ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ ವಿನುತಾ (೨೭) ಗ್ಯಾಸ್ ಗೀಸರ್ನ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟ ಘಟನೆ ಕಲ್ಕಂದೂರು ಗ್ರಾಮದ ಹೋಮ್ ಸ್ಟೇ ಒಂದರಲ್ಲಿ ನಡೆದಿದೆ.ಶನಿವಾರ ಸೋಮವಾರಪೇಟೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿರುವ ಸಫಾಲಿ ಹೋಮ್ ಸ್ಟೇಗೆ ಹೆಲ್ತ್ ಕೇರ್ ಸಲ್ಯೂಷನ್ ಕಂಪನಿ ವತಿಯಿಂದ ೨ ದಿನದ ಪ್ರವಾಸಕ್ಕೆ 14 ಜನರ ತಂಡ ಬಂದಿತ್ತು. ಇದರಲ್ಲಿ ವಿನುತಾ ಎಂಬವರು ಭಾನುವಾರ ಬೆಳಿಗ್ಗೆ ಸ್ನಾನಕ್ಕೆ ಹೋದ ಸಂದರ್ಭ ರೂಮಿನ ಗ್ಯಾಸ್ ಗೀಜರ್ ನ ವಿಷಾನಿಲ ಸೋರಿಕೆಯಾಗಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈಕೆ ಮೈಸೂರಿನ ಸಿದ್ದಾರ್ಥ ನಗರದ ಜಗನಾಥ್ ಮತ್ತು ರೇಣುಕಾ ದಂಪತಿಯ ಪುತ್ರಿ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಟಕಿ ಸಣ್ಣದಾಗಿದ್ದು, ಗಾಳಿಯ ಕೊರತೆಯಿಂದ ಉಸಿರು ಗಟ್ಟಿ ಯುವತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.