ಸಾರಾಂಶ
ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು
ಮುಂಡಗೋಡ: ಲಿಂಗಾಯತ ಪಂಚಮಸಾಲಿ, ಮಲೆಗೌಡರು, ಗೌಳಿ ಲಿಂಗಾಯತ ಸೇರಿ ಸರ್ವ ಲಿಂಗಾಯತ ಒಳಪಂಗಡಗಳ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕೋಸ್ಕರ ಹಿಂದುಳಿದ ವರ್ಗ ಅ ಮೀಸಲಾತಿ ಬೇಕೆಂಬ ಉದ್ದೇಶದಿಂದ ನಿರಂತರ ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಗುರುವಾರ ಸಂಜೆ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಮುಂಡಗೋಡ ತಾಲೂಕು ಪಂಚಮಸಾಲಿ, ಮಲೆಗೌಡ ಹಾಗೂ ಲಿಂಗಾಯತ ಒಳಪಂಗಡಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮತ್ತೊಮ್ಮೆ ಹೋರಾಟ ಆರಂಭಿಸುವುದಕ್ಕಿಂತ ಮುಂಚೆ ಉಳವಿ ಕ್ಷೇತ್ರದಲ್ಲಿ ಜೂ.೨೩ರಂದು ಮಧ್ಯಾಹ್ನ ೩ ಗಂಟೆಗೆ ಪಂಚಮಸಾಲಿ, ಗೌಳಿ, ಮಲೆಗೌಡ ಹಾಗೂ ಲಿಂಗಾಯತ ಮೀಸಲಾತಿ ಸಂಕಲ್ಪ ಸಭೆ ನಡೆಯಲಿದೆ. ಈ ಸಭೆಗೆ ಹೆಚ್ಚಿನ ಸಂಖೆಯಲ್ಲಿ ಆಗಮಿಸುವಂತೆ ಪಂಚಮಸಾಲಿ ಮುಖಂಡರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್. ಪಾಟೀಲ್, ಬಾಬುಗೌಡ ಪಾಟೀಲ್ ವದ್ದಲ ಬನವಾಸಿ, ತಾಲೂಕಾ ವೀರಶೈವ ಲಿಂಗಾಯತ ಮಹಾಘಟಕದ ಅಧ್ಯಕ್ಷ ಬಸವರಾಜ ಪಾಟೀಲ್, ಬಿ.ಎಮ್.ಕೋಟಿ, ರಾಜು ಕುಟ್ರಿ, ಫಕ್ಕೀರಪ್ಪ ಗೌಳಿ, ರಾಮಣ್ಣ ಕುನ್ನೂರ, ಕೆಂಜೋಡಿ ಗಲಬಿ, ಬಸಪ್ಪ ಗಲಬಿ, ನಿಡಗುಂದಿ ಮುಂತಾದವರಿದ್ದರು.