ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಗಂಗಾಮತಸ್ಥರ ಸಂಘ ಪ್ರತಿಭಟನೆ

| Published : May 19 2024, 01:50 AM IST

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಗಂಗಾಮತಸ್ಥರ ಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಂಜಲಿ ಅಂಬಿಗೇರ ಹತ್ಯೆ ಘಟನೆಯನ್ನು ಖಂಡಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬ್ಯಾಡಗಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಅಂಜಲಿ ಅಂಬಿಗೇರ ಹತ್ಯೆ ಘಟನೆಯನ್ನು ಖಂಡಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪಟ್ಟಣದ ಹಳೇ ಪೊಲೀಸ್‌ ಠಾಣೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಕೋಳ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿಯನ್ನು ತಲುಪಿತು. ಈ ಸಂದರ್ಭದಲ್ಲಿ ಹತ್ಯೆಯ ಆರೋಪಿ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಸರ್ಕಾರದ ಮೌನವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ವಿಶೇಷ ಕಾನೂನು ಜಾರಿ ಮಾಡಿ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜನಾಥ ಭೋವಿ, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ನಿರಂತರವಾಗಿ ಯುವತಿಯರನ್ನೇ ಟಾರ್ಗೆಟ್ ಮಾಡಿ ಹತ್ಯೆಗಳು ನಡೆಯುತ್ತಿವೆ. ಕಾನೂನಿನ ಭಯವಿಲ್ಲದಂತಾಗಿದ್ದು, ಕೂಡಲೇ ಸರಕಾರ ವಿಶೇಷ ಕಾನೂನು ಜಾರಿಗೆ ತಂದು ಇಂತಹ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಆಗ್ರಹಿಸಿದರು.

ಎನ್‌ಕೌಂಟರ್ ಮಾಡಿ: ಶಿವಯೋಗಿ ಶಿರೂರ ಮಾತನಾಡಿ, ಕಳೆದೊಂದು ತಿಂಗಳಲ್ಲಿ ನಡೆದ 3 ಯುವತಿಯರ ಹತ್ಯೆಗಳು ರಾಜ್ಯವನ್ನೇ ಬೆಚ್ಚಿ ಬಿಳಿಸಿವೆ, ನೇಹಾ ಹಿರೇಮಠ ಹತ್ಯೆ ಜನರ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ತಲೆ ಕಡಿದು ಹತ್ಯೆ ಮಾಡಿದ ಘಟನೆ ನಡೆದಿದೆ. ಇದೀಗ ಮತ್ತೆ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯನ್ನು ಹತ್ಯೆ ಮಾಡಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸರ್ಕಾರ ಇಂತಹ ಅಪರಾಧಿಗಳನ್ನು ಜೈಲಿಗೆ ಹಾಕುವ ಬದಲು ಎನ್ ಕೌಂಟರ್ ಮಾಡುವಂತೆ ಆಗ್ರಹಿಸಿದರು.

ಜಿತೇಂದ್ರ ಸುಣಗಾರ ಮಾತನಾಡಿ, ಯುವತಿ ಅಂಜಲಿ ಅಂಬಿಗೇರ ಮನೆಗೆ ನುಗ್ಗಿ ಎಲ್ಲರ ಮುಂದೆಯೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು ನೋಡಿದರೆ ರಾಜ್ಯ ಆಗಂತುಕರ ಬೀಡಾಗುತ್ತಿದೆ. ರಾಜ್ಯದಲ್ಲಿ ಕಳೆದ ಕೆಲ ತಿಂಗಳಲ್ಲಿ ಕೊಲೆ ಹಾಗೂ ಅಪರಾಧ ಕೃತ್ಯಗಳು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇಂತಹ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಈ ವೇಳೆ ನಿಂಗಪ್ಪ ಹೆಗ್ಗಣ್ಣನವರ, ಸುರೇಶ ಹುಳಬುತ್ತಿ, ಹೊನ್ನಪ್ಪ ಸಣ್ಣಬಾರ್ಕಿ, ಸುರೇಶಪ್ಪ ಚಿಕ್ಕಬಾಸೂರ, ಶೇಖಪ್ಪ ಮೋಟೆಬೆನ್ನೂರ, ವೀರೇಶ ತರೇದಹಳ್ಳಿ, ನಿಂಗಪ್ಪ ಮಾಸಣಗಿ, ಮಾಲತೇಶ ದೇವಗಿರಿ, ಚಂದ್ರಪ್ಪ ದೊಡ್ಡಮನಿ, ಮಂಜುನಾಥ ಸುಣಗಾರ ಸೇರಿದಂತೆ ಹಲವು ಭಾಗವಹಿಸಿದ್ದರು.