ಜಿಲ್ಲೆಯಾದ್ಯಂತ ಸೆ.14ರ ಸೋಮವಾರ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ, ಬೀದಿ, ಸರ್ಕಲ್, ದೇವಸ್ಥಾನಗಳಿಗೆ ಆಗಮಿಸಲಿರುವ ಗೌರಿ ಗಣೇಶರನ್ನು ಸಂಭ್ರಮದಿಂದ ಸ್ವಾಗತಿಸಲು ವಿಶೇಷ ಮಂಟಪ, ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ತಯಾರಿ ಭರ್ಜರಿಯಾಗಿ ನಡೆದಿದೆ. ಕೇಸರಿ ಬಟ್ಟೆಗಳನ್ನು ಕಟ್ಟುವುದು ಸಹ ಗಮನ ಸೆಳೆಯುತ್ತಿದೆ. ಇನ್ನೇನು, ಗಣೇಶ ಬಂದ ದಾರಿಬಿಡಿ... ಎಂದು ಸಂಭ್ರಮದಿಂದ ಘೋಷಣೆಗಳು ಮೊಳಗುವುದೊಂದೇ ಬಾಕಿ..!

- ಜಿಲ್ಲಾದ್ಯಂತ ಹಬ್ಬದ ಸಂಭ್ರಮ । ಕಣ್ಮನ ಸೆಳೆಯುತ್ತಿವೆ ತರಾವರಿ ವಿನ್ಯಾಸ- ಬಣ್ಣಬಣ್ಣದ ವಿನಾಯಕ ಮೂರ್ತಿಗಳು - - -

ಎಂ.ಎಸ್.ಚನ್ನಬಸವ ಶೀಲವಂತ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಾದ್ಯಂತ ಸೆ.14ರ ಸೋಮವಾರ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ, ಬೀದಿ, ಸರ್ಕಲ್, ದೇವಸ್ಥಾನಗಳಿಗೆ ಆಗಮಿಸಲಿರುವ ಗೌರಿ ಗಣೇಶರನ್ನು ಸಂಭ್ರಮದಿಂದ ಸ್ವಾಗತಿಸಲು ವಿಶೇಷ ಮಂಟಪ, ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ತಯಾರಿ ಭರ್ಜರಿಯಾಗಿ ನಡೆದಿದೆ. ಕೇಸರಿ ಬಟ್ಟೆಗಳನ್ನು ಕಟ್ಟುವುದು ಸಹ ಗಮನ ಸೆಳೆಯುತ್ತಿದೆ. ಇನ್ನೇನು, ಗಣೇಶ ಬಂದ ದಾರಿಬಿಡಿ... ಎಂದು ಸಂಭ್ರಮದಿಂದ ಘೋಷಣೆಗಳು ಮೊಳಗುವುದೊಂದೇ ಬಾಕಿ..!

ಅಂದಹಾಗೆ, ಅಲ್ಲಲ್ಲಿ ಸಂಘ ಸಂಸ್ಥೆಗಳು, ದೇವಸ್ಥಾನ, ರಸ್ತೆ, ವೃತ್ತಗಳಲ್ಲಿ ದೊಡ್ಡ ದೊಡ್ಡ ಗಣಪತಿಗಳ ಪ್ರತಿಷ್ಟಾಪಿಸಲಿದ್ದು, ಕಲಾವಿದರಿಂದ ಅಂತಿಮ ಸ್ಪರ್ಶ ನಡೆಯುತ್ತಿದೆ. ಇನ್ನು ಮನೆಗಳಲ್ಲಿ ಗಣಪತಿ ತಯಾರಕರು ಕೂಡ ರಾತ್ರಿಯೆನ್ನದೇ ಅಂತಿಮ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಸಂಘ ಸಂಸ್ಥೆಯವರು ದೊಡ್ಡ ಗಣಪತಿಗಳಿಗೆ ಕಲಾವಿದರಿಗೆ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದು, ಆಗಾಗ ಬಂದು ಗಣೇಶ ಮೂರ್ತಿ ನೋಡಿಕೊಂಡು ಹೋಗುತ್ತಿದ್ದರು. ತಂತಮ್ಮ ಗಣಪತಿಗಳಿಗೆ ವಿಶೇಷವಾಗಿ ಅಲಂಕರಿಸಲು ಮುತ್ತಿನ ಸರ, ಹವಳ, ಕಿರೀಟ ಅಲಂಕಾರದ ವಸ್ತುಗಳನ್ನು ನೀಡುವ ಸಡಗರ ಕಂಡುಬಂತು.

