿಗಳ ವಿಸರ್ಜನೆ
ಗಣಪತಿ ಬೊಪ್ಪ ಮೋರಾಯದ್ದೆ ಜೋರು, ದೇವನಾಮಗಳ ಜೊತೆ ಸಿನಿ ಹಾಡುಗಳ ಝೇಂಕಾರ, ಕುಣಿದು ಕುಪ್ಪಳಿಸುತ್ತಿದ್ದ ಯುವ ಸಮುದಾಯ, ಕಣ್ಮನ ಸೆಳೆದ ವಿದ್ಯುತ್ ಅಲಂಕಾರ. ಹೀಗೆಯೇ ಸಂಭ್ರಮ ಸಡಗರದೊಂದಿಗೆ ಪ್ರತಿಷ್ಠಾಪನೆಯಾಗಿ ಸರ್ವ ಭಕ್ತರ ಗಮನ ಸೆಳೆದು ಆಶೀರ್ವಾದವಷ್ಟೇ ಅಲ್ಲ ಜನ ಜಾಗೃತಿಯನ್ನೂ ಮೂಡಿಸುವ ಯತ್ನ ಮಾಡಲಾಗಿತ್ತು. ಕಣ್ಣಗಲಿಸಿದಲ್ಲೆಲ್ಲ ಜನ ಸಾಗರ, ಇದರ ಮಧ್ಯ ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ವಿಘ್ನ ನಿವಾರಕ ವಿನಾಯಕನ ವಿಸರ್ಜನೆ ಕಾರ್ಯ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.