ಮನುಷ್ಯನಿಗೆ ಅನ್ನ ಬಟ್ಟೆ ಹೇಗೆ ಬೇಕೋ ಅದೇ ರೀತಿ ಜ್ಞಾನ ಬೇಕು. ಜ್ಞಾನ ಎಲ್ಲರಿಗೂ ಸಿಗಬೇಕು. ದುಡಿದವರು ಮತ್ತು ಮೇಲ್ವರ್ಗದವರಿಗೆ ಮಾತ್ರ ಜ್ಞಾನ ಸಿಗುತ್ತಿದೆ. ತುಳಿತಕ್ಕೊಳಗಾದ, ದಲಿತ ಕುಟುಂಬದಿಂದ ಬಂದವರಿಗೆ ಜ್ಞಾನ ಸಿಗದಿದ್ದರೆ ಉದ್ಧಾರ ಆಗಲು ಸಾಧ್ಯವಿಲ್ಲ. ಗಂಗಾಮತಸ್ಥರು ಕಾಯಕ ನಿಷ್ಠ ಸಾಹಸಮಯ ಸಮುದಾಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ:ಮನುಷ್ಯನಿಗೆ ಅನ್ನ ಬಟ್ಟೆ ಹೇಗೆ ಬೇಕೋ ಅದೇ ರೀತಿ ಜ್ಞಾನ ಬೇಕು. ಜ್ಞಾನ ಎಲ್ಲರಿಗೂ ಸಿಗಬೇಕು. ದುಡಿದವರು ಮತ್ತು ಮೇಲ್ವರ್ಗದವರಿಗೆ ಮಾತ್ರ ಜ್ಞಾನ ಸಿಗುತ್ತಿದೆ. ತುಳಿತಕ್ಕೊಳಗಾದ, ದಲಿತ ಕುಟುಂಬದಿಂದ ಬಂದವರಿಗೆ ಜ್ಞಾನ ಸಿಗದಿದ್ದರೆ ಉದ್ಧಾರ ಆಗಲು ಸಾಧ್ಯವಿಲ್ಲ. ಗಂಗಾಮತಸ್ಥರು ಕಾಯಕ ನಿಷ್ಠ ಸಾಹಸಮಯ ಸಮುದಾಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶರಣ ಅಂಬಿಗರ ಚೌಡಯ್ಯ ಶರಣರಲ್ಲಿಯೇ ಅತ್ಯಂತ ಶ್ರೇಷ್ಠ ಶರಣ. ಅವರ ಜೀವನ ಒಂದು ಆದರ್ಶಮಯವಾದ ಜೀವನ ನುಡಿದಂತೆ ನಡೆದಿರುವ ಶರಣರಲ್ಲಿ ಅಂಬಿಗರ ಚೌಡಯ್ಯ ಮೇರು ವ್ಯಕ್ತಿತ್ವ. ಎಲ್ಲಿವರೆಗೂ ಸೂರ್ಯ-ಚಂದ್ರ ಇರುತ್ತಾರೆ. ಅಲ್ಲಿವರೆಗೂ ಈ ಸಮಾಜ ಅತ್ಯಂತ ಪ್ರಭಲವಾಗಿ ಪ್ರಖರವಾಗಿ ಬೆಳೆಯುತ್ತ ಹೋಗುತ್ತದೆ. ಯಾಕೆ ಈ ಮಾತನ್ನು ಹೇಳುತ್ತೇನೆ ಎಂದರೆ, ಈ ಸಮಾಜದ ಮೂರು ಗುಣಗಳು ಮುಖ್ಯ ಒಂದು ಬಹಳ ಕಠಿಣ ಪರಿಶ್ರಮ ಮಾಡುವ ಸಮಾಜ, ಎಂದೂ ಕಾಯಕ ಬಿಡದ ಸಮಾಜ, ಕಾಯಕ ನಿಷ್ಠ ಸಮಾಜ. ಗಂಗಾ ಪುತ್ರರ ಸಮಾಜ. ಎರಡನೇಯದು ಸಾಹಸಮಯ ಸಮುದಾಯ ನೀವು ದೋಣಿಯನ್ನು ನೀರಿಗೆ ಬಿಟ್ಟರೆ ಗಾಳಿ ಬಿರುಗಾಳಿ ಹೇಗೆ ಬೀಸುತ್ತದೊ ಗೊತ್ತಿಲ್ಲ. ಆದರೆ, ಸಮುದ್ರಕ್ಕೆ ದೋಣಿ ತೆಗೆದುಕೊಂಡು ಹೋಗುವುದನ್ನು ಬಿಡುವುದಿಲ್ಲ. ಮೂರನೆಯದ್ದು ಬಹಳ ಆಶಾದಾಯಕ ಸಮಾಜ. ಗಾಳ ಹಾಕಿ ಮೀನು ಹಿಡಿಯುವುದು ಸುಲಭವಲ್ಲ. ಒಂದು ದಿನ ಮೀನು ಸಿಗಬಹುದು ಸಿಗದಿರಬಹುದು. ಪ್ರತಿ ದಿನ ಮೀನು ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ನೀವು ಇರುತ್ತೀರಿ. ಮತ್ತು ನಾವಿಕರಾಗಿ ಎಲ್ಲರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೀರಿ. ಎಲ್ಲ ಸಮಾಜದೊಂದಿಗೆ ವಿಶ್ವಾಸದಿಂದ ಇದ್ದೀರಿ ಎಂದರು.