ಬೈಂದೂರಿನ ಸೋಮೇಶ್ವರ ತೀರದ ನೇರಕ್ಕೆ ಸಮುದ್ರ ಮಧ್ಯದ ನಾಯ್ಕನ ಕಲ್ಲು ಪ್ರದೇಶದ ಬಳಿ ನೀರಿನಲ್ಲಿ ತೇಲುತ್ತಾ ಎಕ್ಸ್‌ಪ್ಲೋರ್‌ ಬೈಂದೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬೈಂದೂರು

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಎಕ್ಸ್‌ಪ್ಲೋರ್‌ ಬೈಂದೂರು ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಶನಿವಾರ ಈ ಯೋಜನೆಗೆ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಿದರು.

ಬೈಂದೂರಿನ ಸೋಮೇಶ್ವರ ತೀರದ ನೇರಕ್ಕೆ ಸಮುದ್ರ ಮಧ್ಯದ ನಾಯ್ಕನ ಕಲ್ಲು ಪ್ರದೇಶದ ಬಳಿ ನೀರಿನಲ್ಲಿ ತೇಲುತ್ತಾ ಎಕ್ಸ್‌ಪ್ಲೋರ್‌ ಬೈಂದೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮೃದ್ಧ ಬೈಂದೂರು ಎಂಬ ಪರಿಕಲ್ಪನೆಯಡಿಯಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತಿದ್ದು, ಕಾರ್ಯಕ್ರಮದ ಭಾಗವಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ಬೈಂದೂರಿನ ಸೌಂದರ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರೀಲ್ಸ್‌, ಫೋಟೋಗ್ರಫಿ, ಡ್ರೋನ್ ಶೂಟ್, ಲೋಗೋ ಡಿಸೈನ್ ಎಂಬ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆಕರ್ಷಕ ಬಹುಮಾನ ಕೂಡ ಪ್ರಾಯೋಜಿಸಿದ್ದಾರೆ.ಎಕ್ಸ್‌ಪ್ಲೋರ್‌ ಬೈಂದೂರು ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರವಾಸಕ್ತರು, ಪ್ರವಾಸೋದ್ಯಮಿಗಳು, ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ 83102 90427 / 86189 54293 ಸಂಪರ್ಕಿಸುವಂತೆ, contest.sb2024@gmail.com ಇ-ಮೇಲ್‌ ಮೂಲಕವೂ ಮಾಹಿತಿ ಪಡೆದುಕೊಳ್ಳುವಂತೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ತಿಳಿಸಿದ್ದಾರೆ.