ಗೌರಿ-ಗಣೇಶ ಹಬ್ಬಕ್ಕೆ ನಗರದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ದರ ಏರಿಕೆ ನಡುವೆಯೂ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ಕನ್ನಡಪ್ರಭ ವಾರ್ತೆ ಕಮಲಾಪುರ
ಗೌರಿ-ಗಣೇಶ ಹಬ್ಬಕ್ಕೆ ನಗರದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ದರ ಏರಿಕೆ ನಡುವೆಯೂ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ಸೋಮವಾರ ಗಣೇಶ ಚತುರ್ಥಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ವಿವಿಧ ಹಳ್ಳಿಗಳಿಂದ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಗೌರಿ, ಗಣೇಶ ವಿಗ್ರಹಗಳ ಮಾರಾಟ ಮಳಿಗೆಗಳಲ್ಲಿ ಜನ ದಟ್ಟಣೆ ಕಂಡು ಬಂತು. ವಿಧ ವಿಧವಾದ ಗಣಪನನ್ನು ಖರೀದಿಸಲು ಯುವಕರು, ಸಂಘ ಸಂಸ್ಥಗಳ ಪ್ರತಿನಿಧಿಗಳ ದಂಡೆ ನೆರೆದಿತ್ತು.
ಮಾರುಕಟ್ಟೆ, ಬಸ್ ನಿಲ್ದಾಣದಿಂದ ಕಿರಣ್ ಬಜಾರ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಮಾರುಕಟ್ಟೆಯ ಪ್ರಮುಖ್ಯ ರಸ್ತೆಯಾಗಿದ್ದು ಭಾನುವಾರ ವಾರದ ಸಂತೆಯು ಕೂಡ ಜೊತೆಗೆ ಬಂದಿರುವುದರಿಂದ ಗೌರಿ ಗಣೇಶ ಹಬ್ಬದ ಸಂತೆ ಸಾರ್ವಜನಿಕರಿಗೆ ಇನ್ನಷ್ಟು ಸಂತಸ ತಂದಿದೆ.ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಇರಿಸಲಾಗಿದ್ದ ವಿವಿಧ ಗಾತ್ರಗಳ ಗಣೇಶ ಮೂರ್ತಿಗಳನ್ನು ಜನರು ಸಂಭ್ರಮದಿಂದ ಖರೀದಿಸಿದರು.
ಹೂವು–ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು. ಈ ಬಾರಿ ಮಳೆ ಕೊರತೆಯಿಂದಾಗಿ ಹೂವು, ಹಣ್ಣುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಷ್ಟಾಗಿಯೂ ಮಾರುಕಟ್ಟೆಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.ವಾಡಿಕೆಯಷ್ಟು ಮಳೆಯಾಗದ ಪರಿಣಾಮ ಈ ಬಾರಿ ಹೂವಿನ ಇಳುವರಿ ತಗ್ಗಿದೆ. ಇದರಿಂದಾಗಿ ಸೇವಂತಿಗೆ, ಮಲ್ಲಿಗೆ, ಕನಕಾಂಬರ ಮತ್ತಿತರ ಹೂವುಗಳ ಜತೆಗೆ, ಬಾಳೆಹಣ್ಣು ಸೇರಿ ವಿವಿಧ ಹಣ್ಣುಗಳ ದರವೂ ಏರಿಕೆಯಾಗಿದೆ. ಅವಧಿಯಲ್ಲಿನ ದರಕ್ಕೆ ಹೋಲಿಸಿದರೆ ಈಗ ಹೂವಿನ ದರ ಗಗನಕೇರಿದ್ದರೂ ಖರೀದಿಗೆ ಮಾತ್ರ ಸಂಭ್ರಮ ಮನೆ ಮಾಡಿದ್ದು.