ದಕ್ಷಿಣಕಾಶಿ ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ, ಶ್ರೀ ಗಂಗಾಧರೇಶ್ವರ ಸ್ವಾಮಿ ಹೊನ್ನಾದೇವಿ ಬ್ರಹ್ಮರಥೋತ್ಸವದ ಎರಡನೇ ದಿನದಲ್ಲಿ ನಡೆಯುವ ಸಿಂಹವಾಹನೋತ್ಸವ ಮತ್ತು ಕೀಲು ಕುದುರೆ ಉತ್ಸವ ವೈಭವಯುತವಾಗಿ ಶನಿವಾರ ರಾತ್ರಿ ಮುಕ್ತಾಯವಾಯಿತು.

ದಾಬಸ್‍ಪೇಟೆ: ದಕ್ಷಿಣಕಾಶಿ ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ, ಶ್ರೀ ಗಂಗಾಧರೇಶ್ವರ ಸ್ವಾಮಿ ಹೊನ್ನಾದೇವಿ ಬ್ರಹ್ಮರಥೋತ್ಸವದ ಎರಡನೇ ದಿನದಲ್ಲಿ ನಡೆಯುವ ಸಿಂಹವಾಹನೋತ್ಸವ ಮತ್ತು ಕೀಲು ಕುದುರೆ ಉತ್ಸವ ವೈಭವಯುತವಾಗಿ ಶನಿವಾರ ರಾತ್ರಿ ಮುಕ್ತಾಯವಾಯಿತು.

ಐತಿಹಾಸಿಕವಾಗಿರುವ ಈ ಉತ್ಸವ, ಎಡೇಹಳ್ಳಿ ಗಂಗಣ್ಣನವರ ಕುಟುಂಬದವರ ವಾನ ಎಂದು ಜನಮಾನಸದಲ್ಲಿ ಪ್ರಸಿದ್ಧಿಯಾಗಿದೆ. ಶನಿವಾರ ಸಂಜೆ 8 ಗಂಟೆಯಿಂದ ರಸಸಂಜೆ ಪ್ರಾರಂಭವಾಗಿ ರಾತ್ರಿ 11.30ಕ್ಕೆ ವಿಶೇಷವಾದ ಸಂಗೀತ ಹೂವಿನ ಪಲ್ಲಕ್ಕಿಯಲ್ಲಿ ಶ್ರೀ ಹೊನ್ನಾದೇವಿ ಹಾಗೂ ಶ್ರೀ ಗಂಗಾಧರೇಶ್ವರ ಉತ್ಸವ ಮೂರ್ತಿಗಳ ಮೆರವಣಿಗೆಯು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಾ ಭಕ್ತಾದಿಗಳ ನಡುವೆ ರಾತ್ರಿ ಶಿವಗಂಗೆಯ ರಾಜಬೀದಿಯಲ್ಲಿ ನಡೆಯಿತು.

ತುಮಕೂರಿನ ಸಂಗೀತ ಮೆಲೋಡಿಸ್ ತಂಡದವರಿಂದ ಸಂಗೀತ ರಸಸಂಜೆ(ಆರ್ಕೆಸ್ಟ್ರಾ) ಕಾರ್ಯಕ್ರಮ, ಹೂವಿನ ಅಲಂಕಾರ, ಬಾಣ ಬಿರುಸು, ಮದ್ದಿನಮರ, ವಿದ್ಯುತ್ ದೀಪಾಲಂಕಾರ, ವೀರಗಾಸೆ, ಕೀಲು ಕುದುರೆ ನೃತ್ಯ, ನಾದಸ್ವರ, ತಮಟೆ ವಾಧ್ಯ, ಜೋಕ್‍ಫಾಲ್ಸ್ ಹಾಗೂ ಇನ್ನೂ ವಿವಿಧ ಔಟುಗಳನ್ನು ಸುಡುವಿಕೆ ನಡೆದವು.

ಟಿಎಪಿಸಿಎಂಎಸ್ ನಿರ್ದೇಶಕ ಶಶಿಧರ್ ಮಾತನಾಡಿ, ನಮ್ಮ ಗಂಗಣ್ಣನವರ ಕುಟುಂಬಸ್ಥರಿಂದ ಕಳೆದ ನೂರಾರು ವರ್ಷಗಳಿಂದ ಸಂಪ್ರದಾಯದಂತೆ ವಾನ ನಡೆದಿದೆ, ವರ್ಣರಂಜಿತ ದೀಪಾಲಂಕಾರ ಈ ವರ್ಷದ ವಿಶೇಷವಾಗಿದ್ದು, ಸುತ್ತಮುತ್ತಲಿನ 30 ಹಳ್ಳಿಗಳಿಂದ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ ಎಂದರು.

ಆಯೋಜಕರಾದ ಎಡೇಹಳ್ಳಿ ದಿ.ಗಂಗಣ್ಣನವರ ಕುಟುಂಬದವರಾದ ಸೋಂಪುರ ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥಪ್ರಸಾದ್, ಉಮೇಶ್, ಹೊನ್ನೇನಹಳ್ಳಿ ಲೋಕೇಶ್, ಮೆಡಿಕಲ್ ಶಶಿಧರ್, ಮರಿಯಪ್ಪಗೌಡ, ರೇಣುಕೇಶ್ವರ, ನಟರಾಜು, ಕೆಂಚಪ್ಪ, ರವಿಕುಮಾರ್, ಮಾಗಡಯ್ಯ, ಜೀವನ್, ಗಂಗಾಧರಪ್ಪ, ಹರ್ಷ, ನಟರಾಜು, ಹನುಮಯ್ಯ, ಪ್ರಧಾನ ಅರ್ಚಕರಾದ ಶ್ಯಾಂಪ್ರಸಾದ್ ದೀಕ್ಷಿತ್, ನವೀನ್ ದೀಕ್ಷಿತ್, ಶ್ರೀಧರ್ ದೀಕ್ಷಿತ್, ಇನ್ನಿತರ ಗಣ್ಯರು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ನಡೆಸಿದ್ದ ದಾಬಸ್ ಪೇಟೆ ಪೊಲೀಸ್ ಸಿಬ್ಬಂದಿ, ಹಾಜರಿದ್ದರು.

ಒಂದು ವಾರಗಳ ಕಾಲ ಹೊನ್ನಾದೇವಿ ಉತ್ಸವ ನಡೆಯುತ್ತದೆ, ನಮ್ಮ ಕುಟುಂಬದ ಹಿರಿಯರಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುಂದುವರಿಸಿದ್ದೇವೆ, ಹಿಂದಿನ ಕಾಲದಿಂದಲೂ ಉತ್ಸವದ ಬಗ್ಗೆ ಶ್ರದ್ಧೆ ಹಾಗೂ ಭಕ್ತಪೂರ್ವಕವಾಗಿ ಆಚರಿಸುತ್ತಾ ಬಂದಿದ್ದು, ನಮ್ಮ ಗ್ರಾಮಸ್ಥರು ಮತ್ತು ಕುಟುಂಬದವರು ಸೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಉತ್ಸವ ನಡೆಸುತ್ತೇವೆ.

ತೀರ್ಥಪ್ರಸಾದ್, ಉತ್ಸವದ ಮುಖ್ಯ ಆಯೋಜಕರು.