ಹರಿಹರ ನಗರಸಭೆಯಿಂದಲೇ ನದಿಗೆ ಗಣೇಶ ವಿಸರ್ಜನೆ!

| Published : Sep 01 2025, 01:03 AM IST

ಸಾರಾಂಶ

ಜಲಮೂಲಗಳಲ್ಲಿ ವಿನಾಯಕ ಮೂರ್ತಿಗಳನ್ನು ವಿಸರ್ಜಿಸಿದಲ್ಲಿ ಕಲುಷಿತಗೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಹರಿಹರ ನಗರದಲ್ಲಿ ತುಂಗಭದ್ರಾ ನದಿಯ ಕಾಳಜಿ ವಹಿಸಬೇಕಿದ್ದ ನಗರಸಭೆ ತಾನೇ ರೂಪಿಸಿದ್ದ ನಿಯಮ ಉಲ್ಲಂಘಿಸಿ, ನದಿಯಲ್ಲಿ ಗಣಪತಿ ವಿಸರ್ಜಿಸಿ ಕೈ ತೊಳೆದುಕೊಂಡಿದೆ.

- ಹೊಂಡ ನಿರ್ಮಿಸಿದ್ದರೂ ನದಿಯೊಡಲು ಸೇರಿದ ಮೂರ್ತಿಗಳು

- ನದಿ ರಸ್ತೆಗೆ ಹೋಗದಂತೆ ಬ್ಯಾರಿಕೇಡ್‌ಗಳ ಅಳವಡಿಸಿ, ಫ್ಲೆಕ್ಸ್‌ ಹಾಕಿದ ನಗರಸಭೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಜಲಮೂಲಗಳಲ್ಲಿ ವಿನಾಯಕ ಮೂರ್ತಿಗಳನ್ನು ವಿಸರ್ಜಿಸಿದಲ್ಲಿ ಕಲುಷಿತಗೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಹರಿಹರ ನಗರದಲ್ಲಿ ತುಂಗಭದ್ರಾ ನದಿಯ ಕಾಳಜಿ ವಹಿಸಬೇಕಿದ್ದ ನಗರಸಭೆ ತಾನೇ ರೂಪಿಸಿದ್ದ ನಿಯಮ ಉಲ್ಲಂಘಿಸಿ, ನದಿಯಲ್ಲಿ ಗಣಪತಿ ವಿಸರ್ಜಿಸಿ ಕೈ ತೊಳೆದುಕೊಂಡಿದೆ.

ಜನರೂ ಸಹ ನಗರಸಭೆ ಪರಿಸರ ಕಾಳಜಿ ಜಾಗೃತಿ ಸಭೆ ನಡೆಸಿದ್ದರೂ, ನದಿ ಸಮೀಪ ಹೋಗದಂತೆ ತಿಳಿಸಿದ್ದರೂ ಬಹುತೇಕರು ನದಿಗೆ ಗಣಪತಿಗಳ ವಿಸರ್ಜಿಸಿದ್ದಾರೆ.

ನಗರದ ಜೋಡು ಬಸವೇಶ್ವರ ದೇವಸ್ಥಾನ ರಸ್ತೆಯಲ್ಲಿ ಹರಿಹರ ನಗರಸಭೆ ಗಣೇಶಮೂರ್ತಿ ವಿಸರ್ಜನೆಗಾಗಿ ಹೊಂಡ ನಿರ್ಮಿಸಿದ್ದು, ಕೆಲವರು ಇಲ್ಲಿ ಗಣಪತಿ ವಿಸರ್ಜಿಸಿದ್ದಾರೆ. ಆದರೆ, ಬುಧವಾರ ಹಾಗೂ ಶುಕ್ರವಾರ ನೂರಾರು ಜನರು ನದಿಯಲ್ಲಿ ಪರಿಸರಸ್ನೇಹಿ ಹಾಗೂ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದು, ಅವುಗಳ ನಿಯಂತ್ರಿಸಲು ಮಾತ್ರ ಸಾಧ್ಯವಾಗಿಲ್ಲ.

ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳು ಪರಿಸರ ರಕ್ಷಣೆ, ನಗರ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸದಂತೆ ತಿಳಿವಳಿಕೆ ನೀಡಿದ್ದಾರೆ. ಆದರೆ ನಗರಸಭೆ ಸಿಬ್ಬಂದಿಯೇ ಶುಕ್ರವಾರ ನದಿಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಿದ್ದಾರೆ. ಈಗ ಭಾನುವಾರ ನದಿಯಲ್ಲಿ ನೀರಿನ ಏರಿಕೆ ನೆಪದಲ್ಲಿ ರಾಘವೇಂದ್ರ ಮಠದ ಸಮೀಪ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಸಾರ್ವಜನಿಕರ ಪ್ರವೇಶ ನಿಷೇಧಿಸಿ, ಪರಿಸರ ಕಾಳಜಿಯ ಫ್ಲೆಕ್ಸ್ ಅಳವಡಿಸಿದೆ.

ಈಗಾಗಲೇ ಡಿಜೆ ಸೌಂಡ್‌ಗಳ ಅಬ್ಬರಗಳಿಲ್ಲದೇ ನಗರಾದ್ಯಂತ ಭಾನುವಾರ ಸುಮಾರು ೧೦೦ಕ್ಕೂ ಹೆಚ್ಚು ಗಣೇಶನನ್ನು ವಿಸರ್ಜನೆ ಮಾಡಲಾಗಿದೆ. ನಗರಸಭೆಯ ದ್ವಂದ್ವ ನೀತಿ ಸಾರ್ವಜನಿಕರಲ್ಲಿ ಪ್ರಶ್ನೆಗಳ ಹುಟ್ಟುಹಾಕಿ, ಅಸಮಾಧಾನಕ್ಕೂ ಕಾರಣವಾಗಿದೆ.

- - -

-31ಎಚ್‌ಆರ್‌ಆರ್03:

ಹರಿಹರದ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧಿಸಿ ಫ್ಲೆಕ್ಸ್ ಆಳವಡಿಸಿದರುವುದು.