ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಮೈಸೂರಿನ ಗ್ರಾಹಕರಿಗೆ ಪರಿಚಯಿಸಲು ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಂಯಕ್ತವಾಗಿ ಗೆಡ್ಡೆ ಗೆಣಸು ಮೇಳವನ್ನು ಫೆ.8 ಮತ್ತು 9 ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಏರ್ಪಡಿಸಿದೆ.ಎರಡು ದಿನಗಳ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ. ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಪರ್ಪಲ್ ಯಾಮ್, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಹರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸು ಮಾರಾಟಕ್ಕೆ ಸಿಗಲಿವೆ.
ಈ ಮೇಳವನ್ನು ಫೆ.8ರ ಬೆಳಗ್ಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಳವಾಯಿ ಉದ್ಘಾಟಿಸುವರು. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಎಂ.ಎಲ್. ನಾಗೇಶ್ ಅಧ್ಯಕ್ಷತೆ ವಹಿಸುವರು. 300 ಹೆಚ್ಚಿನ ಗೆಡ್ಡೆ ಗೆಣಸು ತಳಿಗಳ ಸಂರಕ್ಷಿಸಿರುವ ಕೇರಳದ ಎನ್.ಎಂ. ಶಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸೊಪ್ಪಿನ ಕ್ಯಾಲೆಂಡರ್ ಬಿಡುಗಡೆಯಾಗಲಿದೆ.ಫೆ.9ರ ಬೆಳಗ್ಗೆ 11ಕ್ಕೆ ರೈತರಿಗಾಗಿ ಗೆಡ್ಡೆ ಗೆಣಸು ಕೃಷಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗೆಡ್ಡೆ ಗೆಣಸಿನ ವೈವಿಧ್ಯ , ಸಾಗುವಳಿ ವಿಧಾನಗಳು, ಮೌಲ್ಯವರ್ಧನೆಯ ಅವಕಾಶಗಳು ಮತ್ತು ಮಾರುಕಟ್ಟೆಯ ಸಾಧ್ಯತೆಗಳ ಬಗ್ಗೆ ತಿಳಿಸಿ ಕೊಡಲಾಗುವುದು.
ಅಲ್ಲದೆ, ನಗರ ವಾಸಿಗಳಿಗೆ ಗೆಡ್ಡೆ ಗೆಣಸಿನ ಅಡುಗೆ ಪದ್ಧತಿಗಳನ್ನು ಪರಿಚಯಿಸಲು ಗೆಡ್ಡೆ ಗೆಣಸು ಅಡಿಗೆ ಮನೆ ತೆರೆಯಲಾಗಿದೆ. ವಿವಿಧ ಗೆಡ್ಡೆಗಳಿಂದ ಆಹಾರ ತಯಾರಿಸುವ ಪ್ರಾತ್ಯಕ್ಷತೆಯನ್ನು ತೋರಿಸಲಾಗುವುದು. ಸಿರಿಧಾನ್ಯ, ಬೇಳೆ ಕಾಳು, ಸಾವಯವ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ದೇಸಿ ಬೀಜಗಳು ಮತ್ತು ಹಣ್ಣಿನ ಗಿಡಗಳು ಮೇಳದಲ್ಲಿ ಮಾರಾಟಕ್ಕೆ ಬರಲಿವೆ. ಬಾಯಿ ಚಪ್ಪರಿಸಲು ಅಡುಗೆ ಮಳಿಗೆಗಳು ಇರಲಿವೆ.ಔಷಧಿಯಾಗಿ ಗೆಡ್ಡೆ ಗೆಣಸು ಬಳಕೆ:
ಗೆಡ್ಡೆ ಗೆಣಸು ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ. ಋಷಿ ಮುನಿಗಳು ಮತ್ತು ಆದಿವಾಸಿಗಳು ಗೆಡ್ಡೆ ಗೆಣಸು ತಿಂದು ರೋಗವಿಲ್ಲದೆ ಆರೋಗ್ಯವಂತರಾಗಿ ಜೀವಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ರಾಮಾಯಣ, ಮಹಾಭಾರತ ಮತ್ತು ವೇದ ಕಾಲೀನ ಕೃತಿಗಳಲ್ಲಿ ಗೆಡ್ಡೆ ಗೆಣಸುಗಳ ಉಲ್ಲೇಖವಿದೆ. ಆಯುರ್ವೇದ ಮತ್ತು ಜನಪದ ವೈದ್ಯದಲ್ಲಿ ಗೆಡ್ಡೆ ಗೆಣಸನ್ನು ಔಷಧಿಯಾಗಿ ಬಳಸಲಾಗುತ್ತದೆ.ಗೆಡ್ಡೆ ಗೆಣಸುಗಳು ಬರಗಾಲವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಗೆಡ್ಡೆ ಗೆಣಸುಗಳನ್ನು ಸುಲಭನಾಗಿ ಹೊಲದ ಅಂಚಿನಲ್ಲಿ ಇಲ್ಲವೇ ಬೆಳೆಯ ಸಾಲಿನ ನಡುವೆ ಬೆಳೆದುಕೊಳ್ಳಬಹುದು. ಮನೆ ಹಿತ್ತಲು ಮತ್ತು ತಾರಸಿ ತೋಟದಲ್ಲೂ ಇವನ್ನು ಬೆಳೆಸಬಹುದು. ಹತ್ತಾರು ವರ್ಷ ನೆಲದಲ್ಲೇ ಬಿಟ್ಟರೂ ಕೆಡದೆ, ಕೊಳೆಯದೆ ಉಳಿಯುತ್ತವೆ.
