ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉತ್ಪಾದನಾ ಘಟಕದಲ್ಲಿ ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸುವ ಅಕ್ಕಿ ಬೇಳೆ ಸೇರಿ ವಿವಿಧ ಆಹಾರ ಪದಾರ್ಥದಲ್ಲಿ ಹುಳು ಮತ್ತು ಕಸ ಪತ್ತೆಯಾಗಿದೆ.
ಬೆಂಗಳೂರು ನಗರದ ವೈಟ್ ಫೀಲ್ಡ್ನಲ್ಲಿರುವ ಸರ್ಕಾರದ ಗೋದಾಮಿನಿಂದ ಅಕ್ಕಿ, ಬೇಳೆ, ಗೋಧಿ ಉತ್ಪಾದನಾ ಘಟಕಕ್ಕೆ ಸರಬರಾಜು ಆಗುತ್ತದೆ. ಚಿತ್ರದುರ್ಗ ಮೂಲದ ವಸುಧಾ ಎಂಟಪ್ರ್ರೈಸಸ್ ಸಂಸ್ಥೆಯಿಂದ ಮಿಲೆಟ್ ಮತ್ತು ಸಾಂಬಾರು ಪುಡಿ ಸೇರಿದಂತೆ ಆಹಾರ ಪದಾರ್ಥಗಳನ್ನು ಈ ಉತ್ಪಾದನಾ ಘಟಕಕ್ಕೆ ಸರಬರಾಜು ಮಾಡಲಾಗುತ್ತಿದೆ.ಈ ಬಾರಿ ಬಂದ ಲೋಡ್ನಲ್ಲಿ ಸ್ವಚ್ಛತೆಯಿಲ್ಲದ ಅಕ್ಕಿ, ಗೋಧಿ ಸರಬರಾಜಾಗಿದೆ ಎಂದು ಸ್ವತಃ ಉತ್ಪಾದನಾ ಘಟಕದ ಅಧ್ಯಕ್ಷೆ ಚಂದ್ರಕಲಾ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ನೆಲಮಂಗಲದ ತಾಲೂಕಿನ ಆಹಾರ ಸುರಕ್ಷತಾಧಿಕಾರಿ ನಾಗೇಶ್ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಂತರ ಉತ್ಪಾದನಾ ಘಟಕಕ್ಕೆ ಪದಾರ್ಥಗಳನ್ನು ಪೂರೈಸುವ ಟೆಂಡರ್ ಪಡೆದ ಖಾಸಗಿ ಏಜೆಂಟ್ಗೆ ಕರೆ ಮಾಡಿ ತರಾಟೆಗೆ ತಗೆದುಕೊಂಡರು. ಜೊತೆಗೆ ಆಹಾರ ಪದಾರ್ಥಗಳ ಪರಿಷ್ಕರಣೆ ಮತ್ತು ಗುಣಮಟ್ಟದ ಬಗ್ಗೆ ನಿಗಾ ಇಡುವಂತೆ ಅಧ್ಯಕ್ಷೆ ಚಂದ್ರಕಲಾ ಹಾಗೂ ನಿರ್ವಹಣೆಗಾರರಿಗೆ ತಾಕೀತು ಮಾಡಿದರು. ಮೇಲಧಿಕಾರಿಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನೋಟಿಸ್ ಜಾರಿ ಮಾಡಿ ಇಲಾಖೆಗೆ ಸೂಕ್ತ ಪ್ರತ್ಯುತ್ತರ ನೀಡುವಂತೆ ತಿಳಿಸಿದ್ದಾರೆ. ಅಲ್ಲದೆ, ಪ್ರಯೋಗಾಲಯಕ್ಕೆ ಕಳಿಸಲು ಅಕ್ಕಿ, ಬೇಳೆ ಸೇರಿ ಇನ್ನಿತರೆ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿದರು.ಪೋಟೋ 4 :
ಬೂದಿಹಾಲ್ ಗ್ರಾಮದ ಸಮೀಪವಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉತ್ಪಾದನಾ ಘಟಕದಲ್ಲಿ ಅಕ್ಕಿ ಬೇಳೆ ಸೇರಿ ವಿವಿಧ ಆಹಾರ ಪದಾರ್ಥದಲ್ಲಿ ಹುಳು ಮತ್ತು ಕಸ ಪತ್ತೆ.