ಈ ಬಾರಿಯ ಚೌತಿಯಲ್ಲಿ ಗೌರಿ ಹಾಗೂ ಗಣೇಶನನ್ನು ಪ್ರತಿಷ್ಠಾಪಿಸುವ ಸಮಯ ಒಂದೇ ದಿನ ಬಂದಿದೆ. ಇದರಿಂದಾಗಿ ಎಲ್ಲೆಡೆ ಹೂವು, ತಳಿರು ತೋರಣಗಳ ಅಲಂಕಾರ, ಗೌರಿಯ ಮೂರ್ತಿ ಜೊತೆಗೆ ಗಣಪತಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಸಿದ್ಧತೆ ಜೋರಾಗಿತ್ತು. ಆದಿಪರಾಶಕ್ತಿ ಗೌರಿಯನ್ನು ಆರಾಧಿಸುವ ವನಿತೆಯರು ಮುತ್ತೈದೆಯರಿಗೆ ಗೌರಿ ಬಾಗಿಣ ನೀಡುವುದು ವಾಡಿಕೆ. ವಿಳ್ಳೇದೆಲೆ, ಅಡಕೆ, ಅರಿಶಿಣ ಕೊಂಬು, ಬಳೆ, ಅರಿಶಿಣ- ಕುಂಕುಮ, ಕಾಡಿಗೆ, ಚಂದನ, ಗಂಧದ ಹುಡಿ, ತೆಂಗಿನ ಕಾಯಿ, ಪಂಚಫಲ, ವಿವಿಧ ಧಾನ್ಯಗಳು ಸೇರಿದಂತೆ ರವಿಕೆ ಕಣವನ್ನು ಮೊರದಲ್ಲಿಟ್ಟು ಬಾಗಿನ ನೀಡಲಾಗುವ ಪದ್ಧತಿಯಿದೆ. ಅನಂತರ ತವರಿಗೆ ಬಂದ ಹೆಣ್ಣುಮಗಳಿಗೆ ಮಡಿಲು ಅಕ್ಕಿ ತುಂಬಿ ಕಳುಹಿಸುವಂತೆ, ಗೌರಿ ದೇವಿಗೂ ಮಡಿಲು ಅಕ್ಕಿ ಕಟ್ಟಿ ಪೂಜಿಸಲು ಸಿದ್ಧತೆ ನಡೆದಿತ್ತು.

ಹಬ್ಬದ ಅಂಗವಾಗಿ ಗಣಪತಿಗೆ ಇಷ್ಟವಾದ ಕಡುಬು, ಮೋದಕ, ಪಂಚ ಕಜ್ಜಾಯಗಳು, ಇತರೆ ಸಿಹಿ ತಿಂಡಿಗಳ ತಯಾರಿ ಸಹಜವಾಗಿ ನಡೆದಿದೆ. ಸೋಮವಾರ ವಿಘ್ನೇಶ್ವರ ಸ್ವಾಮಿಯ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ವಿನಾಯಕನಿಗೆ ಇಷ್ಟವಾದ ಮೋದಕ, ಕಡುಬು, ಪಂಚಕಜ್ಜಾಯಗಳನ್ನು ನೈವೇದ್ಯ ಮಾಡಿ ಆರಾಧಿಸುತ್ತಾರೆ. ಒಂದು ದಿನ ಅಥವಾ 3, 5, 9, 11, 13, 21, 23 ದಿನಗಳವರೆಗೂ ಗಣೇಶನನ್ನು ಪೂಜಿಸಿ, ಬುತ್ತಿಯೊಂದಿಗೆ ಗೌರಿಮಾತೆಯೊಂದಿಗೆ ನೀರಿಗೆ ಬಿಡುವುದು ಸಂಪ್ರದಾಯ.