ಬಳ್ಳಿ ಆಲೂಗೆಡ್ಡೆ, ಹುತ್ತರಿ ಗೆಣಸು, ಪರ್ಪಲ್ ಯಾಮ್ ಬಳ್ಳಿಯಾಗಿ ಹಬ್ಬಿ ಬೆಳೆದರೆ, ಕೆಸು ಅಗಲವಾದ ಆಕರ್ಷಕ ಎಲೆಗಳನ್ನು ಹೊತ್ತು ನಿಲ್ಲುತ್ತದೆ. ಶುಂಠಿ, ಹರಿಷಿಣ, ಆರಾರೂಟ್ ಬೇರಿನ ರೂಪದಲ್ಲಿರುತ್ತವೆ. ಮಾಕಳಿ ಬೇರು ಮೂಲಿಕೆಯೂ ಹೌದು, ಬಾಯಿ ಚಪ್ಪರಿಸುವ ಉಪ್ಪಿನಕಾಯಿಯೂ ಹೌದು. ಕ್ಯಾರೆಟ್, ಬಿಟ್ ರೂಟ್, ಸಿಹಿ ಗೆಣಸು, ಮರ ಗೆಣಸು ನೆಲದೊಡಲ ಸೋಜಿಗ.ಪೋಷಕ ನಾರು ಹಾಗೂ ಶರ್ಕರ ಪಿಷ್ಟದಿಂದ ಹೇರಳವಾಗಿರುವ ಗೆಡ್ಡೆ ಗೆಣಸುಗಳು, ಶರೀರಕ್ಕೆ ಬೇಕಾದ ಚೈತನ್ಯವನ್ನು ಒದಗಿಸುತ್ತವೆ. ಇವುಗಳ ನಿರಂತರ ಬಳಕೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಚರ್ಮದ ಮೈಕಾಂತಿ ವೃದ್ಧಿಸಲು ಮತ್ತು ವಯಸ್ಸನ್ನು ನಿಧಾನಿಸಲು ಗೆಡ್ಡೆ ಗೆಣಸು ಸಹಕಾರಿ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಸಂಯುಕ್ತ ರೂಪದಲ್ಲಿದೆ. ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು.
ಕಾಡು ಪ್ರದೇಶದ ಗೆಡ್ಡೆ ಗೆಣಸು:ಮೈಸೂರು ಜಿಲ್ಲೆಯ ನಾಗರಹೊಳೆ ಕಾಡು ಪ್ರದೇಶ ಗೆಡ್ಡೆ ಗೆಣಸು ವೈವಿಧ್ಯಕ್ಕೆ ಹೆಸರುವಾಸಿ. ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ ಮತ್ತು ಇರುಳಿಗ ಸಮುದಾಯಗಳು ಗೆಡ್ಡೆ ಗೆಣಸನ್ನು ಇವತ್ತಿಗೂ ಆಹಾರವಾಗಿ ಬಳಸುತ್ತಿದ್ದಾರೆ. ಜಿಲ್ಲೆಯ ರೈತರು ಮರ ಗೆಣಸು, ಕೆಸು, ಸುವರ್ಣ ಗೆಡ್ಡೆ, ಶುಂಠಿ, ಹರಿಷಿಣ ಮತ್ತು ಸಿಹಿ ಗೆಣಸು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದ್ದಾರೆ. ನೈಸರ್ಗಿಕ ವಿಕೋಪ ಮತ್ತು ಬರಗಾಲದಲ್ಲಿ ಗೆಡ್ಡೆ ಗೆಣಸು ಜೀವ ಉಳಿಸುವ ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ವಾತಾವರಣದ ವೈಪರೀತ್ಯವಿದ್ದಾಗ ಎಲ್ಲ ಬೆಳೆಗಳು ವಿಫಲವಾದಾಗ ಗೆಡ್ಡೆ ಗೆಣಸುಗಳು ರೈತರ ಕೈಹಿಡಿಯುತ್ತವೆ, ಆದಾಯ ತರುತ್ತವೆ. ನೈಸರ್ಗಿಕವಾಗಿ ಬೆಳೆಯುವ ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಬೇಕು.
ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. 98809 08608, 63621 80741 ಸಂಪರ್ಕಿಸಬಹುದು.