ಕನ್ನಡಪ್ರಭ ವಾರ್ತೆ ಬೆಂಗಳೂರು

‘ನಾವೆಲ್ಲರೂ ಎಚ್ಚರಿಸಿದಂತೆಯೇ ಕೇಂದ್ರ ಸರ್ಕಾರವು ಪಂಚರಾಜ್ಯ ಚುನಾವಣೆ ಮುಗಿದ ಬೆನ್ನಲ್ಲೇ ವಾಣಿಜ್ಯ ಎಲ್‌ಪಿಜಿ ದರ ₹993 ಹೆಚ್ಚಳ ಮಾಡಿದೆ. ಕಳೆದ 4 ತಿಂಗಳಲ್ಲಿ ಬರೋಬ್ಬರಿ ₹1,518 ಹೆಚ್ಚಳ ಮಾಡಿದ್ದು, ನರೇಂದ್ರ ಮೋದಿ ಅವರದ್ದು ಆಡಳಿತವಲ್ಲ, ಸಂಘಟಿತ ಲೂಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಾಣಿಜ್ಯ ಎಲ್‌ಪಿಜಿ ದರ ಹೆಚ್ಚಳದ ಬಗ್ಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕೇಂದ್ರ ಸರ್ಕಾರ ಚುನಾವಣೆ ಮುಗಿದ ತಕ್ಷ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದೆ. ಕಳೆದ 4 ತಿಂಗಳಲ್ಲಿ ಆರು ಬಾರಿ ಎಲ್‌ಪಿಜಿ ದರ ಹೆಚ್ಚಳ ಮಾಡಲಾಗಿದೆ. ಇದು ಕೇವಲ ಆರಂಭ ಮಾತ್ರ. ಇಂಥ ಬೆಲೆ ಏರಿಕೆಗಳ ಪರ್ವ ಮುಂದುವರೆಯಲಿದ್ದು, ಸಾಮಾನ್ಯ ನಾಗರಿಕ ಬದುಕಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ವೇಳೆ ಜನರನ್ನು ತಪ್ಪು ದಾರಿಗೆಳೆದು ಬಳಿಕ ಅವರ ಮೇಲೆ ಹೊರೆ ಹಾಕುವುದೇ ಮೋದಿ ಮಾದರಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಚಾರಕ್ಕೆ ಸೀಮಿತವಾಗಿರುವ ಇವರ ವಿದೇಶಾಂಗ ನೀತಿಯಿಂದ ನಮ್ಮ ಆರ್ಥಿಕತೆ ರಕ್ಷಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಜನಸಾಮಾನ್ಯರು ಬೆಲೆ ತೆರುವಂತಾಗಿದೆ. ಇದು ಕೇವಲ ವ್ಯಾಪಾರಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಲಿದೆ.

ಎಲ್ಲವೂ ದುಬಾರಿ:


ಹೋಟೆಲ್‌, ರೆಸ್ಟೋರೆಂಟ್‌, ಸಣ್ಣ ತಿಂಡಿ ಅಂಗಡಿಗಳು ಮತ್ತು ಕ್ಯಾಟರಿಂಗ್ ಸೇವೆಗಳ ಬೆಲೆ ಹೆಚ್ಚಳ ಆಗಲಿದೆ. ಇದರಿಂದ ದಿನನಿತ್ಯದ ಆಹಾರವೂ ದುಬಾರಿಯಾಗಲಿದೆ. ನಗರ ಕಾರ್ಮಿಕ ವರ್ಗ, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಅತ್ಯಂತ ಹೆಚ್ಚು ಹೊರೆ ಅನುಭವಿಸಲಿದ್ದಾರೆ. ಒಂದು ಕಪ್ ಚಹಾದಿಂದ ಹಿಡಿದು ಎಲ್ಲವೂ ದುಬಾರಿಯಾಗಲಿದೆ.

ಕಾರ್ಮಿಕರ ದಿನ ಮೋದಿ ಸರ್ಕಾರ ದುಡಿಯುವ ವರ್ಗಕ್ಕೆ ಬೆಲೆ ಏರಿಕೆ ಉಡುಗೊರೆ ನೀಡಿದೆ. ನೆರವಿನ ನಿರೀಕ್ಷೆಯಲ್ಲಿದ್ದ ಕಾರ್ಮಿಕ ವರ್ಗದ ಬದುಕನ್ನು ಕೇಂದ್ರ ಸರ್ಕಾರ ವ್ಯಂಗ್ಯ ಮಾಡಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.ವಾರಾಂತ್ಯದಲ್ಲಿ ಮಾತ್ರ ಹೋಟೆಲ್‌:

ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಿಸಿದ ಕೇಂದ್ರ ಸರ್ಕಾರದ ವಿರುದ್ಧ ಕೊಡಗಿನ ಹೋಟೆಲ್‌ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್‌ವೊಂದಕ್ಕೆ ಒಂದೇ ದಿನ 993 ರುಪಾಯಿ ದರ ಹೆಚ್ಚಿಸಿದ್ದು, ಇದೀಗ ಸಿಲಿಂಡರ್‌ವೊಂದಕ್ಕೆ ಬರೋಬ್ಬರಿ 3,400ಕ್ಕೂ ಹೆಚ್ಚು ಬೆಲೆ ಕೊಡಬೇಕಿದೆ. ಹೀಗಾಗಿ, ಹೋಟೆಲ್‌ ಉದ್ಯಮ ನಡೆಸುವುದೇ ದೊಡ್ಡ ಸವಾಲಾಗುತ್ತಿದೆ. ಇದೇ ರೀತಿಯಾದರೆ ಹೋಟೆಲ್‌ ಮುಚ್ಚುವ ಸ್ಥಿತಿ ಬರಬಹುದು. ಇನ್ನು ಮುಂದೆ, ವಾರಾಂತ್ಯದಲ್ಲಿ ಮಾತ್ರ ಹೋಟೆಲ್‌ ನಡೆಸಲು ನಿರ್ಧರಿಸಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ನಾವು ಸಣ್ಣ ಪುಟ್ಟ ಹೋಟೆಲ್‌ ನಡೆಸುವವರು, ಸಣ್ಣ ಪುಟ್ಟ ವ್ಯಾಪಾರ ಮಾಡುವವರು ಏನು ಮಾಡಬೇಕು ಎಂದು ಕಿಡಿ ಕಾರಿದ್ದಾರೆ.