- - -

(ಬಾಕ್ಸ್‌)

* ಬೆಲೆ ಏರಿಕೆ ನಡೆವೆಯೂ ಖರೀದಿ ಜೋರು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿತ್ತು. ಹಬ್ಬಕ್ಕೆಂದು ಹೊಸ ಬಟ್ಟೆಯ ಖರೀದಿ ಭರ್ಜರಿಯಾಗಿದೆ. ಹೂ-ಹಣ್ಣುಗಳ ಬೆಲೆ ದುಬಾರಿಯಾಗಿದೆ. ಇನ್ನು ಮಳೆ ಅಬ್ಬರ ಇರದ ಕಾರಣ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನತೋರಣ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.

ಹೂವು-ಹಣ್ಣುಗಳ ಬೆಲೆ ಏರಿಕೆ:

ಮಲ್ಲಿಗೆ, ದುಂಡುಮಲ್ಲಿಗೆ, ಕನಕಾಂಬರಿ, ಹಳದಿ- ಬಿಳಿ ಸೇವಂತಿಗೆ ಮಾರು 1ಕ್ಕೆ 100, ಚಂಡು ಹೂ ₹30-₹50, ತುಳಸಿ, ಬಿಲ್ವ ಪತ್ರೆ ₹60, ವಿವಿಧ ಬಗೆಯ ಗುಲಾಬಿ ಕೆಜಿಗೆ ₹400, ಇನ್ನು ಹೂವಿನ ಹಾರಗಳು ₹50 ರಿಂದ ಅವುಗಳ ತೂಕ, ಚಂದಕ್ಕೆ ತಕ್ಕಂತೆ ಬೆಲೆ ಇದ್ದವು. ಗುಣಮಟ್ಟದ ಹಣ್ಣುಗಳು 1 ಕೆಜಿಗೆ ಸೇಬು ₹180, ಏಲಕ್ಕಿ ಬಾಳೆಹಣ್ಣು ₹100-₹120, ಪಚ್ಚಬಾಳೆ ₹50, ಮೋಸಂಬಿ ₹80, ಸೀತಾಫಲ ₹180, ಸಪೋಟ ₹80, ದಾಳಿಂಬೆ ₹150-₹180, ದ್ರಾಕ್ಷಿ ₹180-₹200, ಪೇರಲ ₹150, ಮರಸೇಬು ₹150 ಗಳಾಗಿದ್ದವು. ಎಲ್ಲ ಮಿಕ್ಸ್ ಹಣ್ಣು ಕೆಜಿಗೆ ₹180-₹200 ರೂ.ಇತ್ತು.

- - -

-13ಕೆಡಿವಿಜಿ32: ಗಣಪತಿ ಹಬ್ಬದ ಹಿನ್ನೆಲೆ ಭಾನುವಾರ ದಾವಣಗೆರೆ ಮಾರುಕಟ್ಟೆಯಲ್ಲಿ ಹೂ-ಹಣ್ಣು ಖರೀಸುತ್ತಿರುವ ಗ್ರಾಹಕರು.

-13ಕೆಡಿವಿಜಿ33: ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ.

-13ಕೆಡಿವಿಜಿ34, 35, 36, 37: ಪ್ರಮುಖ ಬೀದಿ, ವೃತ್ತಗಳಲ್ಲಿ ಪ್ರತಿಷ್ಠಾಪನೆಗೆ ತೆರಳಲು ಸಿದ್ಧಗೊಂಡಿರುವ ದೊಡ್ಡ ದೊಡ್ಡ ಗಣಪತಿಗಳು.

-13ಕೆಡಿವಿಜಿ38: ದಾವಣಗೆರೆಯಲ್ಲಿ ಕ್ರೇನ್‌ ಮೂಲಕ ದೊಡ್ಡ ಗಣಪತಿಯನ್ನು ಟ್ರ್ಯಾಕ್ಟರ್‌ನಲ್ಲಿ ಇರಿಸುತ್ತಿರುವುದು.