ಈ ಸಮಾಜ ಎಂದರೆ ನನಗೆ ಬಹಳ ಪ್ರೀತಿ. ನಾನೂ ಕೂಡ ಗಂಗಾ ಪುತ್ರ. ನನ್ನ ತಾಯಿಯ ಹೆಸರು ಗಂಗವ್ವ ನಾನೂ ನಿಮ್ಮವನೇ. ಈ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಈ ಸಮಾಜಕ್ಕೆ ನ್ಯಾಯ. ಕೊಡಿಸುವಲ್ಲಿ ಅವರ ಪಾತ್ರ ಇದೆ. ಮುಂದೆಯೂ ಪೂಜ್ಯರ ಪಾತ್ರ ದೊಡ್ಡದಿದೆ. ಈ ಮಠಕ್ಕೆ ನನ್ನಿಂದ ಬಹಳ ಸಹಾಯವಾಗಿದೆ ಎಂದು ಸ್ವಾಮೀಜಿ ಹೇಳುತ್ತಿದ್ದರು. ಅದು ನನ್ನದಲ್ಲ, ಜನರ ದುಡ್ಡನ್ನು ಜನರಿಗೆ ಕೊಟ್ಟಿದ್ದೇನೆ. ಗಂಗಾ ಪುತ್ರರ ಸೇವೆ ಮಾಡುವ ಅವಕಾಶ ಆ ಭಗವಂತ, ಅಂಬಿಗರ ಚೌಡಯ್ಯ ನನಗೆ ಕೊಟ್ಟಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.ಜ್ಞಾನ, ಧ್ಯಾನ ಮುಖ್ಯ: ಬದುಕಿನಲ್ಲಿ ಧ್ಯಾನ ಮತ್ತು ಜ್ಞಾನ ಎರಡೂ ಮುಖ್ಯ ತಾವು ವಿದ್ಯಾಭ್ಯಾಸದಲ್ಲಿ ಬಹಳಷ್ಟು ಹಿಂದೆ ಉಳಿದಿದ್ದೀರಿ. ನಿಮಗೆ ಭೂಮಿ ಇಲ್ಲ. ಆಧುನಿಕ ಪೈಪೋಟಿಯ ಕಾಲದಲ್ಲಿ ಶಿಕ್ಷಣ ಬಹಳ ಮುಖ್ಯ ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನ. ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳುತ್ತಿದ್ದರು. ಅಲೆಗ್ಸಾಂಡರ್ ಜಗತ್ತಿಗೆ ಚಕ್ರವರ್ತಿ ಆಗಬೇಕೆಂದು ಭಾರತದ ವಿರುದ್ಧ ದಾಳಿ ಮಾಡಿದ. ಆದರೆ, ಆಗಲಿಲ್ಲ. ಮುಂದೆ ದುಡ್ಡಿದ್ದವರು ಬ್ರಿಟಿಷರು ಜಗತ್ತು ಆಳಿದರು. ಇವತ್ತು ಇಪ್ಪತ್ತೊಂದನೇ ಶತಮಾನ ಜ್ಞಾನದ ಶತಮಾನ, ಇದನ್ನು ಅರ್ಥ ಮಾಡಿಕೊಂಡು ತಾವು ಮುಂದೆ ಬರಬೇಕು. ನಾನು ಗಮನಿಸಿದ್ದೇನೆ. ಗಂಗಾಮತಸ್ಥ ಮಕ್ಕಳು ಬಹಳ ಬುದ್ಧಿವಂತರಿದ್ದಾರೆ. ಅವರ ಬಡತನ ಬುದ್ಧಿವಂತಿಕೆಯನ್ನು ಕೆಳಗೆ ಇಳಿಸಬಾರದು, ಅವರಿಗೆ ಅವಕಾಶ ಕೊಡಬೇಕು. ಇದಕ್ಕೆ ಶ್ರೀಮಠ ಸಮಾಜ ಗಮನ ಕೊಡಬೇಕು. ಬುದ್ಧಿವಂತರಿಗೆ ಅವಕಾಶ ಕೊಟ್ಟರೆ ಆ ಸಮಾಜ ಮತ್ತು ದೇಶ ಉದ್ದಾರ ಆಗುತ್ತದೆ. ದುಡಿದ್ದವರು ಮತ್ತು ಮೇಲ್ವರ್ಗದವರಿಗೆ ಮಾತ್ರ ಜ್ಞಾನ ಸಿಗುತ್ತಿದೆ. ತುಳಿತಕ್ಕೊಳಗಾದ, ದಲಿತ ಕುಟುಂಬದಿಂದ ಬಂದವರಿಗೆ ಜ್ಞಾನ ಸಿಗದಿದ್ದರೆ ಉದ್ಧಾರ ಆಗಲು ಸಾಧ್ಯವಿಲ್ಲ. ಈ ಸಮಾಜ ಜ್ಞಾನ ಮತ್ತು ಕಾಯಕಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ನಿಜಶರಣ ಅಂಬಿಗಚೌಡಯ್ಯನವರ ಗುರುಪೀಠ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಶಿರಹಟ್ಟಿ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಪ್ರಮೋದ ಮಧ್ವರಾಜ, ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಕೃಷ್ಣಾ ನಾಯಕ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಸೇರಿದಂತೆ ಹಲವಾರು ಪ್ರಮುಖರು ಇದ್ದರು.