ಕಾರಟಗಿ: ವೇಗವಾಗಿ ಬೆಳೆಯತ್ತಿರುವ ಕಾರಟಗಿ ಪಟ್ಟಣದಲ್ಲಿ ನಿತ್ಯ ಕಸ ವಿಲೇವಾರಿ ದೊಡ್ಡ ಸವಾಲಾಗಿತ್ತು, ಈಗ ಶೀಘ್ರವೇ ಕಸ ವಿಲೇವಾರಿ ಘಟಕ ಪ್ರಾರಂಭಿಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಮಂಜುನಾಥ ಮೇಗೂರು ಹೇಳಿದರು.
ಇಲ್ಲಿನ ಯರಡೋಣಾ ಸೀಮೆಯ ೬ ಎಕರೆ ಭೂಮಿಯಲ್ಲಿ ಸುಮಾರು ₹೧.೧೫ ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕದ ಜಮೀನಿಗೆ ಕಾಂಪೌಂಡ್ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗ ಉಸ್ತುವಾರಿ ಸಚಿವರು ವಿಶೇಷ ಆಸಕ್ತಿ ವಹಿಸಿ ಪುರಸಭೆಗೆ ಘನತ್ಯಾಜ್ಯ ವಿಲೇವಾರಿ ಘಟಕ ಮಂಜೂರು ಮಾಡಿಸಿದ್ದು, ಯರಡೋಣಾ ಸೀಮೆಯಲ್ಲಿ ಅದಕ್ಕಾಗಿ ೬ ಎಕರೆ ಭೂಮಿ ನಿಗದಿಪಡಿಸಲಾಗಿದೆ. ಮೊದಲ ಹಂತವಾಗಿ ಈ ಜಮೀನಿಗೆ ಸುಮಾರು ₹೧.೧೫ ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ. ಇನ್ನು ಸುಮಾರು ₹೧.೫೦ ಕೋಟಿ ವೆಚ್ಚದಲ್ಲಿ ಘಟಕದ ಒಳಗಡೆ ವಿವಿಧ ಕಸ ವಿಲೇವಾರಿ ಯಂತ್ರಗಳು, ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ೧೫ನೇ ಹಣಕಾಸು ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಈ ಎಲ್ಲ ಕಾಮಗಾರಿಗಳು ನಡೆಯಲಿವೆ. ಒಟ್ಟು ೬ ಎಕರೆ ಪ್ರದೇಶದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ. ಘಟಕದಿಂದ ಕಾರಟಗಿ ಪಟ್ಟಣದಲ್ಲಿ ಉದ್ಭವಿಸಿದ ಕಸ ವಿಲೇವಾರಿ ಸಮಸ್ಯೆ ನಿವಾರಣೆಯಾಗಲಿದೆ. ಮುಖ್ಯವಾಗಿ ಮಧ್ಯದಲ್ಲಿನ ಕೆರೆ ಪ್ರದೇಶದಲ್ಲಿ ಕಸವನ್ನು ತಂದು ಹಾಕುತ್ತಿದ್ದರಿಂದ ೧೨ ಮತ್ತು ೧೩ನೇ ವಾರ್ಡ್ ಜನರಿಗೆ ತೀವ್ರ ತೊಂದರೆಯಾಗಿತ್ತು. ಈ ಸಮಸ್ಯೆ ಆದಷ್ಟು ಬೇಗ ನಿವಾರಣೆಯಾಗಲಿದೆ ಎಂದರು.
ಪುರಸಭೆ ಸದಸ್ಯರಾದ ಎಚ್. ಈಶಪ್ಪ, ಹಿರೇಬಸ್ಸಪ್ಪ ಸಜ್ಜನ್, ದೊಡ್ಡಬಸವರಾಜ ಬೂದಿ, ವೀರೇಶ ಗದ್ದಿ, ಸಿದ್ದಪ್ಪ ಬೇವಿನಾಳ, ಶೇಖರಪ್ಪ ಗ್ಯಾರೇಜ್, ಪ್ರಮುಖರಾದ ಚೆನ್ನಬಸಪ್ಪ ಸುಂಕದ್, ರಾಜಶೇಖರ ಆನೆಹೊಸೂರು, ಜಿ. ರಾಜು ದೇವಿಕ್ಯಾಂಪ್, ಮಹೇಶ ಕಂದಗಲ್, ಶರಣಪ್ಪ ಪರಕಿ, ದೇವಪ್ಪ ಭಾವಿಕಟ್ಟಿ, ಶರಣಯ್ಯಸ್ವಾಮಿ ಯರಡೋಣಾ, ಟಿವಿಎಸ್ ವೀರೇಶ, ಸಾಗರ ಕುಲಕರ್ಣಿ, ರಮೇಶ ಕೋಟ್ಯಾಳ, ವೀರೇಶ ಬೇವಿನಾಳ ಇದ್ದರು.